ಗರ್ಭಿಣಿ ಮೇಲೆ ಅತ್ಯಾಚಾರ, ಜೀವಬಿಟ್ಟ ಭ್ರೂಣ: ಅಮಾನವೀಯ ಕೃತ್ಯ ಬಹಿರಂಗ
ಉದಯಪುರ, ಆಗಸ್ಟ್ 13: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ, ದೆಹಲಿಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನೆನಪಿಸುವಂತಹ ಘೋರ ಅತ್ಯಾಚಾರ ಕೃತ್ಯ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ಎದೆನಡುಗಿಸುವಂತಹ ಘಟನೆಯಲ್ಲಿ 19 ವರ್ಷದ ದಲಿತ ಗರ್ಭಿಣಿಯನ್ನು ಅತ್ಯಂತ ಕ್ರೂರವಾಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ಈ ಘಟನೆಯು ಮಹಿಳೆಯ ಪ್ರಿಯಕರನ ಆತ್ಮಹತ್ಯೆ ಪ್ರಕರಣದ ತನಿಖೆಯ ವೇಳೆ ಬಹಿರಂಗವಾಗಿದೆ.
ಗುರುಗ್ರಾಮದಲ್ಲಿ ಉಜ್ಬೇಕಿಸ್ತಾನದ ಮಹಿಳೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ
ಮೋಟಾರ್ ಬೈಕ್ನಲ್ಲಿ ಗರ್ಭಿಣಿ ಮತ್ತು ಆಕೆಯ ಪ್ರಿಯಕರ ಇಬ್ಬರೂ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳ ಗುಂಪು ಕಬ್ಬಿಣದ ರಾಡ್ ಮತ್ತು ಕತ್ತಿಗಳಿಂದ ಆತನ ಮೇಲೆ ಹಲ್ಲೆ ನಡೆಸಿತು. ಆತ ಪ್ರಜ್ಞೆ ಕಳೆದುಕೊಳ್ಳುವವರೆಗೂ ಬಿಡಲಿಲ್ಲ. ಆತನ ಬಳಿಯಿದ್ದ ಮೊಬೈಲ್ ಫೋನ್ಕೂಡ ಕಿತ್ತುಕೊಂಡರು.
ಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು
ನಂತರ ಮಹಿಳೆಯನ್ನು ನಿರ್ಜನ ಬಸ್ ಸ್ಟ್ಯಾಂಡ್ ಒಂದಕ್ಕೆ ಎಳೆದುಕೊಂಡು ಹೋದ ದುಷ್ಕರ್ಮಿಗಳಾದ ಸುನಿಲ್ ಚರ್ಪೋತಾ, ವಿಕಾಸ್ ಮತ್ತು ಜಿತೇಂದ್ರ ಚರ್ಪೋತಾ ಸಾಮೂಹಿಕ ಅತ್ಯಾಚಾರ ಎಸಗಿದರು. ಅವರ ಪಾಶವೀಯ ಕೃತ್ಯ ಇಷ್ಟಕ್ಕೇ ಮುಗಿಯಲಿಲ್ಲ. ಆಕೆಯನ್ನು ಪುನಃ ಬೇರೊಂದು ಸ್ಥಳಕ್ಕೆ ಹೊತ್ತುಕೊಂಡು ಹೋದರು. ಅಲ್ಲಿ ನರೇಶ್ ಗುರ್ಜಾರ್ ಮತ್ತು ವಿಜಯ್ ಎಂಬ ಇನ್ನಿಬ್ಬರು ಗೆಳೆಯರನ್ನು ಕರೆಯಿಸಿದರು. ಪುನಃ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ನಿರ್ಭಯಾ ಪ್ರಕರಣದಂತೆಯೇ ಆಕೆಯನ್ನು ರಸ್ತೆಯ ಮೇಲೆ ಎಸೆದು ಹೋದರು.
