'ಇದು ಅಕ್ಷಮ್ಯ': ವಾಹನ ತಯಾರಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ
ನವದೆಹಲಿ, ಫೆಬ್ರವರಿ 9: ಆಟೊಮೊಬೈಲ್ ತಯಾರಕರು ಭಾರತದಲ್ಲಿ ಸುರಕ್ಷತೆಯ ಗುಣಮಟ್ಟಗಳನ್ನು ಉದ್ದೇಶಪೂರ್ವಕವಾಗಿ ಕುಗ್ಗಿಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇಂತಹ ಅಕ್ಷಮ್ಯ ಅಭ್ಯಾಸವನ್ನು ನಿಲ್ಲಿಸುವಂತೆ ಕಂಪೆನಿಗಳಿಗೆ ತಾಕೀತು ಮಾಡಿದೆ.
ಆಟೊಮೊಬೈಲ್ ಉದ್ಯಮ ಸಂಘಟನೆ ಸಿಯಾಮ್ ಆಯೋಜಿಸಿದ್ದ ರಸ್ತೆ ಸುರಕ್ಷತೆಯನ್ನು ವೃದ್ಧಿಸುವ ಸಲುವಾಗಿ ವಾಹನ ಸ್ಥಳದ ಪತ್ತೆ ಸಾಧನಗಳ ಜಾರಿ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ, ಕೆಲವೇ ಕೆಲವು ಕಂಪೆನಿಗಳು ವಾಹನ ಸುರಕ್ಷತಾ ಮಾನದಂಡ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ ಹಾಗೂ ಇದನ್ನು ಕೂಡ ಅತ್ಯಧಿಕ ಬೆಲೆಯ ಮಾಡೆಲ್ ವಾಹನಗಳಲ್ಲಿ ಮಾತ್ರ ಅಳವಡಿಸುತ್ತಿವೆ ಎಂದು ಹೇಳಿದರು.
ಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆ
'ಭಾರತದಲ್ಲಿನ ಕೆಲವು ಕಂಪೆನಿಗಳು ಉದ್ದೇಶಪೂರ್ವಕವಾಗಿಯೇ ಆಟೊ ಉತ್ಪಾದನೆ ಸುರಕ್ಷತಾ ಗುಣಮಟ್ಟಗಳನ್ನು ತಗ್ಗಿಸಿವೆ ಎಂಬ ವರದಿಗಳಿಂದ ನನಗೆ ಆಘಾತವಾಗಿದೆ. ಈ ಅಭ್ಯಾಸವನ್ನು ನಿಲ್ಲಿಸಬೇಕಾದ ಅಗತ್ಯವಿದೆ' ಎಂದು ಹೇಳಿದರು. ಮುಂದೆ ಓದಿ.
ಕೆಳದರ್ಜೆಯ ಗುಣಮಟ್ಟ
'ರಸ್ತೆ ಸುರಕ್ಷತೆಯಲ್ಲಿ ವಾಹನ ತಯಾರಕರು ಅತಿ ಮಹತ್ವದ ಪಾತ್ರ ವಹಿಸುತ್ತಾರೆ. ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ವಾಹನಗಳನ್ನು ನೀಡುವ ಯಾವುದೇ ಪ್ರಯತ್ನವನ್ನು ಆಟೊ ಉತ್ಪಾದಕರು ಕೈಬಿಡುವಂತಿಲ್ಲ. ಭಾರತದಲ್ಲಿ ಮಾರಾಟ ಮಾಡುವಾಗ ಕೆಲವು ವಾಹನಗಳ ಸುರಕ್ಷತೆ ಗುಣಮಟ್ಟವನ್ನು ಕೆಳ ದರ್ಜೆಗೆ ಇಳಿಸುವುದು ಅಕ್ಷಮ್ಯ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಳೇ ವಾಹನ ಗುಜರಿಗೆ ಹಾಕಿ ಹೊಸತು ಕೊಳ್ಳುವವರಿಗೆ ಕೊಡುಗೆ?
