ಉತ್ತರಾಖಂಡ ಹಿಮನದಿ ಸ್ಫೋಟ; ಭೌಗೋಳಿಕ ತಜ್ಞರ ತಂಡದಿಂದ ಪರಿಶೀಲನೆ
ನವದೆಹಲಿ, ಫೆಬ್ರುವರಿ 08: ಉತ್ತರಾಖಂಡದ ಚಾಮೋಲಿಯಲ್ಲಿ ಹಿಮನದಿ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಭಾರತೀಯ ಭೌಗೋಳಿಕಾ ಸಮೀಕ್ಷೆಯು ತಜ್ಞರ ತಂಡ ರೂಪಿಸುವುದಾಗಿ ತಿಳಿಸಿದೆ.
ತಜ್ಞರ ತಂಡವು ಮ್ಯಾಪಿಂಗ್, ಸ್ಯಾಟಲೈಟ್ ಚಿತ್ರಗಳು ಹಾಗೂ ಘಟನಾ ಸ್ಥಳದ ಪರಿಶೀಲನೆ ನಡೆಸಿ ಹಿಮನದಿ ಸ್ಫೋಟದ ಹಿಂದಿನ ಕಾರಣ ವಿವರಿಸುವ ವರದಿ ನೀಡುವುದಾಗಿ ತಿಳಿದುಬಂದಿದೆ.
ಉತ್ತರಾಖಂಡ ಹಿಮನದಿ ಸ್ಫೋಟ; ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿದ್ದರ ಫಲ...
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತೀಯ ಭೌಗೋಳಿಕಾ ಸಮೀಕ್ಷೆಯ ಪ್ರಧಾನ ನಿರ್ದೇಶಕ ರಂಜೀತ್ ರಾಥ್, "ಕೆಲವು ಪ್ರಾಕೃತಿಕ ಅಂಶಗಳಿಂದ ಈ ದುರ್ಘಟನೆ ಸಂಭವಿಸಿದ್ದು, ಘಟನೆಗೆ ಕಾರಣವನ್ನು ಈಗಲೇ ವಿವರಿಸುವುದು, ಅಂದಾಜಿಸುವುದು ಕಷ್ಟ. ಡೆಹ್ರಾಡೂನ್ ನಲ್ಲಿ ನಮ್ಮ ಅಧಿಕಾರಿಗಳು ಸಮೀಕ್ಷೆ ನಡೆಸಲು ಸಿದ್ಧವಿದ್ದು, ನಾವು ತಜ್ಞರ ತಂಡ ರಚನೆಗೆ ಯೋಜನೆ ರೂಪಿಸಿದ್ದೇವೆ. ಈ ತಂಡವು ಸ್ಥಳಕ್ಕೆ ಹೋಗಿ, ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಿದೆ. ಉಪಗ್ರಹಗಳಿಂದ ಚಿತ್ರಗಳನ್ನು ಪಡೆದು, ಪರಿಶೀಲನಾ ಕೆಲಸದಲ್ಲಿ ನಿರತವಾಗಲಿದೆ" ಎಂದು ಹೇಳಿದ್ದಾರೆ.
ಹಿಮಾಲಯದ ಮೇಲ್ಭಾಗದಲ್ಲಿ ಈ ಘಟನೆ ಸಂಭವಿಸಿದ್ದು, ಆತಂಕ ಹೆಚ್ಚಾಗಿದೆ. ಇದು ಹಿಮ ನದಿಯ ಸಮಗ್ರ ಪರಿಸರದ ಮೇಲೆ ಪರಿಣಾಮ ಬೀರಬಹುದು. ವರದಿ ಬಂದ ನಂತರವಷ್ಟೇ ನಿಖರ ಕಾರಣ ಹೇಳಲು ಸಾಧ್ಯ. ಭವಿಷ್ಯದಲ್ಲಿ ಅಣೆಕಟ್ಟುಗಳನ್ನು, ರಸ್ತೆಗಳನ್ನು ಹಾಗೂ ಇತರೆ ಮೂಲಸೌಲಭ್ಯಗಳ ನಿರ್ಮಾಣ ಮಾಡುವಾಗ ಪರಿಸರಕ್ಕೆ ಧಕ್ಕೆಯಾಗದಂತೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಇಂಥ ಪ್ರದೇಶಗಳನ್ನು ಮೊದಲೇ ಗುರುತಿಸಬೇಕಿದೆ. ಪರಿಶೀಲನೆ ನಂತರ ಸಮಿತಿ ರಚಿಸಲಾಗುವುದು" ಎಂದು ಹೇಳಿದ್ದಾರೆ.
ಭಾನುವಾರ ಉತ್ತರಾಖಂಡದ ಚಾಮೋಲಿ ಜಿಲ್ಲೆಯ ತಪೋವನ, ರೇಣಿ ಪ್ರದೇಶದಲ್ಲಿ ಹಿಮನದಿ ಸ್ಫೋಟ ಸಂಭವಿಸಿದ್ದು, ದೌಲಿ ಗಂಗಾ ಹಾಗೂ ಅಲಕಾನಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಘಟನೆಯಲ್ಲಿ 204 ಮಂದಿ ನಾಪತ್ತೆಯಾಗಿದ್ದು, ಇದುವರೆಗೂ 11 ಮಂದಿಯ ಮೃತದೇಹಗಳು ದೊರಕಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಭಾರತೀಯ ವಾಯು ಸೇನೆ ಎಂಐ 17 ಹಾಗೂ ಚಿನೂಕ್ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿದೆ.