ಇಂದಿರಾ ಗಾಂಧಿಗೆ ಸೆಡ್ಡು ಹೊಡೆದಿದ್ದ ಕಾರ್ಮಿಕ ನಾಯಕ ಜಾರ್ಜ್
Recommended Video
ಬೆಂಗಳೂರು, ಜನವರಿ 29: ಜಾರ್ಜ್ ಫರ್ನಾಂಡಿಸ್ ಅವರದು ದುಡಿಯುವ ವರ್ಗದ ಪರವಾದ ಹೋರಾಟ. ಸಮಾಜವಾದಿ ನಿಲುವುಗಳನ್ನು ಹೊಂದಿದ್ದ ಅವರು ಕಡೆಯವರೆಗೂ ಅದಕ್ಕೆ ಬದ್ಧರಾಗಿದ್ದವರು. ಆದರೆ, ರಾಜಕೀಯದಲ್ಲಿ ಅವರ ಆಯ್ಕೆಗಳು ಅಚ್ಚರಿಯ ಮೂಲವೂ ಹೌದು.
ಕಾಂಗ್ರೆಸ್ ಕಡೆಗಿನ ಅವರ ತೀವ್ರತರ ಆಕ್ರೋಶವೇ ಅವರನ್ನು ಬಲಪಂಥೀಯ ನಿಲುವುಳ್ಳ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸುವಂತೆ ಮಾಡಿತು. ಆದರೂ ಅವರು ತಮ್ಮ ವಿಚಾರಧಾರೆಗಳಲ್ಲಿ ರಾಜಿಯಾಗಿರಲಿಲ್ಲ.
ಬೆಂಕಿಯುಂಡೆಯಂತಹ ಕಾರ್ಮಿಕ ನಾಯಕ: ಜಾರ್ಜ್ ಅವರನ್ನು ನೆನೆದ ಮೋದಿ
ತಮ್ಮ ಹೋರಾಟಕ್ಕೆ ಎಂತಹ ಅಡ್ಡಿ ಬಂದರೂ ಅವರು ಬಗ್ಗುವುದಿಲ್ಲ ಎನ್ನುವುದು ತುರ್ತು ಪರಿಸ್ಥಿತಿಯ ಸಂದರ್ಭವೇ ಸಾಕ್ಷಿಯಾಗಿತ್ತು. ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಗೆ ಅಷ್ಟೇ ತೀಕ್ಷ್ಣವಾದ ಪ್ರತಿಭಟನೆ ವ್ಯಕ್ತಪಡಿಸಿದವರಲ್ಲಿ ಜಾರ್ಜ್ ಕೂಡ ಒಬ್ಬರು.
ಜಾರ್ಜ್ ಅವರು ನೋಡಲು ತೀರಾ ಸಾಧಾರಣ ಮನುಷ್ಯನಂತೆ ಕಾಣಿಸುತ್ತಿದ್ದರು. ತೆಳುವಾದ, ಇಸ್ತ್ರಿ ಕಾಣದ ಖಾದಿಯ ಪೈಜಾಮ ಮತ್ತು ಕುರ್ತಾ. ದಪ್ಪ ಚೌಕಟ್ಟಿನ ಕನ್ನಡಕ, ಸಾಮಾನ್ಯ ಚಪ್ಪಲಿ ಧರಿಸಿ ಬರುತ್ತಿದ್ದ ಅವರ ಹಿಂದೆ ಲಕ್ಷಾಂತರ ಕಾರ್ಮಿಕರ ದಂಡು ಇತ್ತು.
Breaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಸರ್ಕಾರದ ವಿರುದ್ಧ ಸಿಡಿದೆದ್ದವರನ್ನೆಲ್ಲಾ ಇಂದಿರಾ ಸರ್ಕಾರ ಜೈಲಿಗಟ್ಟುವ ಕ್ರಮ ಅನುಸರಿಸಿತ್ತು. ಆಗ ಮಾರುವೇಷ ಧರಿಸಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದ ಜಾರ್ಜ್, ಇಂದಿರಾ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದ್ದರು.
ಐತಿಹಾಸಿಕ ರೈಲ್ವೆ ಮುಷ್ಕರ
1974ರಲ್ಲಿ ಕೆಲಸದ ಅವಧಿ ಕಡಿತ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ದೇಶದಾದ್ಯಂತ ರೈಲ್ವೆ ಕೆಲಸಗಾರರ ಬೃಹತ್ ಪ್ರತಿಭಟನೆ ನಡೆಯಿತು. ಅದರ ಪ್ರಮುಖ ರೂವಾರಿಯಾಗಿದ್ದವರು ಜಾರ್ಜ್.
