'ಕಾಮನ್ ಮ್ಯಾನ್' ಆರ್ ಕೆ ಲಕ್ಷ್ಮಣ್ಗೆ ಗೂಗಲ್ ನಮನ
ಬೆಂಗಳೂರು, ಅಕ್ಟೋಬರ್. 24 : ಶ್ರೀ ಸಾಮಾನ್ಯ ಕಾರ್ಟೂನ್ ಮೂಲಕ ಜನಪಪ್ರಿಯರಾಗಿದ್ದ ಆರ್.ಕೆ.ಲಕ್ಷಣ್ ಅವರಿಗೆ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ನಮನ ಸಲ್ಲಿಕೆ ಮಾಡಿದೆ. ಅಕ್ಟೋಬರ್ 24 ಲಕ್ಷ್ಮಣ್ ಅವರ 94 ನೇ ಜನ್ಮದಿನ ಈ ಹಿನ್ನೆಲೆಯಲ್ಲಿ ಗೂಗಲ್ ನಮನ ಸಲ್ಲಿಕೆ ಮಾಡಿ ಗೌರವ ಸೂಚಿಸಿದೆ.
ಈ ವರ್ಷದ ಆರಂಭದಲ್ಲಿ (ಜನವರಿ 26, 2015) ರಲ್ಲಿ ಲಕ್ಷ್ಮಣ್ ನಮ್ಮನ್ನು ಅಗಲಿದ್ದರು. ಅಂಗಾಂಗ ವೈಫಲ್ಯದಿಂದ ಖ್ಯಾತ ವ್ಯಂಗ್ಯಚಿತ್ರಕಾರ ನಿಧನರಾಗಿದ್ದರು. ಅಕ್ಟೋಬರ್ 24, 1921 ರಲ್ಲಿ ಜನಸಿದ ಲಕ್ಷ್ಮಣ್ ತಮ್ಮ ಕಾಮನ್ ಮ್ಯಾನ್ ಕಾರ್ಟೂನ್ ಗಳಿಂದಲೇ ಖ್ಯಾತಿ ಪಡೆದಿದ್ದರು.
ಲಕ್ಷ್ಮಣ್' ಅವರು 56 ವರ್ಷ ಗಳಿಂದ 'ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆ'ಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ('ಸಾಮಾನ್ಯ ಪ್ರಜೆ'), ಅಥವಾ 'ಜನಸಾಮಾನ್ಯ', 'ವ್ಯಂಗ್ಯ ಚಿತ್ರಾಂಕಣ' ವರ್ತಮಾನದ ಸಮಸ್ಯೆಗಳಿಗೆ, ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿರುತ್ತಿತ್ತು.
ಕನ್ನಡದ "ಕೊರವಂಜಿ ಹಾಸ್ಯಪತ್ರಿಕೆ "ಯಿಂದ ಲಕ್ಷ್ಮಣರ ವ್ಯಂಗ್ಯಚಿತ್ರಜೀವನ ಶುರುವಾಯಿತು. ಕೊರವಂಜಿ ಪತ್ರಿಕೆಗೆ 1967 ರಲ್ಲಿ ಮುಖಪುಟ ಹಾಗೂ ಚಿತ್ರಗಳನ್ನು ಬರೆದು ಮುಂದೆ ನಿರಂತರ ದುಡಿಮೆಯಿಂದ ತಮ್ಮ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದರು. ಲಕ್ಷ್ಮಣ್ ಅವರ ಕುಂಚದಿಂದ ಹೊರ ಮೂಡಿದ ಕಪ್ಪು ಬಿಳುಪು, ಮತ್ತು ವರ್ಣರಂಜಿತ ಚಿತ್ರಗಳು, ಮುಂಬೈನ ಪ್ರತಿಷ್ಠಿತ ಜಹಾಂಗೀರ್ ಆರ್ಟ್ಸ್ ಗ್ಯಾಲರಿಯಲ್ಲಿ ಹಲವು ಬಾರಿ ಪ್ರದರ್ಶಿಸಲ್ಪಟ್ಟಿವೆ.[ಆರ್.ಕೆ.ಲಕ್ಷಣ್ ಜೀವನ ಚಿತ್ರ]
ಆರ್.ಕೆ. ಲಕ್ಷ್ಮಣರನ್ನು ಅರಸಿ ಬಂದ ಪ್ರಶಸ್ತಿಗಳು ನೂರಾರು. ಬಿ.ಡಿ.ಗೊಯೆಂಕ ಪ್ರಶಸ್ತಿ, ದುರ್ಗಾರತನ್ ಸ್ವರ್ಣ ಪಾರಿತೋಷಕ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು, ರೇಮನ್, ಮ್ಯಾಗ್ಸೇಸೆ ಪ್ರಶಸ್ತಿ, ಕರ್ಣಾಟಕ ವಿಶ್ವವಿದ್ಯಾಲಯ, ಮರಾಠವಾಡ ವಿಶ್ವವಿದ್ಯಾಲಯ ಮತ್ತು ದಿಲ್ಲಿ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳು, ಸಿ.ಎನ್.ಎನ್, ಐ.ಬಿ.ಎನ್ ಜೀವಮಾನದ ಸಾಧನಾ ಪ್ರಶಸ್ತಿಗಳು ಸಂದಿದ್ದು ಅವರ ಸಾಧನೆಗೆ ಸಾಕ್ಷಿ.