ಪಾಕ್ನಿಂದ ಬಂದು 5 ವರ್ಷದ ಬಳಿಕ ಕೊನೆಗೂ ತನ್ನ ಅಮ್ಮನನ್ನು ಸೇರಿಕೊಂಡ ಗೀತಾ
ಮುಂಬೈ, ಮಾರ್ಚ್ 11: ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ, ನಂತರ ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಮೂಗ ಮತ್ತು ಕಿವುಡ ಯುವತಿ ಕೊನೆಗೂ ಮಹಾರಾಷ್ಟ್ರದಲ್ಲಿನ ತನ್ನ ನೈಜ ತಾಯಿಯನ್ನು ಸೇರಿಕೊಂಡಿದ್ದಾಳೆ.
ಗೀತಾಳನ್ನು ರಕ್ಷಿಸಿ, ಆಕೆಯನ್ನು ತಮ್ಮ ರಕ್ಷಣೆಯಲ್ಲಿ ಇರಿಸಿಕೊಂಡಿದ್ದ ಪಾಕಿಸ್ತಾನದ ಎಧಿ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥೆ ಬಿಲ್ಕೀಸ್ ಎಧಿ, ಗೀತಾ ತನ್ನ ತಾಯಿಯನ್ನು ಸೇರಿಕೊಂಡಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಕುಟುಂಬದವರನ್ನು ಗುರುತಿಸದ ಗೀತಾ, ಡಿಎನ್ಎ ಬಳಿಕ ಮುಂದಿನ ನಿರ್ಧಾರ
'ಆಕೆ ನನ್ನೊಂದಿಗೆ ಸಂಪರ್ಕದಲ್ಲಿದ್ದಳು. ಈ ವಾರಾಂತ್ಯದಲ್ಲಿ ಆಕೆ ತನ್ನ ನೈಜ ತಾಯಿಯನ್ನು ಭೇಟಿ ಮಾಡಿರುವುದಾಗಿ ಕೊನೆಗೂ ಸಿಹಿ ಸುದ್ದಿ ನೀಡಿದ್ದಾಳೆ' ಎಂದು ಬಿಲ್ಕೀಸ್ ತಿಳಿಸಿದ್ದಾರೆ. 2015ರಲ್ಲಿಯೇ ಭಾರತಕ್ಕೆ ಮರಳಿದ್ದರೂ, ಗೀತಾಳಿಗೆ ತನ್ನ ನೈಜ ಪೋಷಕರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಮಾತು ಬಾರದ ಮತ್ತು ಕಿವಿ ಕೇಳದ ಕಾರಣ ಆಕೆಯ ಪೋಷಕರ ಪತ್ತೆ ಮತ್ತಷ್ಟು ಕಷ್ಟವಾಗಿತ್ತು. ಅನೇಕ ಪ್ರಯತ್ನಗಳ ಬಳಿಕ ಕೊನೆಗೂ ಆಕೆಯ ಹೆತ್ತಮ್ಮ ಸಿಕ್ಕಿದ್ದಾರೆ. ಆಕೆಯ ನಿಜ ಹೆಸರು ಗೊತ್ತಾಗದ ಕಾರಣ ಗೀತಾ ಎಂಬ ಹೆಸರು ನೀಡಲಾಗಿತ್ತು.
ನಿಜ ಹೆದರು ರಾಧಾ ವಾಘ್ಮೋರೆ
'ಆಕೆಯ ನಿಜವಾದ ಹೆಸರು ರಾಧಾ ವಾಘ್ಮೋರೆ. ಮಹಾರಾಷ್ಟ್ರದ ನೈಗಾನ್ ಗ್ರಾಮದಲ್ಲಿನ ತನ್ನ ತಾಯಿಯನ್ನು ಆಕೆ ಸೇರಿಕೊಂಡಿದ್ದಾಳೆ. ಆಕೆಯನ್ನು ಯಾರೂ ಪಾಕಿಸ್ತಾನದಲ್ಲಿ ಬೀದಿಪಾಲು ಮಾಡಿದ್ದರು. ಆಶ್ರಯವಿಲ್ಲದೆ ಪರದಾಡುತ್ತಿದ್ದ ಆಕೆಯನ್ನು ನಾವು ಕರಾಚಿಯಲ್ಲಿ ನೋಡಿ ರಕ್ಷಿಸಿದ್ದೆವು' ಎಂದು ಬಿಲ್ಕೀದ್ ಎಧಿ ಅವರು ಹೇಳಿದ್ದಾರೆ.
