2025ರ ಮಾರ್ಚ್ ವೇಳೆಗೆ ದೇಶದೆಲ್ಲೆಡೆ 10,500 ಜನೌಷಧಿ ಕೇಂದ್ರ
ನವದೆಹಲಿ, ಆಗಸ್ಟ್ 06: ʻಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆʼ (ಪಿಎಂಬಿಜೆಪಿ) ಅಡಿಯಲ್ಲಿ, ಸರಕಾರವು ದೇಶದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ 02.08.2021ರ ಹೊತ್ತಿಗೆ 8,001 ʻಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರʼಗಳನ್ನು (ಪಿಎಂಬಿಜೆಕೆ) ತೆರೆದಿದೆ. ಅಲ್ಲದೆ, 2025ರ ಮಾರ್ಚ್ ವೇಳೆಗೆ ಇನ್ನೂ ಸುಮಾರು 10,500 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್ಸಿಗಳು)/ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್ಸಿಗಳು) ಸೇರಿದಂತೆ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡುವಂತೆ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಕಾಲಕಾಲಕ್ಕೆ ಮನವಿ ಮಾಡಿದ್ದವು. ಇದಕ್ಕಾಗಿ ಆಸ್ಪತ್ರೆಗಳ ಆವರಣದಲ್ಲಿ ಬಾಡಿಗೆ ರಹಿತ ಸ್ಥಳವನ್ನು ನೀಡಿದ್ದವು. ಪ್ರಸ್ತುತ 2 ಆಗಸ್ಟ್ 2021ರ ವೇಳೆಗೆ ಸುಮಾರು 1,012 ಜನೌಷಧ ಕೇಂದ್ರಗಳು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.
2020ರ ಹೊತ್ತಿಗೆ ದೇಶದ ಪ್ರತಿ ಗಲ್ಲಿಗಳಲ್ಲೂ ಜನೌಷಧ ಕೇಂದ್ರ : ಸಚಿವ ಮನ್ಸುಖ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಮನ್ಸುಖ್ ಮಾಂಡವಿಯಾ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಜನೌಷಧ ಕೇಂದ್ರಗಳ ಕಾರ್ಯಕ್ಷಮತೆ
ಈ ಯೋಜನೆಯನ್ನು ಮುಂದುವರಿಸುವ ಮೊದಲು, ಏಜೆನ್ಸಿಯೊಂದರ ಮೂಲಕ ಮೌಲ್ಯಮಾಪನ ಮಾಡಲಾಯಿತು. ಆ ಸಂಸ್ಥೆಯು ಮಾಡಿದ ಶಿಫಾರಸುಗಳನ್ನು ಪರಿಗಣಿಸಿ, ಯೋಜನೆಯ ಮುಂದುವರಿಕೆಗಾಗಿ ಸ್ಥಾಯಿ ಹಣಕಾಸು ಸಮಿತಿಯ (ಎಸ್ಎಫ್ಸಿ) ಅನುಮೋದನೆ ಪಡೆಯುವ ಮೊದಲು ಸೂಕ್ತ ಬದಲಾವಣೆಗಳನ್ನು ಮಾಡಲಾಯಿತು. ಇದಲ್ಲದೆ, ಜನೌಷಧ ಕೇಂದ್ರಗಳ ಕಾರ್ಯಕ್ಷಮತೆ/ಕಾರ್ಯನಿರ್ವಹಣೆಯನ್ನು ಬ್ಯೂರೋದ ಸಿಇಒ ಮಟ್ಟದಲ್ಲಿ ಹಾಗೂ ʻಫಾರ್ಮಾಸ್ಯೂಟಿಕಲ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾʼ (ಪಿಎಂಬಿಐ) ಮುಂತಾದ ಯೋಜನಾ ಅನುಷ್ಠಾನ ಸಂಸ್ಥೆಗಳ ಕಾರ್ಯನಿರ್ವಾಹಕರು ಮತ್ತು ಆಡಳಿತ ಮಂಡಳಿಯಿಂದ ಕಾಲಕಾಲಕ್ಕೆ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಗುರುಗ್ರಾಮ, ಚೆನ್ನೈ ಮತ್ತು ಗುವಾಹಟಿಯಲ್ಲಿ ಗೋದಾಮು
ʻವಿಶ್ವ ಆರೋಗ್ಯ ಸಂಸ್ಥೆಯ - ಉತ್ತಮ ಉತ್ಪಾದನಾ ಕಾರ್ಯವಿಧಾನʼ (ಡಬ್ಲ್ಯೂಹೆಚ್ಒ-ಜಿಎಂಪಿ) ಪ್ರಮಾಣೀಕೃತ ಘಟಕಗಳನ್ನು ಹೊಂದಿರುವ ದೇಶೀಯ ಔಷಧ ಉತ್ಪಾದನಾ ಕಂಪನಿಗಳಿಂದ ಜನೌಷಧ ಕೇಂದ್ರಗಳಿಗೆ ಔಷಧಗಳನ್ನು ಖರೀದಿಸಲಾಗುತ್ತದೆ. ʻಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿʼಯ (ಎನ್ಎಬಿಎಲ್) ಅನುಮೋದನೆ ಪಡೆದ ಪ್ರಯೋಗಾಲಯಗಳಲ್ಲಿ ಔಷಧಗಳನ್ನು ಪರೀಕ್ಷಿಸಲಾಗುತ್ತದೆ. ಆ ನಂತರ ಔಷಧಗಳನ್ನು ಗುರುಗ್ರಾಮ್, ಚೆನ್ನೈ ಮತ್ತು ಗುವಾಹಟಿಯಲ್ಲಿರುವ ʻಪಿಎಂಬಿಐʼನ ಗೋದಾಮುಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಇವುಗಳನ್ನು ದೇಶಾದ್ಯಂತದ ಮಾರಾಟಗಾರರಿಗೆ ರವಾನಿಸಲಾಗುತ್ತದೆ. ಜನೌಷಧ ಕೇಂದ್ರಗಳಿಗೆ ಔಷಧಗಳ ಸಾಗಾಣಿಕೆ ಮತ್ತು ವಿತರಣೆಯನ್ನು ಬೆಂಬಲಿಸಲು ದೇಶವ್ಯಾಪಿಯಾಗಿ 37 ವಿತರಕರ ಜಾಲವನ್ನು ಸಹ ಸ್ಥಾಪಿಸಲಾಗಿದೆ.
