ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವವರು ಗಮನಿಸಿ
ನವದೆಹಲಿ, ನವೆಂಬರ್ 22: ಸಾಮಾಜಿಕ ಜಾಲತಾಣ ಸಂಸ್ಥೆಗಳಲ್ಲಿ ಹರಿದಾಡುವ ಸುಳ್ಳು ಹಾಗೂ ಆಕ್ಷೇಪಾರ್ಹ ಮಾಹಿತಿಗಳಿಗೆ ಕಡಿವಾಣ ಹಾಕಲು ಸರ್ಕಾರ ನೂತನ ಐಟಿ ನಿಯಮವನ್ನು ಅಂತಿಮಗೊಳಿಸುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕಾನೂನು ವಿರೋಧಿ ಮಾಹಿತಿ ಅಥವಾ ವಿಷಯಗಳನ್ನು ನಿರಂತರವಾಗಿ ಗುರುತಿಸಿ ಸಾರ್ವಜನಿಕರಿಗೆ ಲಭ್ಯವಾಗದಂತೆ ಮಾಡಲು ಮತ್ತು ಅವುಗಳನ್ನು ತೆಗೆದುಹಾಕಲು ತಂತ್ರಜ್ಞಾನ ಆಧಾರಿತ ಸ್ವಯಂಚಾಲಿತ ಸಾಧನಗಳು ಅಥವಾ ಸೂಕ್ತ ಯಾಂತ್ರಿಕತೆಯನ್ನು ಅಳವಡಿಸುವುದನ್ನು ನೂತನ ನಿಯಮಾವಳಿಗಳು ಒಳಗೊಳ್ಳಲಿವೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಸಂಜಯ್ ಧೋತ್ರೆ ರಾಜ್ಯಸಭೆಗೆ ಗುರುವಾರ ಲಿಖಿತ ರೂಪದ ಪ್ರತಿಕ್ರಿಯೆಯಲ್ಲಿ ತಿಳಿಸಿದರು.
ಯೂಟ್ಯೂಬ್ ಚಾನೆಲ್ ಹೊಂದಿದ್ದೀರಾ? ಕಲಬುರಗಿ ಪೊಲೀಸರ ಪ್ರಕಟಣೆ ಗಮನಿಸಿ
ಕಳೆದ ವರ್ಷದ ಡಿಸೆಂಬರ್ನಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಸಂದೇಶ ವಾಹಕ ಆಪ್ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಅಂತಹ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಐಟಿ ನಿಯಮಗಳಿಗೆ ತಿದ್ದುಪಡಿ ತರುವ ಸಂಬಂಧ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು.
ಸಾರ್ವಜನಿಕರಿಂದ ಸಲಹೆ
ಸಚಿವಾಲಯಕ್ಕೆ ವ್ಯಕ್ತಿಗಳಿಂದ, ನಾಗರಿಕ ಸಂಸ್ಥೆಗಳಿಂದ, ಕೈಗಾರಿಕಾ ವಲಯಗಳಿಂದ ಮತ್ತು ಸಂಘ ಸಂಸ್ಥೆಗಳಿಂದ 171 ಕಾಮೆಂಟ್ಗಳು ಮತ್ತು 80 ಪ್ರತಿ ಕಾಮೆಂಟ್ಗಳು ಬಂದಿದ್ದವು. ಈ ಕಾಮೆಂಟ್ಗಳನ್ನು ವಿಶ್ಲೇಷಣೆಗೊಳಪಡಿಸಿ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಧೋತ್ರೆ ತಿಳಿಸಿದರು.