ಒಂದೂವರೆ ತಿಂಗಳ ಗರ್ಭಿಣಿ
ಆಕೆಯ ಮೇಲೆ ಎಷ್ಟು ಕ್ರೂರವಾಗಿ ದಾಳಿ ನಡೆದಿತ್ತು ಎಂದರೆ ಹೊಟ್ಟೆಯಲ್ಲಿದ್ದ ಒಂದೂವರೆ ತಿಂಗಳ ಭ್ರೂಣ ಬದುಕುಳಿಯಲಿಲ್ಲ. ಕೊನೆಗೆ ಆಕೆಗೆ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲಾಯಿತು. ಇಬ್ಬರೂ ಪ್ರೇಮಿಗಳು ಮದುವೆಯಾಗಿರಲಿಲ್ಲ. ಮದುವೆಗೆ ಮೊದಲೇ ಆಕೆ ಗರ್ಭ ಧರಿಸಿದ್ದಳು.
ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ
ಈ ಘಟನೆ ನಡೆದಿದ್ದು ಜುಲೈ 13ರಂದು. ಆದರೆ, ಮಹಿಳೆಯ ಪ್ರಿಯಕರನ ಸಾವಿನ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುವವರೆಗೂ ಅತ್ಯಾಚಾರ ಪ್ರಕರಣ ಬಹಿರಂಗವಾಗಿರಲಿಲ್ಲ. ಮಹಿಳೆ ಕೂಡ ದೂರು ನೀಡಿರಲಿಲ್ಲ. ಪ್ರಜ್ಞೆ ಕಳೆದುಕೊಂಡಿದ್ದ ಪ್ರಿಯಕರ, ಎಚ್ಚರವಾದ ಬಳಿಕ ತನ್ನನ್ನು ಇನ್ನಷ್ಟು ಹಿಂಸೆಗೆ ಒಳಪಡಿಸಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆತ ಕಳವು ಮಾಡಿದ್ದ ಫೋನನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಸಾಮೂಹಿಕ ಅತ್ಯಾಚಾರದ ಹೀನ ಕೃತ್ಯದ ಘಟನೆಯ ಸುಳಿವು ಪೊಲೀಸರಿಗೆ ಸಿಕ್ಕಿದೆ,
ವಿವರ ತೆರೆದಿಟ್ಟ ಮಹಿಳೆ
ಘಟನೆ ಕಳೆದು ಮೂರು ವಾರದ ಬಳಿಕ ಫೋನ್ ಪರಿಶೀಲಿಸಿದ ಪೊಲೀಸರಿಗೆ ಸಂತ್ರಸ್ತೆ ಅನೇಕ ಬಾರಿ ಆತನಿಗೆ ಕರೆ ಮಾಡಿದ್ದು ಗೊತ್ತಾಗಿದೆ. ಆಕೆಯ ಫೋನ್ ಕರೆಗಳು ಹಾಗೂ ಸಂದೇಶಗಳ ಬೆನ್ನತ್ತಿದ ಪೊಲೀಸರು ಆಕೆಯನ್ನು ಸಂಪರ್ಕಿಸಿದ್ದಾರೆ. ಆಕೆಯ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದರೂ, ತಾನು ಅನುಭವಿಸಿದ ಪೈಶಾಚಿಕ ಕೃತ್ಯದ ಅನುಭವವನ್ನು ಬಿಚ್ಚಿಟ್ಟಳು.
ಐವರು ಆರೋಪಿಗಳ ಬಂಧನ
ಆಕೆ ನೀಡಿದ ಮಾಹಿತಿಗಳನ್ನು ಆಧರಿಸಿದ ಪೊಲೀಸರು ಆರೋಪಿಗಳಾದ ಸುನೀಲ್ ಚರ್ಪೋತಾ, ವಿಕಾಸ್, ನರೇಶ್ ಗುರ್ಜಾರ್ ಮತ್ತು ಜಿತೇಂದ್ರ ಚರ್ಪೋತಾ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಅತ್ಯಾಚಾರ, ಅಪಹರಣ, ಕೊಲೆ ಪ್ರಯತ್ನ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸುನೀಲ್ ಚಾರ್ಪೋತಾ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಆತನನ್ನು ಹುಡುಕಿಕೊಟ್ಟವರಿಗೆ 5,000 ಬಹುಮಾನ ಘೋಷಣೆ ಮಾಡಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.