12 ವರ್ಷದ ಬಳಿಕ ಭಾರತಕ್ಕೆ
2015ರಲ್ಲಿ ಗೀತಾ ಸುದ್ದಿಯಾಗಿದ್ದಳು. ಪಾಕಿಸ್ತಾನದಲ್ಲಿ ಸಿಕ್ಕಿದ್ದ ಬಾಲಕಿಯ ಮೂಲ ಭಾರತ ಎನ್ನುವುದು ತಿಳಿದ ಬಳಿಕ ಆಕೆಯನ್ನು ಭಾರತಕ್ಕೆ ಹಸ್ತಾಂತರಿಸುವ ಕಾರ್ಯಗಳು ನಡೆದಿದ್ದವು. ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನದ ಕರಾಚಿನ ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿದ್ದ ಸಿಕ್ಕಾಗಿ 11-12 ವರ್ಷದವಳಾಗಿದ್ದ ಗೀತಾ, ಸುಮಾರು 12 ವರ್ಷದ ಬಳಿಕ ತಾಯ್ನಾಡಿಗೆ ಮರಳಿದ್ದಳು. ಆದರೆ ಭಾರತಕ್ಕೆ ಮರಳಿ ಐದು ವರ್ಷವಾದರೂ ಆಕೆಯ ನೈಜ ತಾಯಿ ಯಾರೆಂದು ಗೊತ್ತಾಗಿರಲಿಲ್ಲ.
ತವರಿಗೆ ಬಂದ ಗೀತಾ ಪಾಲಕರು ಯಾರು? ಉತ್ತರ ಸಿಕ್ಕಿಲ್ಲ
ಮರು ಮದುವೆಯಾಗಿದ್ದ ತಾಯಿ
ಗೀತಾಳ ನಿಜವಾದ ಪೋಷಕರನ್ನು ಹುಡುಕಲು ನಾಲ್ಕೂವರೆ ವರ್ಷ ಬೇಕಾಯಿತು. ಇದು ಡಿಎನ್ಎ ಪರೀಕ್ಷೆಯ ಬಳಿಕ ದೃಢಪಟ್ಟಿದೆ. ಗೀತಾ ಕೂಡ ತನ್ನ ತಾಯಿಯನ್ನು ಗುರುತಿಸಿದ್ದಾಳೆ. ಆಕೆಯ ತಂದೆ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆಯ ತಾಯಿ ಮೀನಾ ಮರು ಮದುವೆಯಾಗಿದ್ದರು. ಅಕೆಯ ತನ್ನ ಕುಟುಂಬವನ್ನು ಮರಳಿ ಸೇರಿಕೊಂಡಿರುವುದು ತಮಗೆ ಅಪಾರ ಖುಷಿ ನೀಡಿದೆ ಎಂದು ಬಿಲ್ಕೀಸ್ ತಿಳಿಸಿದ್ದಾರೆ.
ನಿಜಕ್ಕೂ ಸಾಧನೆ ಇದು
'ನಿಮ್ಮ ಕುಟುಂಬದಿಂದ ತಪ್ಪಿಸಿಕೊಂಡು ಅಷ್ಟು ವರ್ಷ ಕಳೆದು ಹೋಗಿ ಮತ್ತೆ ಕುಟುಂಬವನ್ನು ಸೇರಿಕೊಳ್ಳುವುದು ಯಾರಿಗಾದರೂ ಕಷ್ಟವೇ. ಅದರಲ್ಲಿಯೂ ಗೀತಾರಂತಹ ವಿಶೇಷ ಮಕ್ಕಳಿಗೆ ಇನ್ನೂ ಕಷ್ಟ' ಎಂದು ಅವರು ಹೇಳಿದ್ದಾರೆ.