ಕಾರ್ನಾಡ್ ಹೇಳಿಕೆಗೆ ವ್ಯಾಪಕ ವಿರೋಧ: ಅವರೊಬ್ಬ ತಲೆತಿರುಕ ಸಾಹಿತಿ, ಗೌಡ
ಬೆಂಗಳೂರು, ನ 11: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯಾ, ಇದಕ್ಕೆ ಸಂಘ ಪರಿವಾರದ ಸದಸ್ಯರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆಯಾ, ಬುದ್ದಿಜೀವಿಗಳ ಕೆಲವೊಂದು ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿಲ್ಲವೇ?
ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿನ ಪರವಿರೋಧ ತಿಕ್ಕಾಟದ ನಡುವೆ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದೆ. ಮಂಗಳವಾರ (ನ 10) ಜಯಂತಿ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ನೀಡಿದ ಹೇಳಿಕೆ ಈಗ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ.
ಗಿರೀಶ್ ಕಾರ್ನಾಡ್ ಒಬ್ಬ ಸರಕಾರದ ಗುಲಾಮ, ಗಿರೀಶ್ ಕಾರ್ನಾಡ್ ಒಬ್ಬ ತಲೆತಿರುಕ ಸಾಹಿತಿ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದ್ದರೆ. (ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ)
ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿನ ಪರ ವಿರೋಧ ಹೋರಾಟಕ್ಕೆ ಹಿಂದೂ, ಮುಸ್ಲಿಂ ಟಚ್ ನೀಡಿದ ಕಾರ್ನಾಡ್, ಟಿಪ್ಪು ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಸಂಘ ಪರಿವಾರದವರು ಜಯಂತಿ ಆಚರಣೆಗೆ ವಿರೋಧಿಸುತ್ತಿದ್ದಾರೆಂದು ಟೀಕಿಸಿದ್ದರು.
ಜೊತೆಗೆ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರು ಇಡುವ ಬದಲು ಟಿಪ್ಪು ಹೆಸರಿಡ ಬೇಕಿತ್ತು ಎನ್ನುವ ಕಾರ್ನಾಡ್ ಹೇಳಿಕೆ ಈಗ ಚರ್ಚೆಯ ವಿಷಯವಾಗಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಮಾರಂಭದಲ್ಲಿ ಬಿಜೆಪಿಯನ್ನು ಕಿಚಾಯಿಸಿದ ಕಾರ್ನಾಡ್, ಅವರ ಹೇಳಿಕೆಗೆ ಯಾರು ಏನೆಂದರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಶಿವಾಜಿಯ ಹೆಸರು ಮುಂಬೈಗೆ ನಿಲ್ದಾಣಕ್ಕೆ
ಕೆಂಪೇಗೌಡ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ನಾಡು ಕಟ್ಟಿದ ನಾಡಪ್ರಭು ಎಂದು ಹೇಳಿಕೆ ನೀಡಿದ ಕಾರ್ನಾಡ್, ಮುಂಬೈನಲ್ಲಿ ವಿಮಾನ ನಿಲ್ದಾಣಕ್ಕೆ ಛತ್ರಪತಿ ಶಿವಾಜಿಯ ಹೆಸರಿಡಲಿಲ್ಲವೇ ಎಂದು ತನ್ನ ಹೇಳಿಕೆಯನ್ನು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದರು.
ಬಿಹಾರ ಜಯಂತಿಯನ್ನು ಆಚರಿಸಿ
ಬಿಹಾರದಲ್ಲಿ ಬಿಜೆಪಿಗಾದ ಮುಖಭಂಗವನ್ನು ಪರೋಕ್ಷವಾಗಿ 'ಟಿಪ್ಪು ಜಯಂತಿ ಜೊತೆಗೆ ಬಿಹಾರ ಜಯಂತಿಯನ್ನೂ ಆಚರಿಸ ಬೇಕು' ಎಂದು ಕಿಚಾಯಿಸುತ್ತಾ ಕಾರ್ನಾಡ್, 300 ವರ್ಷಗಳ ಇತಿಹಾಸದಲ್ಲೇ ಟಿಪ್ಪುಗೆ ಸರಿಸಾಟಿಯಾದ ಮತ್ತೊಬ್ಬ ಕನ್ನಡಿಗ ಹುಟ್ಟಿಲ್ಲ. ವಿಜಯನಗರ ಸಾಮ್ರಾಜ್ಯ ಹರಿದು ಹಂಚಿ ಹೋಗಿದ್ದಾಗ ಕನ್ನಡ ನಾಡನ್ನು ಒಂದುಗೂಡಿಸಿದ ವ್ಯಕ್ತಿ ಎಂದು ಟಿಪ್ಪುಸುಲ್ತಾನ್ ಗುಣಗಾನ ಮಾಡಿದ್ದರು.
