ಗೋಧ್ರಾ ಹತ್ಯಾಕಾಂಡದ ಬಗ್ಗೆ ಮೋದಿ ಮನದಾಳದ ಮಾತು
ನವದೆಹಲಿ, ಮಾ 26: 2002ರಲ್ಲಿ ಗುಜರಾತಿನಲ್ಲಿ ನಡೆದ ಹಿಂಸಾಚಾರ ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಆದರೆ ಆ ಬಗ್ಗೆ ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ಹಿಂಸಾಚಾರ ಸಂಬಂಧ ದೇಶದ ಯಾವುದೇ ನ್ಯಾಯಾಲಯ ನನ್ನನ್ನು ದೋಷಿ ಎಂದು ಹೇಳಲಿಲ್ಲ. ಘಟನೆ ನಡೆದು ಹನ್ನೆರಡು ವರ್ಷ ಮೇಲಾಗಿದೆ. ಇನ್ನೂ ಮಾಧ್ಯಮಗಳು ನನ್ನನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟಿಲ್ಲ ಎಂದು ಮೋದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಬ್ರಿಟನ್ ಮೂಲದ ಲೇಖಕ ಮತ್ತು ಟಿವಿ ನಿರ್ಮಾಪಕ ಆಂಡಿ ಮರಿನೋ ಬರೆದಿರುವ " ನರೇಂದ್ರ ಮೋದಿ ಎ ಪೊಲಿಟಿಕಲ್ ಬಯೋಗ್ರಫಿ' ಜೀವನ ಚರಿತ್ರೆಯಲ್ಲಿ ಮೋದಿ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿಕೊಂಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಗೋಧ್ರಾ ಹಿಂಸಾಚಾರದ ಕುರಿತು ಮೋದಿ ನನ್ನ ಬಳಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರಚಾರದ ವೇಳೆ ಹೆಲಿಕಾಪ್ಟರ್ ನಲ್ಲಿ ಅವರ ಸಂದರ್ಶನ ನಡೆಸಿದ್ದೇನೆ. ಮೋದಿ ತನ್ನೊಂದಿಗೆ ನಡೆಸಿದ ಮುಕ್ತ ಮಾತುಕತೆಯನ್ನು ಆಧರಿಸಿ ಈ ಕೃತಿಯನ್ನು ಹೊರತರಲಾಗಿದೆ ಎಂದು ಮರಿನೋ ಹೇಳಿದ್ದಾರೆ.
ಗಲಭೆಯ ನಂತರ ಮೋದಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು. ಆದರೆ ಪಕ್ಷದ ವರಿಷ್ಠರು ಅವರನ್ನು ತಡೆದರು, ಜೊತೆಗೆ ಗುಜರಾತ್ ಜನತೆಗೂ ಮೋದಿ ರಾಜೀನಾಮೆ ನೀಡುವುದು ಬೇಕಾಗಿರಲಿಲ್ಲ ಎಂದು ಕೃತಿಯಲ್ಲಿ ಹೇಳಲಾಗಿದೆ.
ನರೇಂದ್ರ ಮೋದಿ ಜೀವನ ಚರಿತ್ರೆಯ ಪ್ರಮುಖಾಂಶಗಳು ಸ್ಲೈಡಿನಲ್ಲಿ..
ಕರಸೇವಕರು
ಫೆಬ್ರವರಿ 2002ರಲ್ಲಿ ಕರಸೇವಕರು ಪ್ರಯಾಣಿಸುತ್ತಿದ್ದ ಸಬರಮತಿ ರೈಲಿನ ಮೇಲೆ ಬೆಂಕಿ ಹಚ್ಚಲಾಯಿತು. ಆ ಘಟನೆ ಗುಜರಾತಿನಲ್ಲಿ ಭಾರೀ ಹಿಂಸಾಚಾರಕ್ಕೆ ನಾಂದಿ ಹಾಡಿತು. ಮೋದಿ ಆ ಸಮಯದಲ್ಲಿ ಅಕ್ಕಪಕ್ಕದ ರಾಜ್ಯಗಳ ಸಹಕಾರ ಕೋರಿದ್ದರು, ಅಲ್ಲದೇ ಸೇನೆಯನ್ನೂ ಸಜ್ಜಾಗಿರಲು ಸೂಚಿಸಿದ್ದರು ಎಂದು ಕೃತಿಯಲ್ಲಿ ಹೇಳಲಾಗಿದೆ.
ಭದ್ರತೆಗೆ ಮನವಿ
ಗೋಧ್ರಾ ಹತ್ಯಾಕಾಂಡದ ವೇಳೆ ಮೋದಿ ಪಕ್ಕದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಹೆಚ್ಚಿನ ಭದ್ರತಾ ಪಡೆಗೆ ಮನವಿ ಸಲ್ಲಿಸಿದ್ದರು. ಮಹಾರಾಷ್ಟ್ರ ಹೊರತಾಗಿ ಇತರ ಎರಡು ರಾಜ್ಯಗಳಿಂದ ನೆರವು ಸಿಕ್ಕಿರಲಿಲ್ಲ.
ಕೊಲಿನ್ಸ್ ಸಂಸ್ಥೆ ಹೊರತಂದ ಜೀವನ ಚರಿತ್ರೆ
ಹಾರ್ಪರ್ ಕೊಲಿನ್ಸ್ ಸಂಸ್ಥೆ ಹೊರತಂದಿರುವ 310 ಪುಟಗಳ ಮೋದಿ ಜೀವನ ಚರಿತ್ರೆಯಲ್ಲಿ, ಆ ಸಮಯದಲ್ಲಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊತ್, ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶಮುಖ್ ಮುಖ್ಯಮಂತ್ರಿಯಾಗಿದ್ದರು. ವಿಲಾಸ್ ರಾವ್ ಹೊರತಾಗಿ ಇತರ ಇಬ್ಬರೂ ಸಿಎಂಗಳು ನನ್ನ ಮನವಿಗೆ ಓಗೊಡಲಿಲ್ಲ ಎಂದು ಹೇಳಿದ್ದಾರೆ.
ಮನಬಿಚ್ಚಿ ಮಾತನಾಡಿದ ಮೋದಿ
ಗೋಧ್ರಾ ಹಿಂಸಾಚಾರದ ಬಗ್ಗೆ ಮೋದಿ ನನ್ನ ಬಳಿ ಮುಕ್ತವಾಗಿ ಮಾತನಾಡಿದ್ದಾರೆ. ಅಂದು ನಡೆದ ಘಟನೆಯ ಹಿಂದೆ/ಮುಂದೆ ಸವಿವರಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆಂದು ಜೀವನ ಚರಿತ್ರೆಯ ಲೇಖಕ ಮರಿನೋ ಹೇಳಿದ್ದಾರೆ.
ಮಾಧ್ಯಮದ ಬಗ್ಗೆ ಬೇಸರ
ನನ್ನ ಜೊತೆಗಿನ ಸಂದರ್ಶನದಲ್ಲಿ ಮೋದಿ ವಿಶೇಷವಾಗಿ ಮೋದಿ, ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗೋಧ್ರಾ ಹತ್ಯಾಕಾಂಡವನ್ನು ಈಗಲೂ ಮಾಧ್ಯಮಗಳು ತಮ್ಮ ಸ್ವಾರ್ಥಕ್ಕಾಗಿ ಕೆದಕುತ್ತಿವೆ ಎಂದು ಮೋದಿ ಹೇಳಿಕೆಯನ್ನು ಉಲ್ಲೇಖಿಸಿ ಲೇಖಕರು ಹೇಳಿದ್ದಾರೆ.