ಪ್ರವಾಹ ಆಯ್ತು, ಮುಂದೆ ಕಾದಿದೆ ಬಿಸಿ ಗಾಳಿಯ ಅಪಾಯ: ಜಾಗತಿಕ ತಾಪಮಾನ ವರದಿ
ನವದೆಹಲಿ, ಅಕ್ಟೋಬರ್ 8: ದೇಶದ ವಿವಿಧೆಡೆ ಅತಿವೃಷ್ಟಿ, ಪ್ರವಾಹದ ಸಂಕಟಗಳು ತಗ್ಗಿವೆ. ಆದರೆ, ಅವು ಮಾಡಿದ ಅನಾಹುತದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು. ಈ ನಡುವೆಯೇ ದೇಶದಾದ್ಯಂತ ಅಪಾಯಕಾರಿ ಬಿಸಿ ಗಾಳಿ ಸುಡುವ ಭೀತಿ ಎದುರಾಗಿದೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ಸರ್ಕಾರಿ ಸಮಿತಿ (ಐಪಿಸಿಸಿ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೈಗಾರಿಕಾ ಪೂರ್ವ ಮಟ್ಟಕ್ಕಿಂತ (ಕೈಗಾರಿಕಾ ಕ್ರಾಂತಿ ನಡೆಯುವ ಮುನ್ನ ಇದ್ದ ತಾಪಮಾನ) ಜಾಗತಿಕ ತಾಪಮಾನ ಶೇ 2 ಡಿಗ್ರಿಯಷ್ಟು ಹೆಚ್ಚಳವಾದರೆ 2015 ರಲ್ಲಿ 2,500 ಮಂದಿ ಬಿಸಿಗಾಳಿಯಿಂದ ಮೃತಪಟ್ಟಂತೆಯೇ ಭೀಕರ ವಾತಾವರಣ ಎದುರಾಗುವ ಅಪಾಯವಿದೆ.
ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?
ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದಂತೆ ಸೋಮವಾರ ಬಿಡುಗಡೆ ಮಾಡಿರುವ ಜಗತ್ತಿನ ಅತಿ ದೊಡ್ಡ ಪರಾಮರ್ಶನಾ ವರದಿ ಇದಾಗಿದೆ.
ಡಿಸೆಂಬರ್ನಲ್ಲಿ ಸಮಾವೇಶ
ಪೊಲಾಂಡ್ನಲ್ಲಿ ಈ ಡಿಸೆಂಬರ್ನಲ್ಲಿ ನಡೆಯಲಿರುವ 'ಕೆಟೊವೈಸ್ ಜಾಗತಿಕ ತಾಪಮಾನ ಸಮಾವೇಶ'ದಲ್ಲಿ ಈ ವರದಿಯ ಅನುಷ್ಠಾನದ ಕುರಿತು ಚರ್ಚೆಗಳು ನಡೆಯಲಿವೆ.
ಈ ಸಂದರ್ಭದಲ್ಲಿ ತಾಪಮಾನ ವೈಪರೀತ್ಯವನ್ನು ತಡೆಯುವ ಪ್ಯಾರಿಸ್ ಒಪ್ಪಂದದ ಪರಾಮರ್ಶೆಯನ್ನು ಸರ್ಕಾರಗಳು ನಡೆಸಲಿವೆ.
ಅಧಿಕ ಪ್ರಮಾಣದಲ್ಲಿ ಇಂಗಾಲ ಹೊರಬಿಡುವುದರಲ್ಲಿ ಜಗತ್ತಿನ ದೇಶಗಳಲ್ಲಿ ಒಂದಾದ ಭಾರತ, ಈ ಜಾಗತಿಕ ಸಮಾವೇಶದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಅಪಾಯ ತಪ್ಪಿದ್ದಲ್ಲ
ಹೀಗೆಯೇ ಮುಂದುವರಿದರೆ 2030ರ ವೇಳೆಗೆ ಸರಾಸರಿ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮಟ್ಟವನ್ನು ಕಾಯ್ದುಕೊಳ್ಳುವ ಗುರಿಯನ್ನು ಮೀರಲಿದೆ ಎಂದು ತಾಪಮಾನದ ಕುರಿತಾದ ಈ ವಿಶೇಷ ವರದಿ ಎಚ್ಚರಿಕೆಯ ಗಂಟೆ ಮೊಳಗಿಸಿದೆ.
