ಚಿನ್ನದ ನಿಧಿ ಸಿಗೋದು ಡೌಟ್ ಅಂತವ್ರೆ ಎಎಸ್ಐ ಚೀಫ್
ಬಕ್ಸಾರ್ (ಉನ್ನಾವ್), ಅ. 19 : ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ದೌಡಿಯಾ ಖೇಡಾ ಎಂಬ ಗ್ರಾಮದಲ್ಲಿ, ನೆಲದಲ್ಲಿ ಅಪಾರ ಪ್ರಮಾಣದಲ್ಲಿ ಹೂಳಗಾಲಿದೆ ಎನ್ನಲಾಗಿರುವ ಚಿನ್ನಕ್ಕಾಗಿ ಭಾರತೀಯ ಸರ್ವೇಕ್ಷಣ ಇಲಾಖೆ ಆರಂಭಿಸಿರುವ ಉತ್ಖನನ ಇಡೀ ದೇಶದ ಆಸಕ್ತಿ ಕೆರಳಿಸಿದೆ. ಸಾಧುವೊಬ್ಬ ಕಂಡ ಕನಸಿನಂತೆ ಸಾವಿರ ಟನ್ನಷ್ಟು ಬಂಗಾರದ ಆಭರಣಗಳು ಅಲ್ಲಿ ದೊರೆಯುತ್ತದಾ ಇಲ್ಲವಾ ಎಂಬ ಬಗ್ಗೆ ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ.
ಅಪಹಾಸ್ಯಕ್ಕೀಡಾಗುವ ಲಕ್ಷಣ : ಸಾಧುವಿನ ಕನಸನ್ನು ನಂಬಿ, ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಉತ್ಖನನಕ್ಕೆ ಮುಂದಾಗಿರುವ ಭಾರತೀಯ ಸರ್ವೇಕ್ಷಣ ಇಲಾಖೆಯ ಚಿನ್ನ ಹುಡುಕುವ ಪ್ರಯತ್ನ ಅಪಹಾಸ್ಯಕ್ಕೀಡಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಗುಡ್ಡ ಅಗಿದು ಇಲಿ ಹಿಡಿದಂತೆ ಎಂಬ ಗಾದೆಗೆ ತಕ್ಕಂತೆ ನೆಲ ಬಗಿದು ಹಿಡಿಯಷ್ಟು ಮಣ್ಣು ಹಿಡಿದಂತಾದರೂ ಅಚ್ಚರಿಯಿಲ್ಲ. ಏಕೆಂದರೆ, ಇಲಾಖೆಯ ನಿರ್ದೇಶಕರೇ ಈಗ ನೆಲದಾಳದಲ್ಲಿ ಚಿನ್ನದ ನಿಧಿ ಸಿಗುವುದು ಅನುಮಾನ ಎಂಬ ಮಾತು ಹೇಳಿ ಇಡೀ ಪ್ರಕರಣಕ್ಕೆ ವಿಚಿತ್ರ ತಿರುವು ನೀಡಿದ್ದಾರೆ.
ನಾನೊಂದ ಕನಸ ಕಂಡೆ : ಕನಸು ಎಲ್ಲರೂ ಕಾಣುತ್ತಾರೆ, ಅಂಥ ಕನಸು ಕಂಡೆ ಇಂಥ ಕನಸು ಕಂಡೆ ಎಲ್ಲರೂ ರಂಗುರಂಗಿನ ಕಥೆಗಳನ್ನು ಹೇಳುತ್ತಾರೆ. ಕೆಲವರು ತಾವೇ ಕಂಡ ಕನಸು ಬೆನ್ನತ್ತಿಯೂ ಹೋಗುತ್ತಾರೆ. ಆದರೆ, ಯಾರೋ ಸಾಧುವೊಬ್ಬ ಕಂಡ ಕನಸಿನ ಬೆನ್ನತ್ತಿ ಕೇಂದ್ರ ಸರಕಾರವೇ ಹೋಗುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಕನಸು ನನಸಾಗುವುದಾ ಅಥವಾ ಇದು ನಗೆಪಾಟಲಿಗೀಡಾಗುವುದಾ ಎಂಬ ಬಗ್ಗೆಯೂ ಕುತೂಹಲ ಮೂಡಿದೆ.