ಸತತ ಮೂರು ವಾರ ಈ ಮುಷ್ಕರ ನಡೆದು ಪ್ರಮುಖ ಸಂಪರ್ಕ ವ್ಯವಸ್ಥೆ ತಲೆಕೆಳಗಾಯಿತು. ಇದನ್ನು ನಿಯಂತ್ರಿಸಲಾಗದೆ ಕಂಗಾಲಾದ ಇಂದಿರಾ ಗಾಂಧಿ, ಈ ಮುಷ್ಕರ ನಡೆಸಲು ಜಾರ್ಜ್, ವಿದೇಶದಿಂದ ಹಣಪಡೆದಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ಜಾರ್ಜ್ ಪತ್ರವೊಂದನ್ನು ಬರೆದರು. 'ಮೇಡಂ ಡಿಕ್ಟೇಟರ್, ನೀವು ಸುಳ್ಳುಗಾತಿ. ರೈಲು ಮುಷ್ಕರ ನಡೆಸಲು ನಾನು ವಿದೇಶದಿಂದ ಹಣ ಪಡೆದ ಆರೋಪಕ್ಕೆ ದಾಖಲೆ ತೋರಿಸಿ. ಅದು ನಿಜವೇ ಆಗಿದ್ದರೆ ಗುಂಡು ಹೊಡೆದು ನನ್ನನ್ನು ಸಾಯಿಸಿ' ಎಂದು ಕಟುವಾಗಿ ಹೇಳಿದ್ದರು.
|
ಡೈನಾಮೈಟ್ ಕೇಸ್!
ಇಂದಿರಾ ಸರ್ಕಾರದ ನೀತಿಗಳನ್ನು ವಿರೋಧಿಸಲು ಅವರು ಅನುಸರಿಸಿದ್ದು ಹಿಂಸಾಮಾರ್ಗವನ್ನು. ಜನರಿಗೆ ತೊಂದರೆಯಾಗದಂತೆ ರಾತ್ರಿ ವೇಳೆ ಸರ್ಕಾರಿ ಕಚೇರಿಗಳಲ್ಲಿ ಡೈನಾಮೈಟ್ ಇರಿಸಿ ಸ್ಫೋಟಿಸುವುದು, ಈ ಮೂಲಕ ಜನರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮೂಡಿಸುವುದು ಅವರ ಯೋಜನೆಯಾಗಿತ್ತು. ಇದಕ್ಕಾಗಿ ಬರೋಡಾದಲ್ಲಿ ಸಿಡಿಮದ್ದುಗಳನ್ನು ಸಂಗ್ರಹಿಸಿಟ್ಟಿದ್ದರು.
ಜಾರ್ಜ್ ಅವರನ್ನು ಮಟ್ಟಹಾಕಲು ತಂತ್ರ ರೂಪಿಸುತ್ತಿದ್ದ ಇಂದಿರಾ ಗಾಂಧಿ ಅವರಿಗೆ ಈ ಚಟುವಟಿಕೆ ವರದಾನವಾತು. ಸಿಡಿಮದ್ದುಗಳ ಕಳ್ಳಸಾಗಾಣಿಕೆ ಆರೋಪದಲ್ಲಿ ಅವರನ್ನು ಬಂಧಿಸಲಾಯಿತು. ಇದು ಬರೋಡಾ ಡೈನಾಮೈಟ್ ಕೇಸ್ ಎಂದೇ ದಾಖಲಾಯಿತು.
ಜೈಲಿಂದಲೇ ಚುನಾವಣೆಗೆ ನಿಂತು, ಗೆದ್ದಿದ್ದ ಮೋಡಿಗಾರ ಜಾರ್ಜ್ ಫರ್ನಾಂಡಿಸ್!
ಜೈಲಿನಿಂದಲೇ ಸ್ಪರ್ಧೆ
1977ರ ಚುನಾವಣೆಯಲ್ಲಿ ಜೈಲಿನಲ್ಲಿದ್ದೇ ಅವರು ಸ್ಪರ್ಧಿಸಿ ಮೂರು ಲಕ್ಷದಷ್ಟು ಮತಗಳ ಅಂತರದಿಂದ ಜಯಗಳಿಸಿದ್ದರು. ತುರ್ತು ಪರಿಸ್ಥಿತಿಯ ಬಳಿಕ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಅದರಲ್ಲಿ ಜಾರ್ಜ್ ಕೈಗಾರಿಕಾ ಸಚಿವರಾಗಿದ್ದರು.
|
ಪತ್ರ ಬರೆದಿದ್ದ ತಾಯಿ
ತಮ್ಮ ಮಗನನ್ನು ಬಂಧಿಸಿ ಜೈಲಿಗೆ ಇರಿಸಿದ್ದನ್ನು ವಿರೋಧಿಸಿ ಜಾರ್ಜ್ ಅವರ ತಾಯಿ ಅಲೈಸ್ ಫರ್ನಾಂಡಿಸ್ ಕೂಡ ರಾಷ್ಟ್ರಪತಿಗೆ ತೀಕ್ಷ್ಣವಾದ ಪತ್ರ ಬರೆದಿದ್ದರು. ಮಗನನ್ನು ಯಾವ ರೀತಿ ಕ್ರೂರವಾಗಿ ಹಿಂಸಿಸಲಾಯಿತು ಎಂಬುದನ್ನು ಅವರು ವಿವರಿಸಿದ್ದರು.