ಗೋರಖ್ ಪುರ ದುರಂತ: ಯೋಗಿ ರಾಜಿನಾಮೆಗೆ ಪಟ್ಟು ಸೇರಿ 6 ಬೆಳವಣಿಗೆ
ಗೋರಖ್ ಪುರ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ರಾಜಿನಾಮೆ ಕೇಳಿದ ಪ್ರತಿಪಕ್ಷಗಳು. ಉತ್ತರ ಪ್ರದೇಶ ರಾಜ್ಯ ಸರ್ಕಾರದಿಂದ ಪ್ರಕರಣದ ತನಿಖೆಗೆ ಆದೇಶ.
ಗೋರಖ್ ಪುರ (ಉತ್ತರ ಪ್ರದೇಶ), ಆಗಸ್ಟ್ 12: ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪ್ರತಿಪಕ್ಷಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜಿನಾಮೆಗೆ ಆಗ್ರಹಿಸಿವೆ.
ಆಸ್ಪತ್ರೆಯಲ್ಲಿ ಇತ್ತೀಚೆಗೆ ಉಂಟಾದ ಆಮ್ಲಜನಕದ ಕೊರತೆಯಿಂದಾಗಿ, ಕಳೆದ ಐದು ದಿನಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಅಸುನೀಗಿವೆ. ಇವುಗಳಲ್ಲಿ ನವಜಾತ ಶಿಶುಗಳೂ ಸೇರಿದ್ದು ಈ ಪ್ರಕರಣದ ಇಡೀ ದೇಶದ ಗಮನ ಸೆಳೆದಿದೆ.
ಗೋರಖ್ ಪುರ ದುರಂತ: ತುರ್ತು ಸಭೆ ಕರದ ಯೋಗಿ ಆದಿತ್ಯನಾಥ್
ಆದರೆ, ರಾಜ್ಯ ಸರ್ಕಾರ ಆಮ್ಲಜನಕದ ಕೊರೆತೆಯಿಂದ ಮಕ್ಕಳ ಸಾವಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿರಲಿಲ್ಲ. ಬದಲಿಗೆ, ವೈದ್ಯಕೀಯ ನಿರ್ಲಕ್ಷ್ಯದಿಂದ ಮಕ್ಕಳ ಸಾವಾಗಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
ಯೋಗಿ ರಾಜಿನಾಮೆಗೆ ಆಗ್ರಹ
ರಾಜ್ಯ ಸರ್ಕಾರದ 'ವೈದ್ಯಕೀಯ ನಿರ್ಲಕ್ಷ್ಯತೆ' ಕಾರಣ ವಿರೋಧ ಪಕ್ಷಗಳನ್ನು ಕೆರಳಿಸಿದೆ. ಅದರಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರದಲ್ಲಿರುವ ಆಸ್ಪತ್ರೆಯ ಸ್ಥಿತಿಯೇ ಹೀಗಿದ್ದರೆ, ಉತ್ತರ ಪ್ರದೇಶದ ಉಳಿದ ಕಡೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಪಾಡೇನು ಎಂದು ಪ್ರಶ್ನಿಸಿವೆ. ಅಲ್ಲದೆ, ಘಟನೆಗೆ ನೈತಿಕ ಹೊಣೆ ಹೊತ್ತು ಯೋಗಿ ಆದಿತ್ಯನಾಥ್ ಅವರು ರಾಜಿನಾಮೆ ಸಲ್ಲಿಸಬೇಕೆಂದು ಪಟ್ಟು ಹಿಡಿದಿವೆ.
ಕ್ರಮ ಕೈಗೊಳ್ಳುವ ಆಶ್ವಾಸನೆ
ಏತನ್ಮಧ್ಯೆ, ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಲ್ಲಿ ದುಃಖತಪ್ತ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಘಟನೆಯ ಬಗ್ಗೆ ಸೂಕ್ತವಾದ ತನಿಖೆ ನಡೆಸಿದ ನಂತರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಆಶ್ವಾಸನೆ ನೀಡಿದರು.
