ಹೆಣ್ಣಿಗೆ ನೀಡಿ ಆದ್ಯತೆ, ನೋಡಿ ಭಾರತವೇ ಬದಲಾಗುತ್ತೆ!
ಹೆಚ್ಚೂಕಡಿಮೆ ಇಡೀ ಭಾರತದಲ್ಲಿ ಇಂಥದೊಂದು ದೃಶ್ಯವನ್ನು ಪ್ರತಿ ಮನೆಯಲ್ಲೂ ಕಾಣುತ್ತೇವೆ. ಅದೇನೆಂದರೆ, ಗಂಡ ಮತ್ತು ಮಕ್ಕಳನ್ನು ಊಟಕ್ಕೆ ಕೂಡಿಸಿ, ಚೆನ್ನಾಗಿ ಬಡಿಸಿ, ಅವರು ಉಂಡ ನಂತರ ಹೆಂಡತಿ ಊಟ ಮಾಡುವುದು. ಉಳಿದಿದ್ದರೆ ಹೊಟ್ಟೆತುಂಬ ಊಟ ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರೇ ಗತಿ.
ಕಾಸ್ಮೊಪಾಲಿಟನ್ ನಗರಗಳಲ್ಲಿ, ಗಂಡ ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋಗುವ ಕುಟುಂಬಗಳಲ್ಲಿ ಇಂಥ ದೃಶ್ಯ ಅಷ್ಟೊಂದಾಗಿ ಕಾಣದಿರಬಹುದು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ, ಬಡ ಕುಟುಂಬಗಳಲ್ಲಿ ಇನ್ನೂ ಇಂಥದೊಂದು ಪದ್ಧತಿ ಚಾಲ್ತಿಯಲ್ಲಿದೆ. ನಾವು ಇನ್ನೂ ಎಷ್ಟು ಹಿಂದುಳಿದಿದ್ದೇವೆ ಎಂಬುದಕ್ಕೆ ಇದೇ ಸಾಕ್ಷಿ.
ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡಿದ ಕೇರಳ ಕಂಪನಿ
ಹೊರಗೆ ದುಡಿದು ಬರುವ ಗಂಡನಿಗೆ ಊಟದಲ್ಲಿ ಪ್ರಥಮ ಆದ್ಯತೆ, ನಂತರ ಮಕ್ಕಳು. ಆದರೆ, ಸಂಬಳವನ್ನು ತರದಿದ್ದರೂ ಮನೆಯಲ್ಲಿ ಇಡೀದಿನ ಕತ್ತೆಯಂತೆ ದುಡಿಯುವ ಹೆಂಡತಿಗೆ ಮಾತ್ರ ಪುರುಷರಿಗೆ ಸಮಾನವಾದ ಹಕ್ಕಾಗಲಿ ಆದ್ಯತೆಯಾಗಲಿ ಇಲ್ಲ. ಕನಿಷ್ಠಪಕ್ಷ ಊಟದಲ್ಲಾದರೂ ಸಮಾನತೆ ತರಬೇಕಲ್ಲವೆ? ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಮಕ್ಕಳು ಪೌಷ್ಟಿಕಾಂಶವಿಲ್ಲದೆ ಸಾಯುತ್ತಿದ್ದಾರೆ. ಇದು ಏಕೆ?
ಈ ಕುರಿತು ಹೈದರಾಬಾದ್ ನಲ್ಲಿರುವ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ದಶಕಗಳ ಹಿಂದೆಯೇ ಸಾಕಷ್ಟು ಅಧ್ಯಯನ ಮಾಡಿ 'ಭಾರತದಲ್ಲಿ ಆಹಾರದ ಹಕ್ಕು' ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿತ್ತು. ಅದು ಹಲವಾರು ವಿಶಿಷ್ಟ ಸಂಗತಿಗಳನ್ನು ಹೊರಹಾಕಿದೆ. ಇದರ ಆಧಾರದ ಮೇಲೆ ಸಮಾನತೆ ತರಲು ಪ್ರಯತ್ನಗಳನ್ನು ನಡೆಸಲಾಗಿದೆ.
