ದೇಶದಲ್ಲಿ ಅತಿವೃಷ್ಟಿ, ಮೋದಿಗೆ ಅನಾವೃಷ್ಟಿ : ಭವಿಷ್ಯವಾಣಿ!
ಇದು ಕೋಡಿಶ್ರೀಗಳು ನುಡಿದ ಭವಿಷ್ಯವಲ್ಲ, ಅಥವಾ ಮೈಲಾರನ ಸನ್ನಿಧಾನದಲ್ಲಿ ಗೊರವಯ್ಯ ನುಡಿದ ಭವಿಷ್ಯವೂ ಅಲ್ಲ. ಇದು ಮಹಾರಾಷ್ಟ್ರದ ಜಿಲ್ಲೆಯೊಂದರಿಂದ ಹೊರಬಿದ್ದ ಭವಿಷ್ಯ.
ಮಹಾರಾಷ್ಟ್ರದ ಬುಲ್ಡಾನ ಎನ್ನುವ ಜಿಲ್ಲೆಯಲ್ಲಿ ಅಕ್ಷಯ ತೃತೀಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಭವಿಷ್ಯವಾಣಿ ನುಡಿಯುವ ಪ್ರಕ್ರಿಯೆಯಿದೆ. ಇದು 350ವರ್ಷದಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.
ಕಳೆದ ಅಕ್ಷಯ ತೃತೀಯಾದ ಮುನ್ನಾದಿನವಾದ ಭಾನುವಾರ (ಮೇ8) ಊರಿನ ಹತ್ತು ಪ್ರಮುಖರು ಮತ್ತು ಗ್ರಾಮಸ್ಥರ ಮುಂದೆ ನಡೆದ ಈ ಪ್ರಕ್ರಿಯೆಯಲ್ಲಿ ದೇಶದಲ್ಲಿ ಅಲ್ಲಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಆಗಲಿದೆ ಎನ್ನುವ ಭವಿಷ್ಯವಾಣಿ ಹೊರಬಿದ್ದಿದೆ. (ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ)
ಜೊತೆಗೆ, ಪ್ರಧಾನಿ ನರೇಂದ್ರ ಮೋದಿಗೆ ಸಂಕಷ್ಟದ ದಿನ ಎದುರಾಗಲಿದೆ, ದೇಶದಲ್ಲಿ ಆರ್ಥಿಕ ಸಮಸ್ಯೆ ಉಲ್ಬಣವಾಗಲಿದೆ ಎನ್ನುವ ಭವಿಷ್ಯ ನುಡಿಯಲಾಗಿದೆ ಎಂದು ಜೀನ್ಯೂಸ್ ಅಂತರ್ಜಾಲ ವರದಿ ಮಾಡಿದೆ.[ಮೇ 2016 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]
ಹದಿನೆಂಟು ಬಗೆಯ ದವಸಧಾನ್ಯಗಳನ್ನು ಬಳಸಿ, ಅದನ್ನು ಗದ್ದೆಯೊಂದರಲ್ಲಿ ಸುಟ್ಟು, ಒಂದು ರಾತ್ರಿ ಹಾಗೇಬಿಟ್ಟು ಮರುದಿನ ಬೆಳಗ್ಗೆ ಅದರ ಭಸ್ಮವನ್ನು ಪರೀಕ್ಷಿಸಿ ಭವಿಷ್ಯ ನುಡಿಯಲಾಗುತ್ತದೆ. 'ಘಟ್ ಮಾ೦ಡಣಿ' ಎಂದು ಕರೆಯಲ್ಪಡುವ ಈ ಭವಿಷ್ಯವಾಣಿಯ ಬಗ್ಗೆ ಹೆಚ್ಚಿನ ಮಾಹಿತಿ ಸ್ಲೈಡಿನಲ್ಲಿ..
ಘಟ್ ಮಾ೦ಡಣಿ
350ವರ್ಷದಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ ಇದಾಗಿದ್ದು, ಮಹಾರಾಷ್ಟ್ರದ ಬುಲ್ಡಾನ ಜಿಲ್ಲೆಯ, ಜಲ್ಗಾಂವ್ ಜಾಮೋದ್ ತಾಲೂಕಿನ ಬೆಂದ್ವಾಲ್ ಎನ್ನುವ ಹಳ್ಳಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.
ಚ೦ದ್ರಬನ್ ಮಹಾರಾಜ್
ಸುಮಾರು 350 ವಷ೯ಗಳ ಹಿ೦ದೆ ಚ೦ದ್ರಬನ್ ಮಹಾರಾಜ್ ಎ೦ಬವರು ಈ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಅಂದಿನಿಂದ ಈ ಪದ್ದತಿಯನ್ನು ಚಂದ್ರಬನ್ ಕುಟುಂಬದವರು ಮತ್ತು ಗ್ರಾಮಸ್ಥರು ಅಕ್ಷಯ ತೃತೀಯಾ ಸಂದರ್ಭದಲ್ಲಿ ನಡೆಸುಕೊಂಡು ಬರುತ್ತಿದ್ದಾರೆ. ಮಹಾರಾಷ್ಟ್ರ ಭಾಗದಲ್ಲಿ ಇಲ್ಲಿ ಹೊರಬೀಳುವ ಭವಿಷ್ಯವಾಣಿಗೆ ಬಹಳ ಮಹತ್ವವಿದೆ.
