ಚೀನಾಗೆ ತಿರುಗೇಟು ನೀಡಲು ಭಾರತದ ಕೈಗೆ ಅಮೆರಿಕಾದ 'ಅಸ್ತ್ರ'!
ನವದೆಹಲಿ, ಜುಲೈ.12: ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆ ಸಂಘರ್ಷದ ಬೆನ್ನಲ್ಲೇ ಭಾರತವು ಅಲರ್ಟ್ ಆಗಿದೆ. ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಸಶಸ್ತ್ರವಾಗಿ ನಿಲ್ಲುವುದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ಗಾಲ್ವಾನ್ ಕಣಿವೆಯಲ್ಲಿ ಕಾಲ್ಕೆರೆದು ನಿಂತಿರುವ ಚೀನಾ ಸೈನಿಕರನ್ನು ಬಗ್ಗು ಬಡಿಯುವುದಕ್ಕೆ ಭಾರತೀಯ ಯೋಧರ ಕೈಗೆ ಅಮೆರಿಕಾದ ಹೊಸ ಆಸ್ತ್ರವನ್ನು ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕಾಗಿ ಅಮೆರಿಕಾದಿಂದ 72,000 ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.
ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿದ ಭಾರತ-ಚೀನಾ ಪಡೆ
ಮೊದಲ ಹಂತದಲ್ಲಿ ಆರ್ಡರ್ ಕೊಟ್ಟಿದ್ದ 72,000 ಎಸ್ಐಜಿ-716 ಅಸಾಲ್ಟ್ ರೈಫಲ್ ಗಳನ್ನು ಈಗಾಗಲೇ ಆಮದು ಮಾಡಿಕೊಳ್ಳಲಾಗಿದೆ. ಉತ್ತರ ಭಾರತದ ಸೇನಾ ಕಾರ್ಯಾಚರಣೆಯಲ್ಲಿ ಈ ರೈಫಲ್ ಗಳನ್ನು ಬಳಿಸಿಕೊಳ್ಳಲಾಗುತ್ತಿದ್ದು, ಎರಡನೇ ಬಾರಿ ಮತ್ತೆ 72,000 ರೈಫಲ್ ಗಳಿಗೆ ಅಮೆರಿಕಾಗೆ ಆರ್ಡರ್ ಕೊಡಲಾಗಿದೆ.
ಉಗ್ರರ ಸದೆ ಬಡೆಯಲು ಎಸ್ಐಜಿ-716 ರೈಫಲ್
ಭಾರತಕ್ಕೆ ಈಗಾಗಲೇ ಮೊದಲ ಹಂತದಲ್ಲಿ 72,000 ಎಸ್ಐಜಿ-716 ರೈಫಲ್ ಗಳನ್ನು ತರಿಸಿಕೊಳ್ಳಲಾಗಿದೆ. ಸಶಸ್ತ್ರ ಪಡೆಯ ಆರ್ಥಿಕ ನಿಧಿಯ ಅಡಿಯಲ್ಲಿ ಈ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಉಗ್ರರ ವಿರುದ್ಧ ನಡೆಸುವ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಈ ರೈಫಲ್ ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ
ಭಾರತೀಯ ಸೇನೆಯಿಂದ ಸುಧಾರಿತ ಶಸ್ತ್ರಾಸ್ತ್ರ ಬಳಕೆ
ಭಾರತವು ಫಾಸ್ಟ್-ಟ್ರಾಕ್ ಪ್ರೊಕ್ಯೂರ್ಮೆಂಟ್ ಪ್ರೊಗ್ರಾಂ(ಎಫ್ ಟಿಪಿ) ಅಡಿಯಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇಡುವುದಕ್ಕೆ ಮುಂದಾಗಿದೆ. 5.56x45mm ರೈಫಲ್ ಗಳ ಬದಲಿಗೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಲು ಭಾರತೀಯ ಸೇನೆ ತೀರ್ಮಾನಿಸಿದೆ. ಭಾರತೀಯ ಯೋಜನೆ ಪ್ರಕಾರ 1.5 ಲಕ್ಷ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲು ಹಾಗೂ ಅವುಗಳನ್ನು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಜೊತೆಗೆ ಕೆಲವು ಗಡಿ ಪ್ರದೇಶಗಳಲ್ಲಿಯೂ ಬಳಸಿಕೊಳ್ಳುವುದಕ್ಕೆ ಚಿಂತಿಸಲಾಗುತ್ತಿದೆ.
ಎಕೆ-203 ರೈಫಲ್ ಬಳಕೆಗೆ ಸೇನೆ ಮುಂದು
ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಗಡಿ ರಕ್ಷಣಾ ಸಿಬ್ಬಂದಿಗೆ ಸುಧಾರಿತ ಎಕೆ-203 ರೈಫಲ್ ಗಳನ್ನು ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಭಾರತದ ಅಮೇಥಿಯಲ್ಲೇ ಭಾರತ ಮತ್ತು ರಷ್ಯಾ ಜಂಟಿಯಾಗಿ ಈ ರೈಫಲ್ ಗಳನ್ನು ಉತ್ಪಾದಿಸಲಿವೆ. ಉಭಯ ರಾಷ್ಟ್ರಗಳ ನಡುವೆ ಕೆಲವು ಭಿನ್ನಾಭಿಪ್ರಾಯವಿದ್ದು, ಎಲ್ಲ ಸಮಸ್ಯೆ ಇತ್ಯರ್ಥಗೊಂಡ ಬಳಿಕ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಇತ್ತೀಚಿಗಷ್ಟೇ ಇಸ್ರೇಲ್ ನಿಂದ ಭಾರತಕ್ಕೆ ಗನ್ ಆಮದು
ಭಾರತದಲ್ಲಿ ಲೈಟ್ ಮಷಿನ್ ಗನ್ ಗಳ ಸಂಗ್ರಹಣೆ ಪ್ರಮಾಣವು ತೀರಾ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ 16,000 ಲೈಟ್ ಮಷಿನ್ ಗನ್ ರಫ್ತು ಮಾಡುವಂತೆ ಇಸ್ರೇಲ್ ಗೆ ಭಾರತೀಯ ರಕ್ಷಣಾ ಸಚಿವಾಲಯವು ಆರ್ಡರ್ ಕೊಟ್ಟಿತ್ತು ಎಂದು ತಿಳಿದು ಬಂದಿದೆ.
53 ವರ್ಷಗಳಲ್ಲ ಮೊದಲ ಬಾರಿ ಗಾಲ್ವಾನ್ ನಲ್ಲಿ ಗಾಂಚಾಲಿ
ಕಳೆದ 53 ವರ್ಷಗಳ ನಂತರದಲ್ಲೇ ಮೊದಲ ಬಾರಿಗೆ ಗಾಲ್ವಾನ್ ಕಣಿವೆ ವಿಚಾರಕ್ಕೆ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.