ಗೋವಾದ ಬೈನಾ ಬೀಚ್ ಕನ್ನಡಿಗರ ಮನೆಗಳು ನೆಲಸಮ
ಪಣಜಿ, ಸೆಪ್ಟೆಂಬರ್ 26 : ಗೋವಾದ ಬೈನಾ ಬೀಚ್ ನಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿಕೊಂಡು ಸಂಸಾರ ಹೂಡಿದ್ದ ಕನ್ನಡಿಗರ ಮನೆಗಳನ್ನು ಕಡೆಗೂ ನೆಲಸಮ ಮಾಡಲಾಗಿದೆ.
ಮಂಗಳವಾರ ಜೆಸಿಬಿ ಯಂತ್ರಗಳನ್ನು ತರಿಸಿದ ಜಿಲ್ಲಾಡಳಿತ ಸುಮಾರ್ 55 ಮನೆಗಳನ್ನು ಒಡೆದು ಹಾಕಿದ್ದು, ಈಗ ನಾಲ್ಕು ದಶಕಗಳಿಂದ ಅಲ್ಲಿಯೇ ನೆಲೆಸಿದ್ದ ಕನ್ನಡಿಗರು ನೆಲೆಯಿಲ್ಲದಂತಾಗಿದ್ದಾರೆ.
ಮಂಗಳವಾರ ಬೆಳಿಗ್ಗೆಯೇ ಸುಮಾರು 500ಕ್ಕೂ ಹೆಚ್ಚು ಜನರನ್ನು ಕರೆತಂದ ಜಿಲ್ಲಾಡಳಿತ ಕನ್ನಡಿಗರ ವಿರೋಧದ ನಡುವೆಯೂ ಧ್ವಂಸ ಮಾಡಿದೆ. ಈ ಪ್ರದೇಶ ಚರ್ಚೊಂದಕ್ಕೆ ಸೇರಿದೆಯೆಂದು ಹೇಳಲಾಗಿದ್ದು, ಅದನ್ನು ಕಟ್ಟಡ ನಿರ್ಮಾಣ ಕಂಪನಿಯೊಂದಕ್ಕೆ ಮಾರಾಟ ಮಾಡಲಾಗಿದೆ.
ಮಾರಾಟ ಮಾಡಿದಾಗ ಕನ್ನಡಿಗರಿಗೆ ಬೇರೆ ವಸತಿ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ನೀಡಲಾಗಿತ್ತು. ಆದರೆ, ಅದನ್ನೆಲ್ಲ ಗಾಳಿಗೆ ತೂರಲಾಗಿದ್ದು, ಅವರೀಗ ವಸತಿಗೆ ಜಾಗವಿಲ್ಲದೆ ಪರದಾಡುವಂತಾಗಿದೆ. ಅಲ್ಲಿರುವ ಕನ್ನಡಿಗರು ಹೆಚ್ಚಿನವರು ಗದಗ ಮತ್ತು ಬಾಗಲಕೋಟೆಯಿಂದ ಬಂದಿದ್ದು, ದಶಕಗಳಿಂದ ಇಲ್ಲಿಯೇ ನೆಲೆಸಿದ್ದರು.
ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಬಾರದೆಂದು ಕನ್ನಡಿಗರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅವರಿಗೆ ಅಲ್ಲಿ ಯಾವುದೇ ನ್ಯಾಯ ಸಿಕ್ಕಿರಲಿಲ್ಲ. ಕರ್ನಾಟಕ ಸರಕಾರದ ಸಹಾಯ ಯಾಚಿಸಿದ್ದರೂ ಅವರಿಗೆ ಇಲ್ಲಿಯವರೆಗೆ ಭರವಸೆಯ ಹೊರತಾಗಿ ಯಾವುದೇ ಸಹಾಯ ದೊರೆತಿಲ್ಲ.