ಪೆಟ್ರೋಲಿಯಂ ಸಚಿವರ ಸಂಬಂಧಿ ಗ್ಯಾಸ್ ಏಜೆನ್ಸಿ ಮೇಲೆ ದಾಳಿ
ಬಿಹಾರದ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಶದ ವಿವಿಧೆಡೆ ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿಗಳ ಮೇಲೆ ದಾಳಿ ನಡೆಸಿದೆ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸಹೋದರರಿಗೆ ಸೇರಿದ ಗ್ಯಾಸ್ ಏಜೆನ್ಸಿಯ ಮೇಲೂ ದಾಳಿ ನಡೆದಿದೆ.
ಭುವನೇಶ್ವರ್, ಜನವರಿ 15: ಬಿಹಾರದ ವಿವಿಧ ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಏಜೆನ್ಸಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿಯು ಭಾನುವಾರ ಏಕಾಏಕಿ ದಾಳಿ ನಡೆಸಿದೆ. ದಾಳಿಗೊಳಗಾದ ಏಜೆನ್ಸಿಗಳಲ್ಲೊಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಹೋದರರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ತೈಲ ಕಲಬೆರಕೆ ಹಾಗೂ ಕಾಳದಂಧೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದ್ದವೆಂದು ಹೇಳಲಾಗಿದೆ.
ಬಿಹಾರದ ಕೋರಟ್ ಪುರ, ನವರಂಗಪುರ, ಪುರಿ, ಭುವನೇಶ್ವರ್, ಬೆರ್ಹಾಂಪುರ, ಬಾಲಸೋರ್, ಸಂಬಾಲ್ ಪುರ, ಬಾರ್ಗಾ, ಅಂಗುಲ್ ಹಾಗೂ ಕಟಕ್ ಗಳಲ್ಲಿ ಈ ದಾಳಿ ನಡೆಸಲಾಗಿದೆ. ಅಂಗುಲ್ ಜಿಲ್ಲೆಯ ತಾಲ್ಚೆರ್ ಎಂಬಲ್ಲಿನ ಗ್ಯಾಸ್ ಏಜೆನ್ಸಿಯ ಮೇಲೂ ದಾಳಿ ನಡೆಸಲಾಗಿದ್ದು, ಆ ಏಜೆನ್ಸಿ ಧರ್ಮೇಂದ್ರ ಪ್ರಧಾನ್ ಅವರ ಸಹೋದರರಿಗೆ ಸೇರಿದ್ದು ಎಂದು ಹೇಳಲಾಗಿದೆ.
ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರ ರಾಜ್ಯ ಬಿಜೆಪಿ ಪಕ್ಷದ ಮಹಾ ಕಾರ್ಯದರ್ಶಿ ಪೃಥ್ವಿರಾಜ್ ಹರಿಚಂದನ್, ಇದು ಬಿಹಾರದಲ್ಲಿ ಅಧಿಕಾರದಲ್ಲಿರುವ ಬಿಜೆಡಿ ಪಕ್ಷದ ಕುತಂತ್ರ. ತನ್ನ ಅಧಿಕಾರವನ್ನು ನನ್ನಿಚ್ಛೆಯಂತೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.