ಅಶೋಕ್ ವಾಗ್ದಾಳಿ
ಒಂದು ಸಮುದಾಯವನ್ನು ಓಲೈಸಲು ವಿವಾದಕಾರಿ ಹೇಳಿಕೆ ನೀಡುವುದು ತರವಲ್ಲ. ಕಾರ್ನಾಡ್ ಹೇಳಿಕೆಯಿಂದ ಒಕ್ಕಲಿಗರ ಸಮಾಜಕ್ಕೆ ತೀವ್ರ ನೋವಾಗಿದೆ. ಕಾರ್ನಾಡ್ ಹೇಳಿಕೆಯನ್ನು ಒಕ್ಕಲಿಗ ಸಮುದಾಯ ಮತ್ತು ಬೆಂಗಳೂರಿನ ಜನ ಸಹಿಸುವುದಿಲ್ಲ. ಕಾರ್ನಾಡ್ ಹೇಳಿಕೆ ವಿರುದ್ದ ಬಿಜೆಪಿ ನಾಳೆ (ನ 11) ಭಾರೀ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಆರ್ ಅಶೋಕ್ ಕಿಡಿಕಾರಿದ್ದಾರೆ.
ನಾರಾಯಣ ಗೌಡ
ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ನಾಡಿನ ದುರಂತ. ಇವರೊಬ್ಬ ಸರಕಾರೀ ಏಜೆಂಟ್, ತಲೆತಿರುಕ ಸಾಹಿತಿ. ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಬಗ್ಗೆ ಕೇವಲವಾಗಿ ಮಾತನಾಡಿರುವ ಕಾರ್ನಾಡರ ಹೇಳಿಕೆಯನ್ನು ನಾಡಿನ ಜನತೆ ಖಂಡಿಸಬೇಕು - ನಾರಾಯಣ ಗೌಡ
ಕೆಂಪೇಗೌಡರ ಹೆಸರಿಟ್ಟಿರುವುದು ಸರ್ಕಾರವಲ್ಲ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದು ಸರ್ಕಾರವಲ್ಲ. ಇದು ಬೆಂಗಳೂರು ಜನರ ತೀರ್ಮಾನ. ಕನ್ನಡಿಗರ ಹೋರಾಟದಿಂದ ಇದು ಸಾಧ್ಯವಾಯಿತು. ಕಾರ್ನಾಡ್ ಮೊದಲು ಅರಿತುಕೊಂಡು ಮಾತನಾಡಲಿ. ಸಾಮರಸ್ಯದಿಂದಿರುವ ಜನರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಮಾಡುವುದು ಕಾರ್ನಾಡ್ ಅವರಿಗೆ ಶೋಭೆ ತರುವುದಿಲ್ಲ ಎಂದು ನಾರಾಯಣ ಗೌಡ ಹೇಳಿದ್ದಾರೆ.
ಕಾರ್ನಾಡ್ ತನ್ನ ಹೇಳಿಕೆಯನ್ನು ವಾಪಸ್ ಪಡೆಯಲಿ
ಸಿಎಂ ಸಮ್ಮುಖದಲ್ಲೇ ಕೆಂಪೇಗೌಡರಿಗೆ ಅವಮಾನ ಆಗಿರುವುದನ್ನು ನಾವು ಸಹಿಸುವುದಿಲ್ಲ. ಗಿರೀಶ್ ಕಾರ್ನಾಡ್ ತನ್ನ ಹೇಳಿಕೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ನಟರಾಜ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಾಪ್ ಸಿಂಹ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದು ಬೆಂಗಳೂರು ಜನರ ಒತ್ತಾಸೆ. ಗಿರೀಶ್ ಕಾರ್ನಾಡ್ ಅವರು ಟಿಪ್ಪು ಅವರ ಹೆಸರು ಪ್ರಸ್ತಾವಿಸಿರುವುದು ಎಷ್ಟರ ಮಟ್ಟಿಗೆ ಸರಿ, ಕೂಡಲೇ ಕಾರ್ನಾಡ್ ತನ್ನ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಯಡಿಯೂರಪ್ಪ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎನ್ನುವ ಹೇಳಿಕೆ ಸರಿಯಲ್ಲ. ಈ ಹೇಳಿಕೆ ಸಮಾಜದಲ್ಲಿ ಅಶಾಂತಿ ಮತ್ತು ಗೊಂದಲದ ವಾತಾವರಣ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಸಾಹಿತಿಗಳ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.