ಈಕೆಯ ಬದುಕಲ್ಲಿ 'ಚೈತ್ರ'ಮಾಸ ಮೂಡಿಸೋದು ನಿಮ್ಮ ಕೈಯಲ್ಲಿದೆ
ಈ ಹಿನ್ನೆಲೆಯಲ್ಲಿ ರಾಜಸ್ತಾನದ ಬಡ ಬುಡಕಟ್ಟು ಜನಾಂಗವಿರುವ ಸಿರೋಹಿ ಮತ್ತು ಬನ್ಸವಾರಾ ಜಿಲ್ಲೆಗಳಲ್ಲಿ ಒಂದು ಅಧ್ಯಯನವನ್ನು ಕೈಗೊಳ್ಳಲಾಯಿತು. ಆಹಾರದಲ್ಲಿ ಸಮಾನತೆ ತರಲು ನಡೆಸಲಾದ ಈ ಪ್ರಯೋಗ ಮತ್ತು ಅಧ್ಯಯನ ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಹೊರಹಾಕಿದೆ. ಮತ್ತು ಇದನ್ನು ಇಡೀ ಭಾರತದಲ್ಲಿ ಪಾಲಿಸಿದರೆ ಹೇಗೆ ಭಾರತವೇ ಬದಲಾಗುತ್ತದೆ ಎಂಬ ಸತ್ಯವನ್ನೂ ಕಂಡುಕೊಂಡಿದೆ.
ಒಟ್ಟಿಗೆ ಕೂತು ಉಣ್ಣುವ ಪದ್ಧತಿ
ಗಂಡನೊಬ್ಬನೇ ಮೊದಲು ಊಟಕ್ಕೆ ಕೂಡುವ ಪದ್ಧತಿಯ ಬದಲಾಗಿ ಇಡೀ ಕುಟುಂಬ ಒಟ್ಟಿಗೆ ಕೂತು ಉಣ್ಣುವ ಪದ್ಧತಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾದ ಕುಟುಂಬಗಳಲ್ಲಿ ಜಾರಿಗೆ ತರಲಾಯಿತು. ಮೊದಲಿಗೆ ಗಂಡ ಮಾತ್ರ ಯಾರಿಗೆ ಎಷ್ಟು ಆಹಾರ ಸಿಗಬೇಕು ಎಂದು ನಿರ್ಧರಿಸುತ್ತಿದ್ದ. ಆದರೆ, ಈಗ ಇಡೀ ಕುಟುಂಬದವರು ನಿರ್ಧರಿಸುವ ಪರಿಪಾಠವನ್ನು ಜಾರಿಗೆ ತರಲಾಯಿತು.
ಗಂಡ ಹೆಂಡಿರ ನಡುವೆ ಅನ್ಯೋನ್ಯ ಸಂಬಂಧ
ಯಾವ ಕುಟುಂಬದಲ್ಲಿ ಮಹಿಳೆಗೆ ಹೆಚ್ಚಿನ ಸ್ಥಾನಮಾನ, ಮಾತುಗಳಿಗೆ ತಿಮ್ಮತ್ತು ಕೊಡುತ್ತಾನೋ ಆ ಕುಟುಂಬದಲ್ಲಿ ಗಂಡ ಹೆಂಡಿರ ನಡುವೆ ಅನ್ಯೋನ್ಯ ಸಂಬಂಧವಿರುತ್ತದೆ ಎಂಬುದು ತಿಳಿದುಬಂದಿತು. ನವಜಾತ ಶಿಶುಗಳಿಗೆ ಹಾಲೂಡಿಸುವ ವಿಷಯದಲ್ಲಾಗಲಿ, ಕುಟುಂಬದ ಆರೋಗ್ಯದ ಸ್ವಾಸ್ಥ್ಯ ಕಾಪಾಡುವಲ್ಲಾಗಲಿ ಯಾವುದೇ ತೊಂದರೆ ಕಂಡುಬಂದಿರಲಿಲ್ಲ.