ಬಳಕೆದಾರರಿಗೆ ನಿಯಮದ ಮಾಹಿತಿ
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000ದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮಧ್ಯವರ್ತಿಗಳೆಂದು ವಿವರಿಸಲಾಗಿದೆ. ಐಟಿ ನಿಯಮಾವಳಿಗಳಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಅಂಶಗಳನ್ನು ಅನುಸರಿಸಲೇಬೇಕಾಗುತ್ತದೆ. ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳಲ್ಲಿನ ಬಳಕೆದಾರರ ಒಪ್ಪಂದ ಮತ್ತು ಖಾಸಗಿತನ ನಿಯಮಗಳಿಗೆ ಹಾಗೂ ನಿಯಮ ಮತ್ತು ನಿಯಂತ್ರಣಗಳಿಗೆ ಬದ್ಧರಾಗಿರುವಂತೆ ನಿಯಮಿತವಾಗಿ ಬಳಕೆದಾರರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
320 ಕೋಟಿ ನಕಲಿ ಖಾತೆಗಳನ್ನು ಕಿತ್ತುಹಾಕಿದ ಫೇಸ್ಬುಕ್
ಮೂಲಕರ್ತನ ಪತ್ತೆ
ಇದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹಾಗೂ ಕಾನೂನು ವಿರೋಧಿ ಸುದ್ದಿಗಳನ್ನು ಸೃಷ್ಟಿಸಿದ ಮೂಲಕರ್ತೃವನ್ನು ಪತ್ತೆಹಚ್ಚುವುದು, ಆಕ್ಷೇಪಾರ್ಹ ವಿಷಯದ ಬಗ್ಗೆ ನ್ಯಾಯಾಲಯದ ಆದೇಶ ಬಂದ ಬಳಿಕ ಅಥವಾ ಸೂಕ್ತ ಸರ್ಕಾರಿ ಅಧಿಕಾರಿಗಳು ಅದನ್ನು ಗ್ರಹಿಸಿದರೆ 24 ಗಂಟೆಯ ಒಳಗೆ ಅದನ್ನು ತೆಗೆದುಹಾಕುವ ಬಗ್ಗೆ ಸಹ ಪ್ರಸ್ತಾಪಿಸಲಾಗಿದೆ.
ವಿರೋಧಿಸಿದ್ದ ವಾಟ್ಸ್ಆಪ್
ಮೆಸೇಜಿಂಗ್ ಆಪ್ ದಿಗ್ಗಜ ವಾಟ್ಸ್ಆಪ್, ಸಂದೇಶ ಪತ್ತೆಹಚ್ಚುವ ವಿಚಾರದಲ್ಲಿ ಸಹಕಾರ ನೀಡದಕ್ಕಾಗಿ ಸರ್ಕಾರದ ಆಕ್ಷೇಪಕ್ಕೆ ಒಳಗಾಗಿತ್ತು. ಅಪಾಯಕಾರಿ ಸಂದೇಶಗಳ ಸೃಷ್ಟಿಕರ್ತರ ಮಾಹಿತಿ ಹೊರತೆಗೆಯಲು ಮಾರ್ಗಗಳನ್ನು ಕಂಡುಕೊಳ್ಳುವಂತೆ ಸರ್ಕಾರದ ಸೂಚನೆಗೆ, ಫೇಸ್ಬುಕ್ ಒಡೆತನದ ವಾಟ್ಸ್ಆಪ್ ಖಾಸಗಿತನಕ್ಕೆ ಧಕ್ಕೆಯುಂಟಾಗುವ ಕಳವಳ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿತ್ತು.
ಫೇಸ್ಬುಕ್ ಖಾತೆ ಜೊತೆ ಆಧಾರ್ ಜೋಡಣೆ ನಿಜವೇ? ಸರ್ಕಾರ ಹೇಳಿದ್ದೇನು?
ಭಾರತದಲ್ಲಿ ಕಚೇರಿ ತೆರೆಯಬೇಕು
ಪ್ರಸ್ತಾಪಿತ ಸಲಹೆಗಳ ಪ್ರಕಾರ 50 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ಪ್ರಮುಖ ಮಧ್ಯವರ್ತಿ ಮಾಧ್ಯಮಗಳು ಭಾರತದಲ್ಲಿ ಕಚೇರಿಯನ್ನು ತೆರೆದು ಕಾನೂನು ಜಾರಿ ಸಂಸ್ಥೆಗಳ ಸಂಪರ್ಕಾಧಿಕಾರಿಗಳೊಂದಿಗೆ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು.
ಅಲ್ಲದೆ, ಅಂತಹ ವೇದಿಕೆಗಳು ಕಾನೂನುಬಾಹಿರ ಸಂಗತಿಗಳು, ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಿ ಸ್ವಯಂಚಾಲಿತವಾಗಿ ಅವುಗಳನ್ನು ತೆಗೆದುಹಾಕಲು ಅನುಕೂಲವಾಗುವಂತೆ ಸೂಕ್ತ ತಂತ್ರಜ್ಞಾನಗಳನ್ನು ಅಳವಡಿಸಬೇಕು ಎಂದೂ ಸೂಚಿಸಲಾಗಿದೆ.