'ಕೋವಿಡ್ ಮರಣ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಿ' : ಕೇಂದ್ರಕ್ಕೆ ಸುಪ್ರೀಂ ಸೂಚನೆ
ನವದೆಹಲಿ, ಜೂ.22: ''ಕೋವಿಡ್ ರೋಗಿಗಳ ಮರಣ ಪ್ರಮಾಣ ಪತ್ರದಲ್ಲಿ ಸಾವಿಗೆ ಬೇರೆ ಕಾರಣ ನಮೂದಿಸಿದ್ದರೆ, ಕೇಂದ್ರ ಸರ್ಕಾರ ಅಂತಹ ಪ್ರಕರಣಗಳ ಬಗ್ಗೆ ಯಾವ ನಿಲುವನ್ನು ಹೊಂದಿದೆ,'' ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೇಳಿದೆ. ಹಾಗೆಯೇ ಕೋವಿಡ್ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಲು ಸೂಚನೆ ನೀಡಿದೆ.
"ಸಾವಿಗೆ ಕಾರಣವೆಂದು ಇತರ ಕಾರಣಗಳನ್ನು ತೋರಿಸುವ ಮರಣ ಪ್ರಮಾಣಪತ್ರಗಳನ್ನು ಈಗಾಗಲೇ ನೀಡಿರುವ ಕೋವಿಡ್ ರೋಗಿಗಳಿಗೆ ಬೇರೆ ಪರಿಹಾರ ಕ್ರಮ ಏನಿದೆ," ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಆರ್. ಶಾ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಪ್ರಶ್ನಿಸಿದ್ದಾರೆ.
ಕೋವಿಡ್ನಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ಸಾಧ್ಯವಿಲ್ಲ; ಕೇಂದ್ರ
ಕೋವಿಡ್ ಸಾವುಗಳ ಪ್ರಮಾಣೀಕರಣದ ಪ್ರಕ್ರಿಯೆಯನ್ನು ಸರ್ಕಾರ ಸರಳೀಕರಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. "ರೋಗಿಯು ಆಸ್ಪತ್ರೆಯಲ್ಲಿ ಅಥವಾ ಹೊರಗಡೆ ಮರಣ ಹೊಂದಿರಲಿ ಮರಣ ಪ್ರಮಾಣ ಪತ್ರದಲ್ಲಿ ಕಾರಣ ಕೋವಿಡ್ ಎಂದು ನೀಡಬಹುದೇ," ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಇನ್ನು ಕೆಲವು ರೋಗಿಗಳಿಗೆ ವೈದ್ಯಕೀಯ ದಾಖಲೆಗಳು ಲಭಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
"ಮರಣ ಪ್ರಮಾಣಪತ್ರದಲ್ಲಿ ನಿಧನಕ್ಕೆ ಕೋವಿಡ್ ಕಾರಣವೆಂದು ಉಲ್ಲೇಖ ಮಾಡುವುದರಲ್ಲಿ ಯಾವುದೇ ತಪ್ಪಾದರೂ ಪ್ರಮಾಣೀಕರಿಸುವ ವೈದ್ಯರನ್ನು ಒಳಗೊಂಡಂತೆ ಜವಾಬ್ದಾರಿಯುತ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತದೆ," ಎಂದು ಸರ್ಕಾರದ ನಿಲುವನ್ನು ಮೆಹ್ತಾ ಪುನರುಚ್ಚರಿಸಿದರು.
ಭಾನುವಾರ ತನ್ನ ಅಫಿಡವಿಟ್ನಲ್ಲಿ ಕೇಂದ್ರವು, "ಕೋವಿಡ್ -19 ರಿಂದ ಉಂಟಾಗುವ ಯಾವುದೇ ಸಾವು ಕೋವಿಡ್ ಸಾವಿನಂತೆ ಪ್ರಮಾಣೀಕರಿಸಬೇಕಾಗಿರುತ್ತದೆ, ಹಾಗೇ ಪ್ರಮಾಣೀಕರಿಸದಿದ್ದರೆ, ಈ ಮರಣ ಪ್ರಮಾಣ ಪತ್ರ ನೀಡು ವೈದ್ಯರು ಸೇರಿದಂತೆ ಜವಾಬ್ದಾರಿಯುತರಾದ ಎಲ್ಲರಿಗೂ ದಂಡ ವಿಧಿಸಲಾಗುತ್ತದೆ," ಎಂದು ಹೇಳಿದೆ.
''ಕೊಮೊರ್ಬಿಡಿಟಿಗಳು ಸೇರಿದಂತೆ ಎಲ್ಲಾ ಕೋವಿಡ್ ರೋಗಿಗಳ ಸಾವನ್ನು ಸಾಂಕ್ರಾಮಿಕ ಸಾವು ಎಂದು ಪ್ರಮಾಣೀಕರಿಸಬೇಕಾಗಿದೆ,'' ಎಂದು ಸರ್ಕಾರ ಹೇಳಿದೆ. ''ಸಾವಿಗೆ ಸ್ಪಷ್ಟ ಪರ್ಯಾಯ ಕಾರಣವಿದ್ದಾಗ ಮಾತ್ರ ಅಂದರೆ ಉದಾಹರಣೆಗೆ, ಆಕಸ್ಮಿಕ ಆಘಾತ, ವಿಷ ಸೇವನೆ, ಈ ರೀತಿಯ ಕಾರಣವಿದ್ದರೆ ಮಾತ್ರ ಪ್ರಮಾಣ ಪತ್ರದಲ್ಲಿ ಬೇರೆ ಕಾರಣ ಉಲ್ಲೇಖಿಸಬೇಕಾಗುತ್ತದೆ,'' ಎಂದು ಸರ್ಕಾರ ತಿಳಿಸಿದೆ.
ಕೋವಿಡ್ನಿಂದ ಮರಣ ಹೊಂದಿದವರ ಮರಣ ಪ್ರಮಾಣಪತ್ರಗಳಲ್ಲಿ ಒಮ್ಮೊಮ್ಮೆ ಸಾವಿಗೆ ಕಾರಣವೇ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರಕ್ಕೆ ತಿಳಿಸಿದೆ. "ಆಸ್ಪತ್ರೆಗಳಲ್ಲಿ ಕೋವಿಡ್ನಿಂದ ಸಾಯುವ ವ್ಯಕ್ತಿಗಳ ಮರಣ ಪ್ರಮಾಣಪತ್ರಗಳು ಶ್ವಾಸಕೋಶ ಅಥವಾ ಹೃದಯ ಸಮಸ್ಯೆ ಅಥವಾ ಇನ್ನಾವುದೋ ಕಾರಣವನ್ನು ತೋರಿಸುತ್ತದೆ," ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)