ಗೋವಾಕ್ಕೆ ಹೊಸ ಸಿಎಂ ಹುಡುಕಾಟ: ಅವಕಾಶ ಕೊಡುವಂತೆ ಮಿತ್ರ ಪಕ್ಷದ ಬೇಡಿಕೆ
ಪಣಜಿ, ಸೆಪ್ಟೆಂಬರ್ 15: ಸತತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗೋವಾದ ಬಿಜೆಪಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸಿಎಂ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಲಿದ್ದಾರೆ. ಗೋವಾದ ಹೊಸ ಸಿಎಂ ಹುಡುಕಾಟ ಆರಂಭವಾಗಿದ್ದು ಮಿತ್ರಪಕ್ಷಗಳೂ ತಮಗೂ ಅವಕಾಶ ಕೊಡುವಂತೆ ಒತ್ತಾಯಿಸುತ್ತಿವೆ.
ಮನೋಹರ್ ಪರಿಕರ್ ಅನಾರೋಗ್ಯ; ಬಿಜೆಪಿಯಿಂದ ಪರ್ಯಾಯ ನಾಯಕನ ಆಯ್ಕೆ
ಮೆದೋಜೀರಕ ಗ್ರಂಥಿ ಸಮಸ್ಯೆಯಿಂದ ಸತತವಾಗಿ ಬಳಲುತ್ತಿರುವ ಮನೋಹರ ಪರಿಕ್ಕರ್ ಅವರು ಕೆಲವು ದಿನಗಳ ಹಿಂದಷ್ಟೆ ಅಮೆರಿಕದಿಂದ ಚಿಕಿತ್ಸೆ ಪಡೆದು ಗೋವಾಕ್ಕೆ ವಾಪಸ್ಸಾಗಿದ್ದರು. ಬಂದ ನಂತರವೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಪರಿಕ್ಕರ್ ಅವರು ದಾಖಲಾಗಲಿದ್ದು, ಹಾಗಾಗಿ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಬೇರೆಯವರಿಗೆ ಆ ಸ್ಥಾನ ನೀಡಲಿದ್ದಾರೆ.
ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೋವಾ, ತಕರಾರು ಅಂತ್ಯ
ಈಗಾಗಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮನೋಹರ ಪರಿಕ್ಕರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮನೋಹರ ಪರಿಕ್ಕರ್ ಅವರ ಬದಲಿಗೆ ಬಿಜೆಪಿಯವರೇ ಆದ ವಿಜಯ್ ಪುರಾಣಿಕ್ ಅಥವಾ ಪಕ್ಷದ ಕಾರ್ಯದರ್ಶಿ ಬಿ.ಎಲ್.ಸಂತೋಶ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಆದರೆ ಸರ್ಕಾರಿ ರಚಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಿತ್ರ ಪಕ್ಷಗಳು ತಮ್ಮ ಸದಸ್ಯರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದು. ಸಿಎಂ ಆಯ್ಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳೂ ಇವೆ.
ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದರೂ ಸಹಿತ ಬಿಜೆಪಿಯು ಜಿಎಫ್ಪಿ, ಎಂಜಿಪಿ ಮತ್ತು ಪಕ್ಷೇತರರ ಸಹಾಯದೊಂದಿಗೆ ಸರ್ಕಾರ ರಚಿಸಿದೆ. ಸರ್ಕಾರ ತನ್ನ ಐದು ವರ್ಷ ಪೂರೈಸಲು ಇನ್ನು ಹದಿನೆಂಟು ತಿಂಗಳು ಬಾಕಿ ಇದ್ದು ಈ ಅವಧಿಯನ್ನು ಮಿತ್ರ ಪಕ್ಷಗಳ ಸದಸ್ಯರಿಗೆ ಸಿಎಂ ಆಗಲು ಬಿಟ್ಟುಕೊಡಬೇಕು ಎಂಬ ಧ್ವನಿಯೂ ಎದ್ದಿದೆ.
ಇಂದು ಸಂಜೆ ವೇಳೆಗೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಗೋವಾಕ್ಕೆ ತೆರಳಿ ಸಿಎಂ ಆಯ್ಕೆ ವಿಷಯವನ್ನು ಅಂತಿಮಗೊಳಿಸುವುದಾಗಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದರೆ ಹೊಸ ಮುಖ್ಯಮಂತ್ರಿಯು ತಾತ್ಕಾಲಿಕವಾಗಿಯಷ್ಟೆ ಇರಲಿದ್ದು, ಪರಿಕ್ಕರ್ ಅವರು ಗುಣವಾದ ನಂತರ ಮತ್ತೆ ಅವರೇ ಸಿಎಂ ಖುರ್ಚಿ ಮೇಲೆ ವಿರಾಜಮಾನರಾಗಲಿದ್ದಾರೆ.