ದುಬಾರಿ ವಾಹನಗಳಲ್ಲಿ ಮಾತ್ರ ಬಳಕೆ
'ಹಾಗೆಯೇ ಕೆಲವೇ ಕೆಲವು ವಾಹನ ತಯಾರಕರು ಸುರಕ್ಷತೆ ರೇಟಿಂಗ್ ವ್ಯವಸ್ಥೆಯನ್ನು ಹೊಂದಿದ್ದಾರೆ. ಅದರಲ್ಲಿಯೂ ಅವರು ಅತ್ಯಧಿಕ ಗುಣಮಟ್ಟದ ದುಬಾರಿ ಮಾಡೆಲ್ ವಾಹನಗಳಲ್ಲಿ ಮಾತ್ರ ಬಳಸುತ್ತಿದ್ದಾರೆ. ಇದು ಕೂಡ ಆತಂಕಕಾರಿಯಾಗಿದೆ' ಎಂದರು.
ಗ್ಲೋಬಲ್ ಎನ್ಸಿಎಪಿ ಪರೀಕ್ಷೆ
ಭಾರತದಲ್ಲಿ ಸುರಕ್ಷಿತ ಕಾರ್ಗಳ ಕುರಿತಾದ ತನ್ನ ಆಂದೋಲನದ ವೇಳೆ ಭಾರತದಲ್ಲಿ ಮಾರಾಟವಾಗುವ ಕೆಲವು ಮಾಡೆಲ್ಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ್ದ ವಾಹನ ಸುರಕ್ಷತಾ ಸಮೂಹ ಗ್ಲೋಬಲ್ ಎನ್ಸಿಎಪಿ, ಮುಖ್ಯವಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಅದೇ ಮಾಡೆಲ್ ವಾಹನಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾರುವ ವಾಹನಗಳಲ್ಲಿ ಸುರಕ್ಷತೆ ಮಾನದಂಡ ತೀರಾ ಕಡಿಮೆ ಇದೆ ಎಂದು ತಿಳಿಸಿತ್ತು.
2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 39ರಷ್ಟು ಏರಿಕೆ
ಅಮೆರಿಕ-ಭಾರತದಲ್ಲಿ ರಸ್ತೆ ಅಪಘಾತ ಹೋಲಿಕೆ
'ಅಮೆರಿಕದಲ್ಲಿ 2018ರಲ್ಲಿ ಸಂಭವಿಸಿದ 45 ಲಕ್ಷ ರಸ್ತೆ ಅಪಘಾತಗಳಲ್ಲಿ ಅಂದಾಜು 36,560 ಮಂದಿ ಮೃತಪಟ್ಟಿದ್ದರೆ ಭಾರತದಲ್ಲಿ ಕೇವಲ 4.5 ಲಕ್ಷ ರಸ್ತೆ ಅಪಘಾತಗಳಲ್ಲಿಯೇ 1.5 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ. ಭಾರತದಲ್ಲಿ ರಸ್ತೆ ಅಪಘಾತದ ಪ್ರಮಾಣ ಹತ್ತು ಪಟ್ಟು ಕಡಿಮೆ ಇದೆ. ಆದರೆ ಸಾವಿನ ಸಂಖ್ಯೆ ಐದು ಪಟ್ಟು ಹೆಚ್ಚಿದೆ. ಭಾರತದಲ್ಲಿ ನಿಧಾನಗತಿಯ ಕಾರು ಹಾಗೂ ನಿಧಾನಗತಿಯ ರಸ್ತೆಗಳಿದ್ದರೂ ಮರಣ ಪ್ರಮಾಣ ಅಧಿಕವಾಗಿದೆ' ಎಂದು ಅರಮನೆ ಅವರು ಹೋಲಿಸಿದರು.
ಗ್ರಾಹಕರಿಗೆ ಅರಿವಿರಬೇಕು
'ಆಟೊಮೊಬೈಲ್ ಉತ್ಪಾದಕರು ತಮ್ಮ ಎಲ್ಲ ವಾಹನಗಳಲ್ಲಿಯೂ ಸುರಕ್ಷತಾ ರೇಟಿಂಗ್ಗಳನ್ನು ಅಳವಡಿಸುವುದು ಬಹಳ ಅಗತ್ಯ. ಅವರ ಗ್ರಾಹಕರಿಗೆ ತಾವು ಏನನ್ನು ಖರೀದಿ ಮಾಡುತ್ತಿದ್ದೇವೆ ಮತ್ತು ಅದರ ಜಟಿಲತೆಗಳು ಏನು ಎಂಬ ಅರಿವು ಇರಲು ಇದು ಮುಖ್ಯವಾಗಿದೆ' ಎಂದು ಹೇಳಿದರು.