ಇನ್ನಾರೆಂಟು ತಿಂಗಳಲ್ಲಿ ದೇಶದಲ್ಲಿನ ಕಾರ್ಮೋಡ ನಾಶ
ಮುಂಬೈ, ಅ.1: 'ಇನ್ನಾರೆಂಟು ತಿಂಗಳು ಅಷ್ಟೇ. ಅದಾಗುತ್ತಿದ್ದಂತೆ ದೇಶದ ಮೇಲೆ ಕವಿದಿರುವ ಕಾರ್ಮೋಡ ನಾಶವಾಗಲಿದೆ' ಎಂದು ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.
ಭಾರತದ ವಜ್ರ ವ್ಯಾಪಾರಿಗಳು ಭಾಗವಹಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ನ.ಮೋ. 'ಸದ್ಯಕ್ಕೆ ದೇಶವನ್ನು ಕತ್ತಲು ಆವರಿಸಿದೆ. ಆದರೆ ಇನ್ನಾರು ತಿಂಗಳಲ್ಲಿ ಈ ಕತ್ತಲು/ಕಾರ್ಮೋಡ ನಾಶವಾಗಿ ದೇಶವು ನಿಮ್ಮ ವಜ್ರದಂತೆ ಫಳಫಳ ಹೊಳೆಯತೊಡಗುತ್ತದೆ' ಎಂದು ಆಶಿಸಿದರು.
'ಸದ್ಯಕ್ಕೆ ರೂಪಾಯಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ನಿಮ್ಮ ವಜ್ರೋದ್ಯಮ ಎಂದಿಗೂ ಮಂಕಾಗುವುದಿಲ್ಲ' ಎಂದು ಮೋದಿ ಹಾಲಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.
ಮುಂಬೈನ Bharat Diamond Bourse's Diamond Hall ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ಳಿಯಲ್ಲಿ ಮೋದಿ ತುಲಾಭಾರ ನಡೆಯಿತು. ಆ ಸಂದರ್ಭದಲ್ಲಿ ಶಿವ ಸೇನೆಯ ಉದ್ಧವ್ ಠಾಕ್ರೆ ಅವರೂ ಹಾಜರಿದ್ದರು.
'ದೇಶದಲ್ಲಿ ಒಂದು ವರ್ಗ ನನ್ನ ಮೇಲೆ ಸಾಕಷ್ಟು ಬೈಗುಳಗಳ ಪ್ರಯೋಗ ಮಾಡುತ್ತಿದೆ. ಗೂಗಲ್ ಸರ್ಚ್ ಇಂಜಿನ್ನಿಗೆ ಹೋಗಿ ನನ್ನ ಹೆಸರನ್ನು ಟೈಪ್ ಮಾಡಿದರೆ ಪುಂಖಾನುಪುಂಖವಾಗಿ ನನ್ನ ವಿರುದ್ಧ ಬೈಗುಳಗಳ ಮಳೆಯಾಗಿರುವುದು ಗೋಚರವಾಗುತ್ತದೆ. ಇಷ್ಟೆಲ್ಲ ಬೂಗುಳ ನಡುವೆ ಜನ ನನ್ನ ಪರವಾಗಿ ನಿಂತಿದ್ದಾರೆ. ಅವರು ನನ್ನ ಕೈಬಿಡುವುದಿಲ್ಲ. ಅದಷ್ಟೇ ನನಗೆ ಬೇಕಿರುವುದು' ಎಂದು ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಬಲಿ ಹಾಕುತ್ತಿದೆ. ಆದರೆ, ನಾನು ಸಿಬಿಐ ಭೂತಕ್ಕೆ ತಲೆಬಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಉದ್ಯಮಿಗಳ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಸರ್ಕಾರ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯತ್ನಿಸುತ್ತಿದೆ. ಸಿಬಿಐ ಮುಂದಿಟ್ಟು ನನ್ನನ್ನು ಹೆದರಿಸಲು ಯತ್ನಿಸುತ್ತಿದೆ. ಸಿಬಿಐ ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಅವರ ಬಾಯಿ ಮುಚ್ಚಿಸಲು ಯಶಸ್ವಿಯಾಗಿರಬಹುದು. ಆದರೆ, ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಸಿಬಿಐಗೆ ತಲೆಬಾಗುವುದಿಲ್ಲ. ಐಬಿ, ರಾ ಅಥವಾ ಜಗತ್ತಿನ ಯಾವುದೇ ತನಿಖಾ ಸಂಸ್ಥೆಗೂ ಹೆದರುವುದಿಲ್ಲ ಎಂದು ಗುಡುಗಿದರು.