ತಾಪಮಾನ ನಿಯಂತ್ರಣ : ಜಾಗತಿಕ ಪ್ರಶಂಸೆಗೆ ಪಾತ್ರವಾದ ಭಾರತ
ನವದೆಹಲಿ, ಅಕ್ಟೋಬರ್ 25 : ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂರಮೆ ಸಂಕಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಭಾರತ ಸಕಾರಾತ್ಮಕ ನಿಲುವನ್ನು ಪ್ರಕಟಿಸಿದೆ. ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದು, ಅಂತಾರಾಷ್ಟ್ರೀಯ ಸೋಲಾರ್ ಸಮ್ಮೇಳನದ ಮುಂದಾಳತ್ವ ವಹಿಸುತ್ತಿದೆ.
ಔದ್ಯೋಗಿಕ ಕ್ರಾಂತಿ ಆಗುವುದಕ್ಕಿಂತ ಮೊದಲು ಇದ್ದ ಜಾಗತಿಕ ತಾಪಮಾನದ (1.5 ಡಿಗ್ರಿ ಸೆಂಟಿಗ್ರೇಡ್) ಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, 2015ರ ಡಿಸೆಂಬರ್ ನಲ್ಲಿ ಮಹತ್ವಾಕಾಂಕ್ಷಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಪ್ರಕಾರ ಸಹಿ ಹಾಕಿದ ಎಲ್ಲ ರಾಷ್ಟ್ರಗಳು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕುಗ್ಗಿಸಲು ಸರ್ವ ಪ್ರಯತ್ನ ಮಾಡಲೇಬೇಕಿದೆ.
ಪ್ರವಾಹ ಆಯ್ತು, ಮುಂದೆ ಕಾದಿದೆ ಬಿಸಿ ಗಾಳಿಯ ಅಪಾಯ: ಜಾಗತಿಕ ತಾಪಮಾನ ವರದಿ
ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಏರಿಸುವಲ್ಲಿ ಭಾರತದ ಯೋಗದಾನವೂ ಸಾಕಷ್ಟಿದೆ. ಜಾಗತಿಕವಾಗಿ ಚೀನಾ ಶೇ.28ರಷ್ಟು ಇಂಗಾಲದ ಡೈಆಕ್ಸೈಡ್ ಕೊಡುಗೆ ನೀಡುತ್ತಿದ್ದರೆ, ಭಾರತದಲ್ಲಿ ಶೇ.6ರಷ್ಟಿದೆ. ಅಮೆರಿಕದ ಶೇ.16ರಷ್ಟು ಇಂಗಾಲದ ಡೈಆಕ್ಸೈಡನ್ನು ಉಗುಳುತ್ತಿದ್ದರೆ, ಯುರೋಪ್ ಶೇ.10ರಷ್ಟು ವಾತಾವರಣಕ್ಕೆ ಬಿಡುತ್ತಿದೆ. ಒಟ್ಟಾರೆ 10 ರಾಷ್ಟ್ರಗಳು ಈ ಅಪರಾಧದಲ್ಲಿ ಭಾರತಕ್ಕಿಂತ ಮುಂದಿವೆ.
ದೇಶದಲ್ಲಿರುವ ಒಟ್ಟಾರೆ ಅರಣ್ಯ ಸಂಪತ್ತು, ಕಾಡು ಪ್ರಾಣಿಗಳ ಸಮೀಕ್ಷೆ ಮಾಡುವುದರ ಜೊತೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ವಾತಾವರಣ ಇಲಾಖೆ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಆಡಳಿತದಲ್ಲಿ, ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವಾತಾವರಣ ಮತ್ತು ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತವಾದ ನೀತಿ ರೂಪಿಸಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಇಲಾಖೆ ರೂಪಿಸಿದೆ.
ಹವಾಮಾನ ವೈಪರೀತ್ಯ, ಮೀನುಗಾರರ ಬದುಕಿಗೇ ಲಂಗರು!
ಪರಿಸರ ಇಲಾಖೆ ರೂಪಿಸಿರುವ ಪ್ರಮುಖ ಕಾರ್ಯಕ್ರಮಗಳು : ಅರಣ್ಯದ ವಿಸ್ತೀರ್ಣ ಹೆಚ್ಚಿಸುವುದು, ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ನಿರತವಾಗಿದೆ. ಇದಕ್ಕಾಗಿ 10 ಲಕ್ಷ ಕೋಟಿ ರುಪಾಯಿಯನ್ನು ವಿನಿಯೋಗಿಸಿದ್ದು, 10 ಲಕ್ಷದಷ್ಟು ಉದ್ಯೋಗ ಕೂಡ ಸೃಷ್ಟಿಯಾಗಿದೆ. ಸ್ಟಾಂಡರ್ಡೈಸೇಷನ್, ವಿಕೇಂದ್ರೀಕರಣ, ಪಾರದರ್ಶಕತೆಯನ್ನು ಪ್ಯಾರಿಸ್ ಒಪ್ಪಂದದ ಪ್ರಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ಅರಣ್ಯದ ವಿಸ್ತೀರ್ಣ ಹೆಚ್ಚುತ್ತಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. 2015ರ ಪ್ರಕಾರ, 794,245 ಚದರ ಕಿಲೋಮೀಟರ್ ನಷ್ಟು, ಅಂದರೆ ಭಾರತದ ಶೇ.24.16ರಷ್ಟು ಭಾಗದಲ್ಲಿ ಅರಣ್ಯ ಆವರಿಸಿಕೊಂಡಿದೆ. 2013ಕ್ಕೆ ಹೋಲಿಸಿದರೆ 3,775 ಚದರ ಕಿಲೋ ಮೀಟರ್ ನಷ್ಟು ಅರಣ್ಯ ಸಂಪತ್ತು ಹೆಚ್ಚಾಗಿದೆ. ಶೇ.30ರಷ್ಟು ದೇಶದ ಉರುವಲು ಮತ್ತು ಶೇ.40ರಷ್ಟು ಹುಲ್ಲನ್ನು ಅರಣ್ಯ ಒದಗಿಸುತ್ತಿದ್ದರೂ ಅರಣ್ಯ ದೇಶದಲ್ಲಿ ಹರಡಿಕೊಳ್ಳುವುದು ಹೆಚ್ಚಾಗಿದೆ.
ಬಿಸಿಲ ಝಳ ಎದುರಿಸಲು ಜಪಾನಿಗರು ಐಡ್ಯಾ ಮಾಡ್ಯಾರ!
2016ರಲ್ಲಿ ಅಂದಿನ ಪರಿಸರ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಇತರ ರಾಷ್ಟ್ರಗಳ ಮೇಲೆ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಲು ಒತ್ತಡ ಹೇರುವ ಅಧಿಕಾರವನ್ನು ಭಾರತ ಪಡೆದಿದೆ. ಜೊತೆಗೆ, ಇತರ ರಾಷ್ಟ್ರಗಳಿಗೆ ಈ ನಿಟ್ಟಿನಲ್ಲಿ ಹಣಕಾಸು ಮತ್ತು ತಂತ್ರಜ್ಞಾನವನ್ನೂ ಭಾರತ ಒದಗಿಸುತ್ತಿದೆ.