ಗೋಧ್ರಾ ಕರಸೇವಕರ ಹತ್ಯಾಕಾಂಡ, ಇಂದು ಗುಜರಾತ್ 'ಹೈ' ತೀರ್ಪು ಸಾಧ್ಯತೆ
2002ರ ಗೋಧ್ರಾ ರೈಲು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈ ಕೋರ್ಟ್ ಇಂದು (ಸೋಮವಾರ, ಅಕ್ಟೋಬರ್ 9) ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಫೆಬ್ರವರಿ 2002ರಲ್ಲಿ ಸಬರಮತಿ ಎಕ್ಸ್ ಪ್ರೆಸ್ ನ ಎಸ್-6 ಬೋಗಿಗೆ ಗೋಧ್ರಾ ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಅದರಲ್ಲಿದ್ದ ಐವತ್ತೊಂಬತ್ತು ಮಂದಿ (ಬಹುತೇಕರು ಕರಸೇವಕರು), ಅಯೋಧ್ಯೆಯಿಂದ ವಾಪಸಾಗುತ್ತಿದ್ದವರು ಸಜೀವ ದಹನವಾಗಿದ್ದರು. ಆ ನಂತರ ಇಡೀ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 2011ರಲ್ಲಿ ವಿಶೇಷ ಎಸ್ ಐಟಿ ಕೋರ್ಟ್ ನಿಂದ 31 ಮಂದಿಯನ್ನು ದೋಷಿಯೆಂದು ಘೋಷಿಸಲಾಯಿತು. 63 ಮಂದಿ ಖುಲಾಸೆಯಾಯಿತು. ದೋಷಿಗಳೆಂದು ತೀರ್ಮಾನವಾದವರ ಪೈಕಿ 11 ಮಂದಿಗೆ ಮರಣದಂಡನೆ, 20 ಮಂದಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಯಿತು.
ಖುಲಾಸೆಯಾದ 63 ಮಂದಿ ವಿರುದ್ಧ ಆ ನಂತರ ಹಲವು ಮೇಲ್ಮನವಿಗಳನ್ನು ಸರಕಾರದಿಂದ ಹೈ ಕೋರ್ಟ್ ಗೆ ಸಲ್ಲಿಸಲಾಯಿತು. ಪ್ರಮುಖ ಆರೋಪಿ ಮೌಲಾನಾ ಉಮರ್ಜಿ, ಗೋಧ್ರಾ ನಗರಸಭೆಯ ಆಗಿನ ಅಧ್ಯಕ್ಷನಾಗಿದ್ದ ಮೊಹಮ್ಮದ್ ಹುಸೇನ್ ಕಲೋಟ, ಮೊಹಮ್ಮದ್ ಅನ್ಸಾರಿ ಹಾಗೂ ನನುಮಿಯಾ ಚೌಧರಿ ಖುಲಾಸೆಯಾಗಿದ್ದರು.
ಗುಜರಾತ್ ಸರಕಾರದಿಂದ ಪ್ರಕರಣದ ತನಿಖೆಗಾಗಿ ನೇಮಿಸಿದ್ದ ನಾನಾವತಿ ಆಯೋಗವು, ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವಲ್ಲ, ಅದು ಯಾರೋ ಬೆಂಕಿ ಹೊತ್ತಿಸಿದ್ದು ಎಂದು ವರದಿಯಾಗಿದೆ.