ಅಂದ ಹಾಗೆ, ಈ ಕನಸು ಕಂಡ ಸಾಧು ಯಾರು? ಆತನಿಗೆ ಬಿದ್ದಂತಹ ಕನಸಾದರೂ ಎಂತಹುದು? ಆ ಕನಸು ಬೆನ್ನತ್ತಿ ಸರ್ವೇಕ್ಷಣ ಇಲಾಖೆ ಹೊಂಟಿದ್ದಾದರೂ ಹೇಗೆ? ಅತ್ಯಾಧುನಿಕ ತಂತ್ರಜ್ಞಾನಗಳಿದ್ದರೂ ಭೂಮಿಯ ಒಳಗೆ ಚಿನ್ನ ಹುದುಗಿಸಿದ್ದು ಯಾಕೆ ಗೊತ್ತಾಗಿಲ್ಲ? ಇಷ್ಟೊಂದು ಪ್ರಮಾಣದ ಚಿನ್ನವನ್ನು ಹುದುಗಿಸಿಟ್ಟಿದ್ದು ಯಾವ ರಾಜ? ಇಂಥ ಹುಚ್ಚು ಕನಸಿನ ಬೆನ್ನತ್ತಿ ಹೊಂಡಿರುವ ಇಲಾಖೆ ಹೇಳುವುದಾದರೂ ಏನು ಎಂಬ ಆಸಕ್ತಿ ಕೆರಳಿಸುವ ವಿಷಯಗಳು ಮುಂದಿವೆ.
ಎಲ್ಲಕ್ಕಿಂತ ಮೊದಲಾಗಿ ಈ ಕುರಿತು ಕೇಂದ್ರ ಸರಕಾರ ಸ್ಪಷ್ಟೀಕರಣ ಕೊಟ್ಟಿದೆ. "ಸಾಧುವೊಬ್ಬ ಕಂಡ ಕನಸಿನಂತೆ ಬಂಗಾರದ ನಿಧಿಯನ್ನು ಬೆನ್ನತ್ತಿ ಈ ಉತ್ಖನನ ಮಾಡಲಾಗುತ್ತಿಲ್ಲ. ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ನೀಡಿದ ವರದಿಯ ಆಧಾರದ ಮೇಲೆ ಭಾರತೀಯ ಸರ್ವೇಕ್ಷಣ ಇಲಾಖೆ ಈ ಉತ್ಖನನವನ್ನು ಕೈಗೊಂಡಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ಚಿನ್ನ ಮಾತ್ರವಲ್ಲ ಇಲ್ಲಿ ದೊರೆಯುವ ಪ್ರತಿಯೊಂದು ವಸ್ತುವೂ ಪುರಾತತ್ತ್ವ ಇಲಾಖೆಯ ದೃಷ್ಟಿಯಿಂದ ಮಹತ್ವದ್ದಾಗಿರಲಿದೆ" ಎಂದು ಎಲ್ಲ ಊಹಾಪೋಹಗಳಿಗೆ ಉತ್ತರ ನೀಡಿದೆ.
ದೌಡಿಯಾ ಖೇಡಾ ಗ್ರಾಮ ಎಲ್ಲಿದೆ?
ಸಾವಿರ ಟನ್ ಚಿನ್ನದ ನಿಧಿ ಇದೆ ಎನ್ನಲಾಗಿದ್ದರಿಂದ ದೌಡಿಯಾ ಖೇಡಾ ಗ್ರಾಮಕ್ಕೆ ಭಾರೀ ಮಹತ್ವ ಬಂದಿದೆ. ಈ ಗ್ರಾಮ ಉತ್ತರ ಪ್ರದೇಶದ ರಾಜಧಾನಿಯಿಂದ 50 ಕಿ.ಮೀ. ದೂರದಲ್ಲಿದ್ದು, ಉನ್ನಾವ್ ಜಿಲ್ಲೆಯಲ್ಲಿದೆ. ಎಂದೂ ಸುದ್ದಿಯಲ್ಲಿರದ ಖೇಡಾ ಗ್ರಾಮ ಈಗ ಎಲ್ಲರನ್ನೂ ಆಕರ್ಷಿಸುತ್ತಿರುವ ಪ್ರವಾಸಿ ತಾಣವಾಗಿದೆ. ಮಾಧ್ಯಮದವರು ಪೆನ್ನು ಪೇಪರು, ಕ್ಯಾಮೆರಾ ಹಿಡಿದುಕೊಂಡು ಈ ವಿಸ್ಮಯದ ಕ್ಷಣಕ್ಷಣದ ವರದಿ ಮಾಡುತ್ತಿದ್ದಾರೆ. ಜನಸಾಗರವೂ ಈ ಗ್ರಾಮದತ್ತ ಹರಿದುಬರುತ್ತಿದೆ.
ಕನಸು ಕಂಡ ಸಾಧು ಯಾರು?
ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಕನಸು ಕಂಡ ಶೋಭನ್ ಸರ್ಕಾರ್ ಎಂಬಾತ ಅವರತ್ತರ ಆಸುಪಾಸಿನ ಹಿಂದೂ ಸಾಧು. ಕಾನ್ಪುರದಿಂದ 25 ಕಿ.ಮೀ. ದೂರದಲ್ಲಿರುವ ಶೋಭನ್ ಎಂಬ ಹಳ್ಳಿಯಲ್ಲಿ ಹನುಮಾನ್ ಮತ್ತು ರಾಮನ ದೇವಸ್ಥಾನದ ಅರ್ಚಕನಾಗಿದ್ದಾನೆ. ಜನರು ಆತನನ್ನು ಸರ್ಕಾರ್, ಸ್ವಾಮೀಜಿ, ಭಗವಾನ್ ಎಂದೆಲ್ಲ ಕರೆಯುತ್ತಾರೆ. ಆತ ಕಂಡ ಕನಸಾದರೂ ಎಂಥಹುದು?
ಆತ ಕಂಡ ಕನಸಾದರೂ ಎಂಥಹುದು?
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ(1857)ರ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ತಿರುಗಿ ನಿಂತು 1858ರಲ್ಲಿ ಬ್ರಿಟಿಷರಿಂದ ಗಲ್ಲಿಗೇರಿದ ಉನ್ನಾವ್ ಜಿಲ್ಲೆಯ ರಾಜನಾಗಿದ್ದ ರಾಜಾ ರಾವ್ ರಾಮ್ ಬಕ್ಸ್ ಸಿಂಗ್, ಈ ಸಾಧೂ ಸರ್ಕಾರ್ ಕನಸಿನಲ್ಲಿ ಬಂದು ದೌಡಿಯಾ ಖೇಡ್ ಕೋಟೆಯಿರುವ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಹೂಳಲಾಗಿದೆ ಎಂದು ಸ್ವತಃ ಕನಸಿನಲ್ಲಿ ಬಂದು ಹೇಳಿದನಂತೆ!
ಸರ್ಕಾರ್ ಸರಕಾರವನ್ನು ಹೇಗೆ ನಂಬಿಸಿದ?
ಈ ಕನಸಿನಿಂದ ಸಾಧು ಸರ್ಕಾರ್ ಎಷ್ಟು ಪ್ರಭಾವಿತನಾದನೆಂದರೆ, ಸುಮ್ಮನೆ ಕುಳಿತುಕೊಳ್ಳದೆ ಕೇಂದ್ರ ಆಹಾರ ಸಂಸ್ಕರಣಾ ಸಚಿವರಾದ ಚರಣದಾಸ್ ಮಹಂತ್ ಅವರನ್ನು ಸಂಪರ್ಕಿಸಿ ತನ್ನ ಕನಸಿನ ಬಗ್ಗೆ ಹೇಳಿದ್ದಾರೆ. ಸಾಧು ಹೇಳಿದ ಕನಸನ್ನು ಹಗುರವಾಗಿ ಕಾಣದೆ ಮಹಂತ್ ಅವರು, ಭಾರತೀಯ ಸರ್ವೇಕ್ಷಣ ಇಲಾಖೆಗೆ ಸರ್ವೇ ಮಾಡಬೇಕೆಂದು ಪತ್ರ ಬರೆದಿದ್ದರು. ಗ್ರಾಮ ಪಂಚಾಯತ್ ಕೂಡ ಮ್ಯಾಜಿಸ್ಟ್ರೇಟ್ ರನ್ನು ಭೇಟಿ ಮಾಡಿ ಉತ್ಖನನಕ್ಕೆ ಅನುಮತಿ ಕೇಳಿತ್ತು.
ಭಾರತೀಯ ಭೂವಿಜ್ಞಾನ ಇಲಾಖೆಯಿಂದ ವರದಿ
ಮೊದಲಿಗೆ ಲಖನೌ ಪುರಾತತ್ತ್ವ ಶಾಸ್ತ್ರ ಇಲಾಖೆ ಅಧಿಕಾರಿ ಪ್ರಾಥಮಿಕ ಅಧ್ಯಯನ ನಡೆಸಿದ್ದಾರೆ. ನಂತರ, ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ ಸರ್ವೇ ಮೂಲಕ ಭಾರತೀಯ ಭೂವಿಜ್ಞಾನ ಇಲಾಖೆ ಅ.8ರಂದು ತನಿಖೆ ನಡೆಸಿದೆ. ದೌಡಿಯಾ ಖೇಡ್ ಕೋಟೆಯ ಆವರಣದ ಭೂಮಿಯ ಒಳಗೆ 5ರಿಂದ 20 ಮೀಟರ್ ಆಳದಲ್ಲಿ ಅಯಸ್ಕಾಂತ ಶಕ್ತಿಗೆ ಸ್ಪಂದಿಸದ ಲೋಹಗಳು ಅಥವಾ ಅಲಾಯ್ ಇರುವುದು ಕಂಡುಬಂದಿದೆ. ನಂತರವೇ, ಉತ್ಖನನ ಮಾಡಬಹುದೆಂದು ಭಾರತೀಯ ಸರ್ವೇಕ್ಷಣ ಇಲಾಖೆಗೆ ಆದೇಶ ನೀಡಲಾಗಿದೆ.
