ಜನವರಿ 13ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ
ನವದೆಹಲಿ, ಜನವರಿ 12: ಒಮಾನ್ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಭಾರತ ಸರ್ಕಾರವು ಒಂದು ದಿನದ ಶೋಕಾಚರಣೆ ಘೋಷಿಸಿದೆ.
"ಒಮಾನ್ ನ ದೊರೆ ಜನವರಿ 10ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಅವರ ಗೌರವಾರ್ಥವಾಗಿ ಜನವರಿ 13ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ. ಭಾರತದೆಲ್ಲೆಡೆ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸಲಾಗುವುದು ಹಾಗೂ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ'' ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.
5 ದಶಕ ಆಡಳಿತ ನಡೆಸಿದ ಒಮನ್ ಸುಲ್ತಾನ ನಿಧನ
ಈ ಕುರಿತಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಕಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ರಾಜರಲ್ಲಿ ಒಬ್ಬರಾದ ಒಮನ್ ಅರಸ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಲು ದೇಶದ ಉನ್ನತ ಸೇನಾ ಸಮಿತಿ ಪ್ರಕ್ರಿಯೆ ಆರಂಭಿಸಿದೆ.
ಖಾಬೂಸ್ ಅವರಿಗೆ ಮಕ್ಕಳಿಲ್ಲ. ಅವರು ತಮ್ಮ ಉತ್ತರಾಧಿಕಾರಿ ಯಾರೆಂದು ಸಾರ್ವಜನಿಕವಾಗಿ ಘೋಷಣೆ ಕೂಡ ಮಾಡಿರಲಿಲ್ಲ. 1996ರ ಒಮನ್ ಕಾನೂನಿನ ಪ್ರಕಾರ ಆಡಳಿತಾರೂಢ ಕುಟುಂಬವು ಸಿಂಹಾಸನವು ತೆರವಾದ ಮೂರು ದಿನಗಳ ಒಳಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತದೆ
ಒಮ್ಮತಾಭಿಪ್ರಾಯದಿಂದ ಆಡಳಿತಾಧಿಕಾರಿಯ ಆಯ್ಕೆ ಮಾಡುವಲ್ಲಿ ವಿಫಲವಾದರೆ ಸೇನೆ ಮತ್ತು ಭದ್ರತಾ ಅಧಿಕಾರಿಗಳು, ಸುಪ್ರೀಂಕೋರ್ಟ್ ಮುಖ್ಯಸ್ಥರು ಹಾಗೂ ಎರಡು ಸಲಹಾ ಸಭೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯು, ಸುಲ್ತಾನ್ ಮುಚ್ಚಿದ ಲಕೋಟೆಯಲ್ಲಿ ರಹಸ್ಯವಾಗಿ ಬರೆದಿಟ್ಟಿರುವ ಹೆಸರಿನ ವ್ಯಕ್ತಿಯನ್ನು ಅಧಿಕಾರದಲ್ಲಿ ಇರಿಸುತ್ತವೆ.
ಸುಲ್ತಾನ್ನ ಮೂವರು ಸಂಬಂಧಿಗಳಾದ ಅಸ್ಸಾದ್, ಶಿಹಾಬ್ ಮತ್ತು ಹೈಥಮ್ ಬಿನ್ ತಾರೀಖ್ ಅಲ್ ಸೈಯದ್ ಅವರಲ್ಲಿ ಒಬ್ಬರು ಈ ಪಟ್ಟಕ್ಕೆ ಏರುವ ಸಾಧ್ಯತೆ ಇದೆ.