ಕಳ್ಳತನದ ಆರೋಪ : ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ
ದಾಮೋಹ್. ನವೆಂಬರ್ 05 : ಹಣ ಕದ್ದಿದ್ದಾರೆಂದು ಆರೋಪಿಸಿ ಶಿಕ್ಷಕಿಯೇ ವಿದ್ಯಾರ್ಥಿನಿಯರಿಬ್ಬರಿಗೆ ಬಟ್ಟೆ ಬಿಚ್ಚುವಂತೆ ಒತ್ತಾಯ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ದಾಮೋಹ್ ದಲ್ಲಿ ನವೆಂಬರ್ 4ರ ಶನಿವಾರ ನಡೆದಿದೆ.
ಶಿಕ್ಷಕರ ಕಿರುಕುಳ ತಾಳಲಾರದೆ ಕೇರಳದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ದಾಮೋಹ್ ದ ರಾಣಿ ದುರ್ಗಾವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯ 70 ರೂ ಕಳೆದಿದೆ. ಇದಕ್ಕೆ ಆ ಶಾಲೆಯ ಶಿಕ್ಷಕಿ ಜ್ಯೋತಿ ಗುಪ್ತಾ ಇಬ್ಬರು ವಿದ್ಯಾರ್ಥಿಯರ ಮೇಲೆ ಶಂಕೆ ಪಟ್ಟು ತಪಾಸಣೆ ನಡೆಸಲೆಂದು ಅವರಿಬ್ಬರನ್ನು ಒಳವಸ್ತ್ರದ ಸಮೇತ ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ ಎನ್ನಲಾಗಿದೆ.
'ಹಣ ದೊರಕದಿದ್ದಲ್ಲಿ, ಮಾಟ ಮಂತ್ರ ಮಾಡಿಸಿ ತೊಂದರೆ ಕೊಡಿಸುವುದಾಗಿಯೂ ಶಿಕ್ಷಕಿ ಬೆದರಿಕೆ ಒಡ್ಡಿದ್ದಳು' ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಆದರೆ ಶಿಕ್ಷಕಿ ಜ್ಯೋತಿ ಕುಮಾರಿ ಆರೋಪವನ್ನು ತಳ್ಳಿಹಾಕಿದ್ದು, 'ಹಣ ಕಳುವಾದ ಬಗ್ಗೆ ವಿದ್ಯಾರ್ಥಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ಎಲ್ಲರ ಬ್ಯಾಗುಗಳನ್ನು ಪರೀಕ್ಷೆ ಮಾಡಲಾಯಿತಷ್ಟೆ ವಿನಹಾ ಬಟ್ಟೆ ಬಿಚ್ಚಲು ಹೇಳಿಲ್ಲ' ಎಂದಿದ್ದಾರೆ.
ಪ್ರಕರಣದ ತನಿಖೆ ನಡೆಸಲೆಂದು ಇಬ್ಬರು ಮಹಿಳಾ ಪ್ರಾಂಶುಪಾಲರನ್ನು ದಾಮೋಹ್ ಜಿಲ್ಲೆಯ ಶಿಕ್ಷಣ ಅಧಿಕಾರಿ ನೇಮಿಸಿದ್ದು, ಶಿಕ್ಷಕಿಯದ್ದು ತಪ್ಪೆಂದು ಸಾಬೀತಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಟೈಮ್ಸ್ ಇಂಡಿಯಾ ಪತ್ರಿಕೆಯು, ನ್ಯಾಷನಲ್ ಸ್ಕೂಲಿಂಗ್ ಆಫ್ ಓಪನ್ ಇನ್ಸ್ಟಿಟ್ಯೂಟ್ ನ ಮಾಹಿತಿ ಆಧರಿಸಿ 'ಮಧ್ಯಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ 50 ಪ್ರತಿಶತ ಶಿಕ್ಷಕರು ಸೂಕ್ತ ತರಬೇತಿ ಪಡೆದಿಲ್ಲ' ಎಂದು ವರದಿ ಮಾಡಿತ್ತು. ವರದಿಯ ಕುರಿತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು ಮಧ್ಯಪ್ರದೇಶ ಶಿಕ್ಷಣ ಇಲಾಖೆ ಸಾರ್ವಜನಿಕರಿಂದ ಭಾರಿ ಟೀಕೆ ಎದುರಿಸುವಂತೆ ಮಾಡಿದೆ.