ಕೈಲಾಶ್ ಸತ್ಯಾರ್ಥಿ ಬೇಸರ
ದೇಶಾದ್ಯಂತ ಈ ಪ್ರಕರಣವು ಸುದ್ದಿ ಮಾಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿರುವ ದುರವಸ್ಥೆಗಳ ಬಗ್ಗೆ ಹಲವಾರು ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೋಬೆಲ್ ಪಾರಿತೋಷಕ ವಿಜೇತ ಕೈಲಾಶ್ ಸತ್ಯಾರ್ಥಿ, ''ಸರ್ಕಾರಿ ಆಸ್ಪತ್ರೆಗಳಿಲ್ಲದೆ ಮಕ್ಕಳು, ರೋಗಿಗಳು ಸತ್ತರೆ ಅಂಥ ಪ್ರಕರಣಗಳನ್ನು ವೈದ್ಯಕೀಯ ನಿರ್ಲಕ್ಷ್ಯ ಎನ್ನುವುದಕ್ಕಿಂತ ಹತ್ಯಾಕಾಂಡ ಎಂದು ಬಣ್ಣಿಸುವುದೇ ಸರಿ. ಹಾಗಾಗಿ, ಗೋರಖ್ ಪುರದ ಈ ಘಟನೆ ಹತ್ಯಾಕಾಂಡ ಎನ್ನದೇ ಬೇರೆ ವಿಧಿಯಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅರ್ಥವಾಗದ ಪ್ರಧಾನಿ ಮೌನ
ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಪ್ರಧಾನಿ ಮೋದಿ ಅವರ ಬಗ್ಗೆಯೂ ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸಿವೆ. ಎಲ್ಲೋ ವಿದೇಶಗಳಲ್ಲಿ ಯುದ್ಧವಾದರೆ, ಜನರು ಅಸುನೀಗಿದರೆ ತಕ್ಷಣ ಟ್ವೀಟ್ ಮಾಡಿ ಸ್ಪಂದಿಸುವ ಮೋದಿ, ಭಾರತದಲ್ಲಿ ಮಕ್ಕಳ ಸಾಮೂಹಿಕ ಮರಣವಾದಾಗ ಒಂದೇ ಒಂದು ಸಂತಾಪದ ಸಂದೇಶವನ್ನೂ ಹಾಕಿಲ್ಲವೆಂದು ಕಿಡಿಕಾರಿದ್ದಾರೆ.
ಹಲವಾರು ದಾಖಲೆ ವಶ
ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆಯಲ್ಲ ಎಂದು ರಾಜ್ಯ ಸರ್ಕಾರ ಹೇಳಿದ ಬೆನ್ನಲ್ಲೇ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡುತ್ತಿದ್ದ ಕಂಪನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಖ್ನೋದಲ್ಲಿರುವ ಕಂಪನಿಯ ಕಚೇರಿಯ ಮೇಲೆ ದಾಳಿ ನಡೆಸಿದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿದ ಈವರೆಗಿನ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ, ಕಂಪನಿಯು ಈ ಹಿಂದೆ ಕಳುಹಿಸಲಾಗಿದ್ದ ಆಮ್ಲಜನಕ ಸಿಲಿಂಡರ್ ಗಳ ಬಿಲ್ ಅನ್ನು ಆಸ್ಪತ್ರೆ ಆಡಳಿತ ಪಾವತಿಸಿಲ್ಲವಾದ್ದರಿಂದ ತಾನು ಆಮ್ಲಜನಕ ಸರಬರಾಜು ನಿಲ್ಲಿಸಿದ್ದಾಗಿ ದೂರಿದೆ.
ಈಗ ಬಂತು ಆಸ್ಪತ್ರೆಗೆ ಆಮ್ಲಜನಕ!
ಊರು ಕೊಳ್ಳೆ ಹೊಡೆದು ಹೋದ ಮೇಲೆ ಊರ ಬಾಗಿಲು ಹಾಕಿದಂತೆ, ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶುಕ್ರವಾರ ರಾತ್ರಿ ವೇಳೆಗೆ ಸುಮಾರು 300 ಆಮ್ಲಜನಕದ ಸಿಲಿಂಡರ್ ಗಳು ಬಂದಿವೆ. ಇದೇ ಕೆಲಸವನ್ನು ಸಮಸ್ಯೆ ಶುರುವಾದ ಆರಂಭದಲ್ಲೇ ಮಾಡಿದ್ದರೆ ಅದೆಷ್ಟೋ ಶಿಶುಗಳ ಸಾವನ್ನಾದರೂ ತಪ್ಪಿಸಬಹುದಿತ್ತು ಎಂದು ಜನರು ಹಲಬುವಂತಾಗಿದೆ.