ಕರ್ನಾಟಕದಿಂದ ಜಾನುವಾರು ಸಾಗಾಟ ಬಂದ್, ಗೋವಾದಲ್ಲಿ ಬೀಫ್ ಗೆ ತತ್ವಾರ
ಪಣಜಿ, ಅಕ್ಟೋಬರ್ 25: ನೆರೆಯ ರಾಜ್ಯ ಗೋವಾದಲ್ಲಿ ದನದ ಮಾಂಸದ ಕೊರತೆ ಕಾಣಿಸಿಕೊಂಡಿದೆ. ತಾಂತ್ರಿಕ ಕಾರಣಗಳಿಗಾಗಿ ಕರ್ನಾಟಕದಿಂದ ಗೋವಾಕ್ಕೆ ಅಕ್ಟೋಬರ್ 10ರ ನಂತರ ಜಾನುವಾರುಗಳ ಸಾಗಾಟ ನಡೆದಿಲ್ಲ. ಹೀಗಾಗಿ ಗೋವಾದಲ್ಲಿ ಬೀಫ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಗೋಮಾಂಸದ ಕೊರತೆಗೆ ಸರಕಾರೇತರ ಸಂಸ್ಥೆಯೊಂದು ಕಾರಣ ಎಂದು ಮಾಂಸ ಮಾರಾಟಗಾರರು ದೂರಿದ್ದಾರೆ.
ಮಾಂಸ ಮಾರಾಟಗಾರರಿಗೆ ನೆರೆಯ ರಾಜ್ಯದಿಂದ ಜಾನುವಾರು ಸಾಗಾಟ ಮಾಡಲು ಜಿಎಂಸಿಎಲ್ ಪರ್ಮಿಟ್ ನೀಡುತ್ತದೆ. ಆದರೆ ಅಕ್ಟೋಬರ್ 10ರ ನಂತರ ತಾಂತ್ರಿಕ ಕಾರಣಗಳಿಗಾಗಿ ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ ಜಾನುವಾರು ಸಾಗಾಟ ಪೂರ್ತಿ ನಿಂತು ಹೋಗಿದೆ.
"ಕಡಿಯಲು ತಂದ ದನಗಳನ್ನು ಸರಕಾರೇತರ ಸಂಸ್ಥೆ 'ಗೋವಾ ಎನಿಮಲ್ ವೆಲ್ಫೇರ್ ಬೋರ್ಡ್'ನವರು ತೆಗೆದುಕೊಂಡು ಹೋಗಿ ಗೋಶಾಲೆಗೆ ಬಿಡುತ್ತಿದ್ದಾರೆ," ಎಂದು ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಮನ್ನ ಬೆಪಾರಿ ದೂರಿದ್ದಾರೆ.
ಬೇರೆ ರಾಜ್ಯಗಳಿಂದ ಜಾನುವಾರು ಸಾಗಾಟ ನಿಷೇಧಿಸಿರುವುದರಿಂದ ಗೋವಾ ಪಾಲಿಗೆ ಉಳಿದಿದ್ದು ಕರ್ನಾಟಕ ಮಾತ್ರ. ಈಗ ಕರ್ನಾಟಕದಿಂದಲೂ ಜಾನುವಾರು ಸಾಗಾಟ ಬಂದ್ ಆಗಿದ್ದು ಮುಂದಿನ ದಿನಗಳಲ್ಲಿ ಗೋವಾದಲ್ಲಿ ಬೀಫ್ ಗೆ ತತ್ವಾರ ಉಂಟಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿಂದೆ ಗೋವಾ ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ರಾಜ್ಯದಲ್ಲಿ ದನದ ಮಾಂಸಕ್ಕೆ ಕೊರತೆಯಾದರೆ ಕರ್ನಾಟಕದಿಂದ ತರುವುದಾಗಿ ಭರವಸೆ ನೀಡಿದ್ದರು. ಅವರು ಈಗೇನು ಹೇಳುತ್ತಾರೋ ಗೊತ್ತಿಲ್ಲ.