ಅ.18, ಶುಕ್ರವಾರದಂದು ಉತ್ಖನನ ಆರಂಭ
ಸಾಧು ಸರ್ಕಾರ್ ಪೂಜೆ ಸಲ್ಲಿಸಿದ ನಂತರ ಅರ್ಚಕರ ವೇದಘೋಷಗಳೊಂದಿಗೆ ಶುಕ್ರವಾರ ಮಧ್ಯಾಹ್ನ ಉತ್ಖನನ ಆರಂಭವಾಗಿದೆ. ಸ್ಥಳದಲ್ಲಿ ಕೋರ್ಟಿನ ಆದೇಶದಂತೆ ಕ್ಯಾಮೆರಾ ಅಳವಡಿಸಲಾಗಿದ್ದು, ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾಧುವನ್ನು ಉತ್ತರ ಪ್ರದೇಶದ ಮಂತ್ರಿ ಸುನೀಲ್ ಯಾದವ್ ಭೇಟಿ ಮಾಡಿ, ಒಂದು ವೇಳೆ ಚಿನ್ನದ ನಿಧಿ ದೊರೆತರೆ ರಾಜ್ಯಕ್ಕೆ ಸಿಂಹಪಾಲು ದೊರೆಯುವಂತೆ ಮಾಡಬೇಕೆಂದು ರಹಸ್ಯವಾಗಿ ಬೇಡಿಕೆಯನ್ನೂ ಇಟ್ಟಿದ್ದಾರೆ.
ನರೇಂದ್ರ ಮೋದಿ ಅಪಹಾಸ್ಯ
ಚಿನ್ನದ ನಿಧಿ ಹುಡುಕುವ ಪ್ರಹಸನವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಚೆನ್ನೈನಲ್ಲಿ ಮಾಡಿದ ಭಾಷಣದಲ್ಲಿ ಅಪಹಾಸ್ಯ ಮಾಡಿದ್ದಾರೆ. ಭೂಗರ್ಭದಲ್ಲಿರುವ ಕನಸಿನಲ್ಲಿ ಕಂಡ ಚಿನ್ನವನ್ನು ಹುಡುಕಲು ಕೇಂದ್ರ ಸರಕಾರ ಇಷ್ಟು ಬೆವರು ಹರಿಸುವ ಬದಲು ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತ ಬಿದ್ದಿರುವ ಕೋಟಿಗಟ್ಟಲೆ ಹುದುಗಿಸಲಾಗಿರುವ ಕಪ್ಪು ಹಣ ತರಲು ಬೆವರು ಹಸಿರಬೇಕೆಂದು ಕೆಣಕಿದ್ದಾರೆ.
ಸಾಗರೋಪಾದಿಯಲ್ಲಿ ಬರುತ್ತಿರುವ ಜನ
ಚಿನ್ನದ ನಿಧಿಗಾಗಿ ಉತ್ಖನನ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ಸಾವಿರ ಟನ್ ಎಂದರೇನು, ಆ ಚಿನ್ನದ ಮೌಲ್ಯವೆಷ್ಟಿರಬಹುದು ಎಂಬುದನ್ನು ಕೂಡ ತಿಳಿಯದ ಸುತ್ತಲಿನ ಹಳ್ಳಿಗಳ ಜನರು ದೌಡಿಯಾ ಖೇಡಾ ಗ್ರಾಮಕ್ಕೆ ಬರುತ್ತಿದ್ದಾರೆ.
ಚಿನ್ನ ಸಿಗಲಿಕ್ಕಿಲ್ಲ ಅಂತಾರೆ ಎಎಸ್ಐ ಚೀಫ್
ಉತ್ಖನನಕ್ಕೆ ಮುಂದಾಗಿರುವ ಭಾರತೀಯ ಸರ್ವೇಕ್ಷಣ ಇಲಾಖೆಯ ನಿರ್ದೇಶಕ ಡಾ. ಸೈಯದ್ ಜಮಾಲ್ ಹಸನ್ ಅವರು ದೌಡಿಯಾ ಖೇಡಾ ಕೋಟೆ ಪ್ರದೇಶದಲ್ಲಿ ಚಿನ್ನ ಸಿಗೋದು ಡೌಟು ಎಂದು ಹೇಳಿದ್ದಾರೆ. ರಾಜಕೀಯ, ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗೆ ಗುರಿಯಾಗಿರುವ ಈ ಕ್ರಮದಿಂದಾಗಿ ಇಲಾಖೆ ಮುಖಭಂಗ ಅನುಭವಿಸುವ ಹಂತಕ್ಕೆ ತಲುಪಿದೆ.