ಗಾಲ್ವಾನ್ ಗಲಾಟೆ: ಚೀನಾಗೆ ಕಠಿಣ ಸಂದೇಶ ರವಾನಿಸಿದ ಪ್ರಧಾನಿ ಮೋದಿ!
ನವದೆಹಲಿ, ಜೂನ್.28: ಚೀನಾ ಜೊತೆಗಿನ ಗಡಿ ರೇಖೆಯ ಸಮಸ್ಯೆಯನ್ನು ಭಾರತ ಸಮರ್ಥವಾಗಿ ಎದುರಿಸಲಿದೆ ಹಾಗೂ ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾನುವಾರ 66ನೇ ಸಂಚಿಕೆಯ ಮನ್-ಕೀ-ಬಾತ್ ರೇಡಿಯೋ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದರು.
ಮನ್ ಕೀ ಬಾತ್ ನಲ್ಲಿ 'ಆತ್ಮನಿರ್ಭರ್' ಮಂತ್ರ ಜಪಿಸಿದ ಪ್ರಧಾನಿ ಮೋದಿ
ಲಡಾಖ್ ನಲ್ಲಿ ನಮಗೆ ಸವಾಲು ಹಾಕಿದವರಿಗೆ ಸಮರ್ಪಕ ಪ್ರತಿಕ್ರಿಯೆ ನೀಡಲಾಯಿತು. ನಮ್ಮ ಧೈರ್ಯಶಾಲಿ ಯೋಧರು ತ್ಯಾಗವು ಸರ್ವೋಚ್ಚವಾಗಿದ್ದು, ಅವರ ನೋವಿನ ನಷ್ಟವನ್ನು ನಾವು ಅನುಭವಿಸುತ್ತೇವೆ. ಅವರ ಶೌರ್ಯ ಭಾರತದ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದರು.
ಹುತಾತ್ಮ ಯೋಧರನ್ನು ಎಂದಿಗೂ ಮರೆಯಲ್ಲ
ಕಳೆದ ಜೂನ್.15 ಮತ್ತು 16ರಂದು ಗಾಲ್ವಾನ್ ನದಿ ಕಣಿವೆಯಲ್ಲಿ ಚೀನಾದ ಸೈನ್ಯದಿಂದ ಭಾರತದ ಗಡಿಗಳನ್ನು ರಕ್ಷಿಸುವಾಗ ಪ್ರಾಣ ಕಳೆದುಕೊಂಡ 20 ಭಾರತೀಯ ಸೈನಿಕರ ಹುತಾತ್ಮತೆಯನ್ನು ದೇಶವು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ
ದೇಶದ ರಕ್ಷಣೆಗೆ ತಮ್ಮ ಮನೆಯ ಮಕ್ಕಳನ್ನು ಗಡಿಗೆ ಕಳುಹಿಸಿದ ಕುಟುಂಬದ ಆಂತರಿಕ ಪ್ರಜ್ಞೆಯೇ ದೇಶದ ಶಕ್ತಿಯಾಗಿದೆ. ನಮ್ಮ ಕೆಚ್ಚೆದೆಯ ಯೋಧರಿಗೆ ಭಾರತವು ಸದಾ ನಮಿಸುತ್ತದೆ. ಆ ಯೋಧರು ದೇಶವನ್ನು ರಕ್ಷಿಸಲು ಸದಾ ಗಡಿಯಲ್ಲಿ ಕಾದು ನಿಂತಿದ್ದಾರೆ. ಅವರ ಶೌರ್ಯ ಯಾವಾಗಲೂ ನೆನಪಿನಲ್ಲಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಹೆಸರು ಉಲ್ಲೇಖಿಸದೇ ಚೀನಾಗೆ ಪ್ರಧಾನಿ ಮೋದಿ ಎಚ್ಚರಿಕೆ
ಚೀನಾದ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು. ಭಾರತಕ್ಕೆ ಸ್ನೇಹ ಸಂಬಂಧವನ್ನು ಬೆಳೆಸುವುದು ಹೇಗೆ ಮತ್ತು ವೃದ್ಧಿಸಿಕೊಳ್ಳುವುದು ಹೇಗೆ ಎಂದು ತಿಳಿದಿದೆ. ಅದೇ ರೀತಿ ಕಾಲ್ಕೆರೆದು ನಿಲ್ಲುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆಯೂ ಅರಿವಿದೆ. ಎದುರಾಳಿಗಳಿಗೆ ಪಾಠ ಕಲಿಸುವ ಮಟ್ಟಿಗೆ ಭಾರತವು ಸಮರ್ಥವಾಗಿದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಭಾರತ ಏನು ಎಂಬುದು ವಿಶ್ವಕ್ಕೆ ಅರಿವಿದೆ
ದೇಶದ ಗಡಿ ಪ್ರದೇಶಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಲ್ಲಿ ಭಾರತದ ಬದ್ಧತೆ ಮತ್ತು ಸಾರ್ವಭೌಮತ್ವದ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಲಡಾಖ್ ವಿಚಾರಕ್ಕೆ ಸಂಬಂಧಿಸಿದಂತೆ ಗಡಿಯಲ್ಲಿ ಕಾಲ್ಕರೆದು ನಿಂತರವರಿಗೆ ಸರಿಯಾದ ಪಾಠವನ್ನು ಕಲಿಸಿದ್ದು ಆಗಿದೆ. ಇಂಥ ಸಂದರ್ಭದಲ್ಲಿ ಭಾರತದ ಗಡಿಯಲ್ಲಿರುವ ಸೈನಿಕರಿಗೆ ನಾವು ಗೌರವ ನೀಡಬೇಕಾಗಿದೆ. ಸ್ಥಳೀಯ ಉತ್ಪನ್ನಗಳನ್ನು ನಾವು ಖರೀದಿಸಬೇಕು. ಅವುಗಳನ್ನೇ ಬಳಸಬೇಕು. ಜನರ ಸಹಕಾರವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ದೇಶದ 130 ಕೋಟಿ ಜನರ ಮೇಲೆ ನನಗೆ ನಂಬಿಕೆ ಇದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.