ಜನೌಷಧಿ ಅಂಗಡಿಗಳಲ್ಲಿ ಆಯುರ್ವೇದ ಔಷಧಗಳ ಲಭ್ಯತೆ: ಸದಾನಂದ ಗೌಡ
ಅಂಗಡಿಯ ಮಾಲೀಕರಿಗೆ ಪ್ರೋತ್ಸಾಹ ಧನ
ಅಂಗಡಿಯ ಮಾಲೀಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಸರಕಾರವು ಇತ್ತೀಚೆಗೆ ಹಾಲಿ 2.50 ಲಕ್ಷ ರೂ.ಗಳಿಂದ 5.00 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ತಿಂಗಳಿಗೆ ರೂ. 15,000/- ಮಿತಿಗೆ ಒಳಪಟ್ಟು ಮಾಸಿಕ ಖರೀದಿಗಳಲ್ಲಿ 15% @ ಅನ್ನು ನೀಡಲಾಗಿದೆ. ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಹಿಮಾಲಯ ಪ್ರದೇಶ, ದ್ವೀಪ ಪ್ರದೇಶಗಳು, ಈಶಾನ್ಯ ರಾಜ್ಯಗಳಲ್ಲಿ ತೆರೆಯಲಾದ ಜನೌಷಧ ಕೇಂದ್ರಗಳಿಗೆ ಪೀಠೋಪಕರಣಗಳು ಮತ್ತಿತರ ಮೂಲಸೌಕರ್ಯ ಸಂಬಂಧಿತ ಸಾಮಗ್ರಿಗಳ ಖರೀದಿಗಾಗಿ ಒಮ್ಮೆಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಪ್ರಸ್ತಾವನೆಗೂ ಸರಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಮಹಿಳಾ ಉದ್ಯಮಿಗಳು, ದಿವ್ಯಾಂಗರು, ಎಸ್ಸಿಗಳು ಮತ್ತು ಎಸ್ಟಿಗಳು ತೆರೆದಿರುವ ಜನೌಷಧ ಕೇಂದ್ರಗಳಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ.
ಈ ವರ್ಷ ಜನೌಷಧಿ ಕೇಂದ್ರಗಳಿಂದ 484 ಕೋಟಿ ರೂ. ವಹಿವಾಟು
ಜನೌಷಧ ಯೋಜನೆ ಎಂದರೇನು?
ಜನೌಷಧ ಯೋಜನೆ: ಆಸ್ಪತ್ರೆ, ಔಷಧ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೇ ಅಸಹಾಯಕರಾಗಿ ಜೀವ ಕಳೆದುಕೊಳ್ಳುವ ಎಷ್ಟೋ ಜೀವಗಳಿಗೆ ಆಸರೆ ನೀಡುವ ಯೋಜನೆ ಇದಾಗಿದೆ. ಈ ಅಮೂಲ್ಯ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇನ್ಮುಂದೆ ಕಡಿಮೆ ಬೆಲೆಗೆ ಔಷಧಗಳು ಲಭ್ಯವಾಗಲಿವೆ. ಇದು ಇತರೆ ಔಷಧ ಅಂಗಡಿಗಳಲ್ಲಿ ದೊರೆಯುವ ಔಷದಗಳ ಬೆಲೆಗಿಂತ ಕಡಿಮೆ. ಸರ್ಕಾರ ಅಗತ್ಯ ಔಷಧಗಳ ಮೇಲೆ ವ್ಯಾಟ್ ತೆರಿಗೆ ಹಾಗೂ ಎಕ್ಸೈಸ್ ಕರವನ್ನು ಅತ್ಯಂತ ಕಡಿಮೆ ದರಕ್ಕೆ ಇಳಿಸಿದೆ ಹೀಗಾಗಿ ಮತ್ತಷ್ಟು ಕಡಿಮೆ ಬೆಲೆಗೆ ಜನರಿಕ್ ಮಳಿಗೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಲಭ್ಯ. ಜನೌಷಧ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70ರಷ್ಟು ರಿಯಾಯ್ತಿ ದರದಲ್ಲಿ ಔಷಧ ಹಾಗೂ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಅತ್ಯಂತ ಅಗ್ಗದ ಯೋಜನೆಯಾಗಿದೆ.