ಅಣ್ಣನ ಕೊಲೆ ಪ್ರತಿಕಾರ: ತಂಗಿ ಮಾಡಿದ್ದೇನು ಗೊತ್ತಾ?
ಗೋರಖ್ಪುರ, ಜು.19: ಅಣ್ಣನ ಸಾವಿನ ಸೇಡು ತೀರಿಸಿಕೊಳ್ಳಲು ತಂಗಿ ಇಡೀ ಶಾಲೆಯ ವಿದ್ಯಾರ್ಥಿಗಳಿಗೆ ವಿಷ ಹಾಕಿದ ಘಟನೆ ಗೋರಖ್ಪುರದಲ್ಲಿ ನಡೆದಿದೆ.
ಗೋರಖ್ಪುರದ ಬುಲಿಯಾ ಹಳ್ಳಿಯಲ್ಲಿರುವ ಶಾಲೆಯಲ್ಲಿ ಬೇಯಿಸಿಟ್ಟ ಆಹಾರದ ಪಾತ್ರೆಗೆ ವಿದ್ಯಾರ್ಥಿನಿ ವಿಷಯವನ್ನು ಬೆರೆಸಿ ಕೊಲೆ ಮಾಡಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಪ್ಪು ಬಣ್ಣದ ಮೈ ಹೀಗಳೆದಿದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿದ ಮಹಿಳೆ
ಹಾಗಾದರೆ ಈ ರೀತಿ ಮಾಡಲು ಕಾರಣವೇನೆಂದರೆ ಏಪ್ರಿಲ್ 2ರಂದು ವಿದ್ಯಾರ್ಥಿನಿಯ ಅಣ್ಣನನ್ನು ಶಾಲೆಯಲ್ಲಿ ಕೊಲೆ ಮಾಡಲಾಗಿತ್ತು. ಇದೇ ಕಾರಣಕ್ಕೆ ವಿದ್ಯಾರ್ಥಿನಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಳು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಬಾಲಾಪರಾಧ ಗೃಹಕ್ಕೆ ಬಿಡಲಾಗಿತ್ತು.
ಸರ್ಕಾರಿ ಪ್ರೌಡಶಾಲೆಯ ಪ್ರಿನ್ಸಿಪಾಲ್ ನೀಡಿರುವ ದೂರಿನ ಆಧಾರದ ಮೇಲೆ ವಿದ್ಯಾರ್ಥಿನಿ ವಿರುದ್ಧ ಐಪಿಸಿ ಸೆಕ್ಷನ್ 328ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆಕೆಯನ್ನು ಬಾಲಾಪರಾಧ ಗೃಹಕ್ಕೆ ಕಳುಹಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಬೇಯಿಸಿದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.
ಶಾಲೆಯ ಅಧಿಕಾರಿಗಳು ಹೇಳುವಂತೆ, ಬಾಲಕಿಯು ತನ್ನ ಅಣ್ಣನ ಕೊಲೆಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಎಲ್ಲ ವಿದ್ಯಾರ್ಥಿಗಳ ಕೊಲೆಗೆ ಮುಂದಾಗಿದ್ದಳು ಎನ್ನಲಾಗಿದೆ. ಆಹಾರಕ್ಕೆ ವಿಷ ಬೆರೆಸಿರುವ ಕುರಿತು ವಿದ್ಯಾರ್ಥಿಗಳು ತಿನ್ನುವ ಮೊದಲೇ ಪತ್ತೆಯಾಗಿದ್ದರಿಂದ ಯಾವುದೇ ಅವಗಢ ಸಂಭವಿಸಿಲ್ಲ. ವಿಷಯ ಅರಿತ ಗ್ರಾಮಸ್ಥರು ಶಾಲೆಯನ್ನು ಸುತ್ತುವರಿದು ವಿದ್ಯಾರ್ಥಿನಿಯ ತಾಯಿಯನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.