ಜನುಮದಲ್ಲೇ ಕಂಡಿರಲಿಲ್ಲ ಹಣ್ಣು ತರಕಾರಿ
ಹೆಂಗಸರಿಗೆ ಮತ್ತು ಮಕ್ಕಳಿಗೆ ದೊರೆಯಬೇಕಾದ ಆಹಾರವನ್ನು ಹೆಚ್ಚಿಸುವುದು ಮಾತ್ರವಲ್ಲ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲಾಗಿತ್ತು. ಅವರಿಗೆ ಹಣ್ಣು ಮತ್ತು ತಾಜಾ ತರಕಾರಿಯನ್ನು ಬಳಸಲು ಸೂಚಿಸಲಾಗಿತ್ತು. ಇಂಥ ಆಹಾರ ಪದ್ಧತಿಯನ್ನು ಅವರು ಜನುಮದಲ್ಲೇ ಕಂಡಿರಲಿಲ್ಲ. ತಿಂಗಳಿಗೆ 2ರಿಂದ 3 ಸಾವಿರ ರುಪಾಯಿ ದುಡಿಯುವ ಕುಟುಂಬಗಳಿಗೆ ಇಂಥ ಸವಲತ್ತಾದರೂ ಎಲ್ಲಿಂದ ಸಿಗಬೇಕು. ಸಿಕ್ಕರೂ ಅದು ಗಂಡಸರಿಗೆ ಮಾತ್ರ ಸಿಗುತ್ತಿತ್ತು. ಅಲ್ಲದೆ, ಅವರಿಗೆ ಮನೆಯಲ್ಲೇ ತರಕಾರಿ ಬೆಳೆಯುವ ತರಬೇತಿಯನ್ನೂ ನೀಡಲಾಯಿತು.
ಅಂಗನವಾಡಿಯಲ್ಲಿ ಮಕ್ಕಳಿಗೆ ಉಚಿತ ಊಟ
ಇವರಲ್ಲಿ ಎಷ್ಟೋ ಕುಟುಂಬಗಳಿಗೆ ಅಂಗನವಾಡಿಯಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಗಳಿಂದ ಕೂಡಿದ ಉಚಿತ ಆಹಾರ ಸಿಗುತ್ತದೆ ಎಂದು ಕೂಡ ಗೊತ್ತಿರಲಿಲ್ಲ. ಅವರಿಗೆ ಆರೋಗ್ಯಕ್ಕಾಗಿ ಹಣ ಉಳಿಸುವ, ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯಗಳ ಕುರಿತೂ ಮಾಹಿತಿ ನೀಡಲಾಯಿತು. ಈಗ, ಆರೋಗ್ಯಕ್ಕಾಗಿಯೇ ಡಬ್ಬಿಗಳಲ್ಲಿ ಒಂದಿಷ್ಟು ಹಣವನ್ನು ಕೂಡಿಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಹೆಣ್ಣಿಗೆ ಆದ್ಯತೆ, ಭಾರತವೇ ಬದಲಾಗುತ್ತೆ
ಈ ಪ್ರಯೋಗಕ್ಕೆ 30 ಸಾವಿರಕ್ಕೂ ಹೆಚ್ಚು ಜನರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 403 ಮಹಿಳೆಯರು ಕೂಡ ಇದ್ದರು. ಅವರನ್ನು ಸಂದರ್ಶಿಸಿ ಅವರ ತೊಂದರೆಗಳ ಬಗ್ಗೆ ಮಾಹಿತಿ ಪಡೆದು ಈ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದಲ್ಲಿ, ಕುಟುಂಬದ ಸ್ವಾಸ್ಥ್ಯದಲ್ಲಿ ಗಮನಾರ್ಹ ಬದಲಾವಣೆ ಬಂದಿದೆ. ಇದು ಗಂಡಸರ ಅರಿವಿಗೆ ಕೂಡ ಬಂದಿದೆ ಎಂದು ಆ ಅಧ್ಯಯನ ತಿಳಿಸಿದೆ.