'ಇದೇ ರೀತಿ ಹವಾಮಾನ ವೈಪರೀತ್ಯ ಮುಂದುವರಿದಲ್ಲಿ, 2030-2052 ರ ಹೊತ್ತಿಗೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ (ಕೈಗಾರಿಕಾಪೂರ್ವ ಮಟ್ಟಕ್ಕಿಂತ ಮೇಲೆ) ತಲುಪಲಿದೆ' ಎಂದು ವರದಿ ತಿಳಿಸಿದೆ.
ಹವಾಮಾನ ವೈಪರೀತ್ಯ, ಮೀನುಗಾರರ ಬದುಕಿಗೇ ಲಂಗರು!
ಕೋಲ್ಕತಾ, ಕರಾಚಿಯಲ್ಲಿ ಭೀಕರ ಸ್ಥಿತಿ
ಐಪಿಸಿಸಿ ವರದಿಯು ಉಪಖಂಡದಲ್ಲಿ ಬಿಸಿ ಗಾಳಿಯ ಪ್ರಮಾಣ ಕೋಲ್ಕತ ಮತ್ತು ಕರಾಚಿ ನಗರಗಳಲ್ಲಿ ಬಿಸಿಗಾಳಿಯ ಅಪಾಯ ತೀವ್ರ ಪ್ರಮಾಣದಲ್ಲಿದೆ ಎಂದು ವಿಶೇಷವಾಗಿ ಉಲ್ಲೇಖಿಸಿದೆ.
'ಕರಾಚಿ ಮತ್ತು ಕೋಲ್ಕತಾದಲ್ಲಿ 2015ರಲ್ಲಿ ಉಂಟಾಗಿದ್ದ ಭೀಕರ ಶಾಖ ಗಾಳಿಗೆ ಸಮನಾದ ವಾತಾವರಣ ಉಂಟಾಗುವ ನಿರೀಕ್ಷೆಯಿದೆ. ಶಾಖ ಸಂಬಂಧಿ ಅನಾಹುತಗಳ ಹೆಚ್ಚಳಕ್ಕೆ ಜಾಗತಿಕ ತಾಪಮಾನ ಭಾರಿ ಪ್ರಮಾಣದ ಕೊಡುಗೆ ನೀಡುತ್ತಿದೆ' ಎಂದು ಅದು ತಿಳಿಸಿದೆ.
ಸಿಓ2 ಪ್ರಮಾಣ ತಗ್ಗಿಸಿ
ಜಾಗತಿಕ ತಾಪಮಾನವು ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಲಕ್ಷಾಂತರ ಜೀವಗಳಿಗೆ ಎರವಾಗಲಿದೆ ಎಂದು ವರದಿಯ ಸಹ ಲೇಖಕ, ಕ್ಲೈಮ್ಯಾಟ್ ಟ್ರ್ಯಾಕರ್ ಸಂಸ್ಥೆಯ ಆರ್ಥರ್ ವೈನ್ಸ್ ಹೇಳಿದ್ದಾರೆ.
ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಪಿಟ್ಟುಕೊಳ್ಳಲು 2010ರಿಂದ ಆಗುತ್ತಿರುವ ಮಾನವ ನಿರ್ಮಿತ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆಯ ಮಟ್ಟದ ಸರಾಸರಿಯನ್ನು 2030ರ ವೇಳೆಗೆ ಶೇ 45ರಷ್ಟು ತಗ್ಗಿಸಬೇಕು ಮತ್ತು 2050ರ ವೇಳೆಗೆ ಶೂನ್ಯಕ್ಕೆ ತರಬೇಕು.
ಬಿಸಿಲ ಝಳ ಎದುರಿಸಲು ಜಪಾನಿಗರು ಐಡ್ಯಾ ಮಾಡ್ಯಾರ!
ತಾಪಮಾನ ಹೆಚ್ಚಾದರೆ ಬಡತನವೂ ಹೆಚ್ಚಳ
ಐಪಿಸಿಸಿ ವರದಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ವಾಷಿಂಗ್ಟನ್ ವಿಶ್ವವಿದ್ಯಾಲಯ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕ್ಲೈಮ್ಯಾಟ್ ಟ್ರ್ಯಾಕರ್ಗಳ ಪರಿಣತರು ಪ್ರತ್ಯೇಕವಾಗಿ '1.5 ಆರೋಗ್ಯ ವರದಿ' ಅಧ್ಯಾಯ ರಚಿಸಿದ್ದಾರೆ.