ಅತಿವೃಷ್ಠಿ, ಅನಾವೃಷ್ಠಿ
ಹವಾಮಾನ ಇಲಾಖೆ ಈ ಬಾರಿ ಸಾಮಾನ್ಯ ಮುಂಗಾರು ಇರಲಿದೆ ಎಂದು ಹೇಳಿದ್ದರೂ, ಮುಂಗಾರು ಮಳೆ ಈ ಬಾರಿ ಕೆಲವೊಂದು ಭಾಗದಲ್ಲಿ ವಿಪರೀತವಾಗಿ ಸುರಿಯಲಿದೆ, ಮತ್ತಷ್ಟು ಭಾಗದಲ್ಲಿ ಅನಾವೃಷ್ಟಿ ಸಮಸ್ಯೆ ಉಂಟಾಗಲಿದೆ. ಜೊತೆಗೆ ಬೆಳೆಹಾನಿಯೂ ಆಗಲಿದೆ ಎಂದು ಭವಿಷ್ಯವಾಣಿ ನುಡಿಯಲಾಗಿದೆ.
ನರೇಂದ್ರ ಮೋದಿ
ಭವಿಷ್ಯವಾಣಿಯ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಒತ್ತಡಕ್ಕೊಳಗಾಗುವ ಸನ್ನಿವೇಶಗಳು ಎದುರಾಗಲಿವೆ. ಆದರೆ ಕೇಂದ್ರ ಸರಕಾರಕ್ಕೆ ತೊಂದರೆಯಾಗುವ ಸಾಧ್ಯತೆಗಳಿಲ್ಲ ಮತ್ತು ಚುನಾವಣೆ ನಡೆಯುವ ಸಾಧ್ಯತೆಯೂ ಇಲ್ಲ, ಗಡಿ ಸಮಸ್ಯೆ ಹೆಚ್ಚಾಗಲಿದೆ ಎಂದು ಭವಿಷ್ಯವಾಣಿ ಹೊರಬಿದ್ದಿದೆ.
ಹೇಗೆ ನಡೆಯುತ್ತೆ ಈ ಭವಿಷ್ಯವಾಣಿಯ ಪ್ರಕ್ರಿಯೆ
ಅಕ್ಕಿ, ಬೇಳೆ ಸಹಿತ ಹದಿನೆಂಟು ಬಗೆಯ ವಿವಿಧ ಧಾನ್ಯ, ಸಂಜೋರಿ ಎನ್ನುವ ಒಂದು ಬಗೆಯ ಸಿಹಿಖಾದ್ಯ, ಚಕ್ಕುಲಿ ರೂಪದ ಕುರ್ದಾಯಿ ಎನ್ನುವ ತಿಂಡಿ ಮತ್ತು ಹಪ್ಪಳವನ್ನು ಗದ್ದೆಯಲ್ಲಿ ಹಳ್ಳತೋಡಿ ಅದರಲ್ಲಿಟ್ಟು ಸುಡಲಾಗುತ್ತದೆ. ಅದನ್ನು ಒಂದು ರಾತ್ರಿ ಹಾಗೇ ಬಿಡಲಾಗುತ್ತದೆ.
ಭಸ್ಮದ ಮೂಲಕ ಭವಿಷ್ಯ
ಹೂತಿಟ್ಟ ವಸ್ತುಗಳನ್ನು ಮರುದಿನ ಮುಂಜಾನೆ ಚಂದ್ರಬನ್ ಮಹಾರಾಜ್ ಅವರ ಕುಟುಂಬದ ಶರಂಗದಾರ್ ಮಹಾರಾಜ್ ಮತ್ತು ಪುಂಜಾಜಿ ಮಹಾರಾಜ್ ಸಮ್ಮುಖದಲ್ಲಿ ಸುಟ್ಟ ವಸ್ತುಗಳ ಭಸ್ಮವನ್ನು ಆಧರಿಸಿ ಈ ಭವಿಷ್ಯ ನುಡಿಯಲಾಗುತ್ತದೆ. ಮಳೆ, ದೇಶದ ವಿದ್ಯಮಾನಗಳ ಜೊತೆಗೆ ಮುಂಗಾರಿನಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಎನ್ನುವ ಭವಿಷ್ಯವನ್ನೂ ನುಡಿಯಲಾಗುತ್ತದೆ.