'ನಿಮ್ಮ ಕಾಳಜಿ ನೀವೇ ವಹಿಸಿ; ಸರ್ಕಾರ ವ್ಯಾಪಾರದಲ್ಲಿ ಬ್ಯುಸಿ ಆಗಿದೆ'
ನವದೆಹಲಿ, ಆಗಸ್ಟ್ 26: 'ಕೊರೊನಾ ಸೋಂಕಿನಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಭಾರತ ಸರ್ಕಾರ ವ್ಯಾಪಾರದಲ್ಲಿ ಕಾರ್ಯನಿರತವಾಗಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, 'ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ಆತಂಕಕಾರಿಯಾಗಿವೆ. ಮೂರನೇ ಅಲೆ ಎಚ್ಚರಿಕೆಯ ಕಾರಣವಾಗಿ ತುರ್ತಾಗಿ ಲಸಿಕಾ ಕಾರ್ಯಕ್ರಮ ನಡೆಯಬೇಕಿದೆ. ಆದರೆ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕಿದೆ. ಏಕೆಂದರೆ ಕೇಂದ್ರ ಸರ್ಕಾರ ವ್ಯಾಪಾರ ವಹಿವಾಟಿನಲ್ಲಿ ಕಾರ್ಯನಿರತವಾಗಿದೆ' ಎಂದು ರಾಷ್ಟ್ರೀಯ ಸ್ವತ್ತುಗಳ ಮಾರಾಟದ ಕುರಿತು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ.
ಆತಂಕ ತಂದಿರುವ ಕೊರೊನಾ ಪರಿಸ್ಥಿತಿ ಹಾಗೂ ಲಸಿಕೆ ನೀಡುವ ಕುರಿತು ಸರ್ಕಾರ ಯೋಚಿಸುತ್ತಿಲ್ಲ. ದೇಶದ ಆಸ್ತಿಯನ್ನು ಮಾರಾಟ ಮಾಡುವುದರತ್ತ ಯೋಚನೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೇಂದ್ರದಿಂದ ಖಾಸಗೀಕರಣದ ಹೆಸರಿನಲ್ಲಿ ದೇಶದ ಆಸ್ತಿಗಳ ಮಾರಾಟ
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಕಾಯಗಳ ಆಸ್ತಿ ನಗದೀಕರಣ ಪೈಪ್ಲೈನ್ಗೆ ಚಾಲನೆ ನೀಡಿದ್ದರು.
ರಾಷ್ಟ್ರೀಯ ಸ್ವತ್ತುಗಳ ಮಾರಾಟ ಸಂಬಂಧ ಮಂಗಳವಾರ ರಾಹುಲ್ ಗಾಂಧಿ ಟೀಕೆ ಮಾಡಿದ್ದರು. ಭಾರತದಲ್ಲಿ ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಎಲ್ಲ ಆಸ್ತಿಗಳನ್ನು ಮತ್ತು ಪ್ರಮುಖ ವಲಯಗಳನ್ನು ಹಣ ಸಂಪಾದನೆಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.
ಕಾಂಗ್ರೆಸ್ಗೆ ಮತ್ತೆ ಬಂಡಾಯಗಾರರ ಕಾಟ: ಎಚ್ಚರ ತಪ್ಪಿದರೆ 'ಕೈ' ಜಾರೀತು ಆಡಳಿತ
ಭಾರತದಲ್ಲಿ 70 ವರ್ಷಗಳಿಂದ ಏನೂ ಆಗಿಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಈಗ ಇಷ್ಟು ವರ್ಷಗಳಲ್ಲಿ ಸೃಷ್ಟಿಸಿದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಖಾಸಗೀಕರಣ ಯೋಜನೆಯು ಏಕಸ್ವಾಮ್ಯವನ್ನು ಸೃಷ್ಟಿಸುವ ಮತ್ತು ಉದ್ಯೋಗ ಪ್ರಮಾಣವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ ಎಂದು ದೂಷಿಸಿದ್ದರು.
'ಖಾಸಗೀಕರಣವನ್ನು ನಾನು ವಿರೋಧಿಸುವುದಿಲ್ಲ. ನಮ್ಮ ಸರ್ಕಾರದ (ಯುಪಿಎ ಸರ್ಕಾರ) ಖಾಸಗೀಕರಣ ತರ್ಕಬದ್ಧವಾಗಿತ್ತು. ಅವಶ್ಯಕವೆನಿಸಿರುವ ರೈಲ್ವೆಯಂಥ ಕ್ಷೇತ್ರವನ್ನು ಖಾಸಗೀಕರಣ ಮಾಡಿರಲಿಲ್ಲ. ಆದರೆ ಈಗ ಖಾಸಗೀಕರಣ ಯೋಜನೆ ಏಕಸ್ವಾಮ್ಯ ಸೃಷ್ಟಿಸುವಂತೆ ಕಾಣುತ್ತಿದೆ. ಪ್ರಧಾನಿ ಮೋದಿ ಭಾರತದ ಕಿರೀಟವನ್ನು ಮಾರಾಟ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಗುರುವಾರ ಮತ್ತೆ ಈ ವಿಷಯವನ್ನು ಸದ್ಯದ ಕೊರೊನಾ ಪರಿಸ್ಥಿತಿಯೊಂದಿಗೆ ಸಮೀಕರಿಸಿ ಟ್ವೀಟ್ ಮಾಡಿದ್ದಾರೆ.
Rising #COVID numbers are worrying. Vaccination must pick up pace to avoid serious outcomes in the next wave.
— Rahul Gandhi (@RahulGandhi) August 26, 2021
Please take care of yourselves because GOI is busy with sales.
ಭಾರತದಲ್ಲಿ ಗುರುವಾರದ ಕೊರೊನಾ ಪ್ರಕರಣಗಳು: ಭಾರತದಲ್ಲಿ ಗುರುವಾರ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 46,164 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಒಂದು ದಿನದಲ್ಲಿ 607 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟಾರೆ ಸೋಂಕಿನ ಪ್ರಮಾಣ 3,25,58,530ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಮರಣ ಸಂಖ್ಯೆ 4,36,365 ಆಗಿದೆ.