ಇದರಲ್ಲಿ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನಗಳು, 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳದ ಪರಿಣಾಮದಿಂದ ಅತ್ಯಂತ ಕೆಟ್ಟ ರೀತಿಯಲ್ಲಿ ಹಾನಿಗೆ ಒಳಗಾಗಲಿರುವ ದೇಶಗಳಾಗಿವೆ ಎಂದು ಹೇಳಲಾಗಿದೆ. ಹವಾಮಾನ ಬದಲಾವಣೆಯು ಆಹಾರದ ಅಸುರಕ್ಷಿತತೆ, ಅಧಿಕ ಆಹಾರ ಬೆಲೆ, ಆದಾಯ ನಷ್ಟ, ಜೀವನಾಧಾರ ಅವಕಾಶಗಳ ವಂಚನೆ, ಆರೋಗ್ಯದ ಮೇಲೆ ದುಷ್ಪರಿಣಾಮ ಮತ್ತು ಜನಸಂಖ್ಯೆಯ ಸ್ಥಳಾಂತರದಂತಹ ಸಮಸ್ಯೆಗಳ ಮೂಲಕ 'ಬಡತನದ ದ್ವಿಗುಣ'ಕ್ಕೆ ಕಾರಣವಾಗಲಿದೆ ಎಂದು ವರದಿ ವಿವರಿಸಿದೆ.
1.5 ಡಿಗ್ರಿ ಸೆಲ್ಸಿಯಸ್ ಸಾಧ್ಯವಾದರೆ...
ವರದಿ ಅನ್ವಯ, ಜಾಗತಿಕ ತಾಪಮಾನದಿಂದ ಬಡತನ ಹೆಚ್ಚಲಿದೆ. ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್ನಿಂದ 1.5 ಡಿಗ್ರಿ ಸೆಲ್ಸಿಯಸ್ಗೆ ನಿಯಂತ್ರಿಸುವುದು 2050ರ ವೇಳೆಗೆ ನೂರಾರು ಲಕ್ಷ ಸಂಖ್ಯೆಯ ಜನರು ವಾತಾವರಣ ಸಂಬಂಧಿ ಅಪಾಯಗಳು ಮತ್ತು ಬಡತನಕ್ಕೆ ಒಳಗಾಗುವುದನ್ನು ತಡೆಯಲಿದೆ. ಅಲ್ಲದೆ, ಈ ಸಾಧನೆಯು ಮುಖ್ಯವಾಗಿ ಏಷ್ಯಾದಲ್ಲಿನ ಜೋಳ, ಅಕ್ಕಿ, ಗೋಧಿ ಮತ್ತು ಇತರೆ ಆಹಾರಧಾನ್ಯ ಬೆಳೆಗಳಲ್ಲಿನ ನಷ್ಟವನ್ನು ತಡೆಯಲಿದೆ. ಮಾನವಜನ್ಯ ಸರಾಸರಿ ಇಂಗಾಲದ ಡೈಆಕ್ಸೈಡ್ ಸೃಷ್ಟಿಯ ಪ್ರಮಾಣವನ್ನು ನಿಯಂತ್ರಿಸಲು ಉಪಶಮನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
ಹವಮಾನ ವೈಪರಿತ್ಯದಿಂದ ದಕ್ಷಿಣಕನ್ನಡದಲ್ಲಿ 40 ಅಡಿ ಮುಂದೆ ಬಂದ ಕಡಲು
929 ಮಿಲಿಯನ್ ಟನ್ ಇಂಗಾಲ
ಭಾರತ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಾರಣದಿಂದ ಭಾರತದ ಹವಾಮಾಣದಲ್ಲಿ ವಿಪರೀತ ಬದಲಾವಣೆಗಳು ಉಂಟಾಗುತ್ತಿವೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು ಅಣು ಸ್ಥಾವರ ವಲಯವೊಂದರಿಂದಲೇ ಸುಮಾರು 929 ಮಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್ ಹೊರಬಿಟ್ಟಿದೆ. ಅಣು ಸ್ಥಾವರಗಳು ದೇಶದ ಶೇ 79ರಷ್ಟು ವಿದ್ಯುತ್ಅನ್ನು ಉತ್ಪಾದನೆ ಮಾಡುತ್ತಿವೆ.