ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಮಗುವಿಗೆ ಹಾಲುಣಿಸುವ ದಿನಗಳು ದೂರವಿಲ್ಲ
'ತಾಯಿಯಾಗುವುದು ಮಂಚ ಹತ್ತಿ ಇಳಿದಷ್ಟು ಸುಲಭವಲ್ಲ', ತಾಯ್ತನವನ್ನು ಕ್ಷುಲ್ಲಕವಾಗಿ ಕಾಣುವ ಒರಟು ಗಂಡಸರಿಗೆ ಹಿರಿಯ ಹೆಂಗಸರು ಕೊಡುವ ಮಾತಿನ ಪೆಟ್ಟಿದು. ಇದರ ಪ್ರತಿ ಶಬ್ದವೂ ಸತ್ಯವೇ. ತಾಯ್ತನವೊಂದು ಅಮೋಘ ಧ್ಯಾನ. ಈ ಧ್ಯಾನ ತ್ಯಾಗಗಳನ್ನು ತಾಯಿಯಿಂದ ಬೇಡುತ್ತದೆ.
ತಾಯ್ತನ ಸುಲಭವಲ್ಲ, ಅದರಲ್ಲಿಯೂ ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ತಾಯ್ತನದ ಜವಾಬ್ದಾರಿಗಳನ್ನು ಪೂರೈಸುವುದು ಅತ್ಯಂತ ಸವಾಲಿನ ಕಾರ್ಯ. 'ಮಗುವೋ.., ನೌಕರಿಯೋ..' ನಿರ್ಧಾರ ಸದಾ ಕಷ್ಟದ್ದೇ.
ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!
ಆದರೆ ಈಗ ತುರ್ತಾಗಿ ಬದಲಾವಣೆ ಆಗಲೇ ಬೇಕಿದೆ. ಮೊನ್ನೆಯಷ್ಟೆ ನ್ಯೂಜಿಲೆಂಡಿನ ಪ್ರಧಾನಿ ಜಕಿಂಡಾ ಆರ್ಡರ್ನ್ ಅವರು ತಮ್ಮ ಹಸುಗೂಸಿನೊಂದಿಗೆ ಸಂಸತ್ಗೆ ತೆರಳಿ ಕಲಾಪದಲ್ಲಿ ಭಾಗವಹಿಸಿದ್ದಾರೆ. ಅವರ ಈ ಕಾರ್ಯ ಜಗತ್ತಿನಾದ್ಯಂತ ತಾಯಂದಿರ ಅದರಲ್ಲಿಯೂ ಉದ್ಯೋಗಸ್ಥ ತಾಯಂದಿರ ಪರವಾದ ಚರ್ಚೆ ಹುಟ್ಟುಹಾಕಿದೆ.
ತಾಯಂದಿರೇಕೆ ತಮ್ಮ ಕೂಸನ್ನು ಕಚೇರಿಗೆ ಕರೆದುಕೊಂಡು ಬರಬಾರದು, ಅವರ ಆರೈಕೆಯನ್ನು ಅಲ್ಲಿಯೇ ಏಕೆ ಮಾಡಬಾರದು, ಮಗು ಮತ್ತು ತಾಯಿಗಾಗಿ ಸಂಸ್ಥೆಗಳೇಕೆ ವಿಶೇಷ ವ್ಯವಸ್ಥೆ ಮಾಡಬಾರದು. ತಾಯಿಗೆ ದೈವತ್ವವನ್ನು ನೀಡಿರುವ ಭಾರತದಲ್ಲೇ ಈ ಬಗ್ಗೆ ಏಕೆ ಈವರೆಗೆ ಗಂಭೀರ ಚರ್ಚೆಯೇ ನಡೆದಿಲ್ಲ.
ಸರ್ಕಾರವಂತೂ ಉದ್ಯೋಗಸ್ತ ಮಹಿಳೆಯರಿಗೆ ಕೆಲವು ತಿಂಗಳ ಹೆರಿಗೆ ರಜೆ ದಯಪಾಲಿಸಿ ಮಹತ್ ಸಹಾಯ ಮಾಡಿದಂತೆ ಸುಮ್ಮನಾಗಬಿಟ್ಟಿದೆ. ಮಗು ಹೆರುವುದು ಒಂದು ಘನ ಕಾರ್ಯವಾದರೆ ಅದರ ಆರೈಕೆ ಇನ್ನೂ ಮಹತ್ತರವಾದದು, ಧ್ಯಾನಕ್ಕೂ ಮಿಗಿಲಾದುದದು.
ಇದು ಭಾರತ ಸಮಸ್ಯೆ ಮಾತ್ರವಲ್ಲ ಪ್ರಪಂಚದ ಸಮಸ್ಯೆ. ನ್ಯೂಜಿಲೆಂಡಿನ ಪ್ರಧಾನಿ ಜಕಿಂಡಾ ಆರ್ಡರ್ನ್ ತನ್ನ ಮಗುವನ್ನು ಸಂಸತ್ತಿನ ಒಳಗೆ ಒಯ್ಯುವ ವರೆಗೂ ವಿಶ್ವಮಟ್ಟದಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳೇ ಆಗಿಲ್ಲ. ಆದರೆ ಈಗೀಗ ನಿಧಾನಕ್ಕೆ ಚರ್ಚೆ ಪ್ರಾರಂಭವಾಗುತ್ತಿರುವುದು ಸಂತೋಶದಾಯಕ.
ಚರ್ಚೆ ಬೇಗ ಶುಭಾಂತ್ಯ ಕಾಣಲಿ. ಉದ್ಯೋಗಸ್ಥ ತಾಯಿ ತಾನು ಕೆಲಸ ಮಾಡುವ ಸ್ಥಳದಲ್ಲೇ ಸುಸಜ್ಜಿತ ವ್ಯವಸ್ಥೆಯ ನಡುವೆ ಮಗುವಿನ ಆರೈಕೆ ಮಾಡುವಂತಾಗಲಿ. ಕಡ್ಡಾಯವಾಗಿ ಎಲ್ಲ ಸಂಸ್ಥೆಗಳು ಉದ್ಯೋಗಸ್ಥ ತಾಯಂದಿರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ನೀಡುವಂತಾಗಲಿ. ಉದ್ಯೋಗಸ್ಥ ತಾಯಂದಿರು ಮಗುವಿಗಾಗಿ ತಮ್ಮ ವೃತ್ತಿ ಜೀವನವನ್ನು ನೇಣು ಹಾಕದಂತಾಗಲಿ.