ಭಾರತೀಯ ಮುಸ್ಲಿಮರಿಗೆ ಈ ಬಾರಿ ಪವಿತ್ರ ಹಜ್ ಯಾತ್ರೆ ಇಲ್ಲ
ನವದೆಹಲಿ, ಜೂನ್ 23: ಭಾರತದಲ್ಲಿರುವ ಮುಸ್ಲಿಮರು ಈ ಬಾರಿ ಹಜ್ ಯಾತ್ರೆಗೆ ತೆರಳುವುದು ಬೇಡ ಎಂದು ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಇದುವರೆಗೂ 2.3 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಯಾತ್ರೆಗೆ ಹಣವನ್ನು ಕೂಡ ನೀಡಿದ್ದಾರೆ, ಅವರೆಲ್ಲರ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ ಈ ಬಾರಿ ಹಜ್ ಯಾತ್ರೆಗೆ ಹೋಗುವುದು ಬೇಡ ಎಂದು ಯಾತ್ರಾರ್ಥಿಗಳನ್ನು ಮನವಿ ಮಾಡಿದ್ದಾರೆ.
ದೇವಸ್ಥಾನ ತೆರೆದರೂ ಪಾಲಿಸಲೇಬೇಕಿದೆ ಈ ನಿಯಮಗಳನ್ನು
ಮುಸ್ಲಿಮರು ಹೃದಯಪೂರ್ವಕ ಪ್ರಾರ್ಥನೆ ಸಲ್ಲಿಸಲು ಮೆಕ್ಕಾಗೆ ಪ್ರಯಾಣಿಸುವ ಹಜ್ ಯಾತ್ರೆ ಜಗತ್ತಿನಲ್ಲಿ ಪ್ರತಿವರ್ಷ ನಡೆಯುವ ಮಹಾನ್ ಯಾತ್ರೆ. ಪ್ರತಿಯೊಬ್ಬ ಸಂಪ್ರದಾಯವಾದಿ ಮುಸ್ಲಿಮರು ಹಜ್ ಯಾತ್ರೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ ಕರ್ತವ್ಯವಾಗಿದೆ. ಮುಸ್ಲಿಂ ಜನರ ಒಗ್ಗಟ್ಟಿನ ಸಂಕೇತ ಮತ್ತು ಅಲ್ಲಾಗೆ ಅವರ ಅರ್ಪಣೆ ಹಜ್ ಯಾತ್ರೆಯಾಗಿದೆ.
ಸೌದಿ ಅರೇಬಿಯದಲ್ಲಿರುವ ಮೆಕ್ಕಾಗೆ ಯಾತ್ರೆಗೆ ಜನರು ದೇಶ, ವಿದೇಶಗಳಿಂದ ತೆರಳುತ್ತಿದ್ದರು. ಹಜ್ ಯಾತ್ರೆಯು ಪ್ರವಾದಿ ಮೊಹಮ್ಮದರ ಜೀವನಕ್ಕೆ ಸಂಬಂಧಿಸಿದೆ. ಆದರೆ ಮೆಕ್ಕಾ ಯಾತ್ರೆಯ ಆಚರಣೆ ಕ್ರೈಸ್ತಪೂರ್ವ 2000ರ ಅಬ್ರಹಾಂ ಕಾಲದಲ್ಲಿತ್ತೆಂದು ಅನೇಕ ಮುಸ್ಲಿಮರ ನಂಬಿಕೆ. ಈ ಯಾತ್ರೆಗಾಗಿ ಮೆಕ್ಕಾದಲ್ಲಿ ಸೇರುವ ಸಾವಿರಾರು ಮುಸ್ಲಿಮರು ಅನೇಕ ತರದ ಆಚರಣೆಗಳಲ್ಲಿ ಪಾಲ್ಗೊಳ್ಳುವರು.
ಪ್ರತಿಯೊಬ್ಬ ಯಾತ್ರಿಯು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಕಾಬಾದ ಸುತ್ತಬರುತ್ತಾರೆ. ಮೂಲೆಯಲ್ಲಿರುವ ಕಪ್ಪು ಕಲ್ಲಿಗೆ ಮುತ್ತಿಕ್ಕಿ ಅಲ್ ಸಾಫಾ ಮತ್ತು ಅಲ್ ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ, ಮುಂದಕ್ಕೆ ಚಲಿಸುವರು. ಝಾಮ್ಜಾಮ್ ಕೊಳದ ಪವಿತ್ರ ನೀರನ್ನು ಕುಡಿದು ಮೌಂಟ್ ಅರಾಫತ್ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮುಜ್ಡಾಲಿಫಾಗೆ ಕಲ್ಲುಗಳನ್ನು ಸಂಗ್ರಹಿಸಲು ತೆರಳುತ್ತಾರೆ.