ಇದೇ ಡಿಸೆಂಬರ್ಗೆ ಭಾರತದ ಪ್ರಥಮ ಮಾನವರಹಿತ ಗಗನಯಾನ
ನವದೆಹಲಿ, ಫೆಬ್ರುವರಿ 02: ಭಾರತದ ಮೊಟ್ಟ ಮೊದಲ ಮಾನವರಹಿತ ಗಗನಯಾನ ಯೋಜನೆಗೆ ಇದೇ ಡಿಸೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
2020ರ ಡಿಸೆಂಬರ್ ನಲ್ಲಿಯೇ ಈ ಯೋಜನೆಗೆ ಚಾಲನೆ ನೀಡಬೇಕಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದಾಗಿ ಮುಂದೂಡಲಾಗಿತ್ತು ಎಂದು ತಿಳಿಸಿದ್ದಾರೆ.
ಬಜೆಟ್ 2021: ಭಾರತೀಯ ಬಾಹ್ಯಾಕಾಶ ಇಲಾಖೆಗೆ ಭರ್ಜರಿ ಅನುದಾನ
ಬಜೆಟ್ ಮಂಡನೆ ಸಮಯದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾರತದ ಪ್ರಥಮ ಮಾನವರಹಿತ ಗಗನಯಾನ ಯೋಜನೆಗೆ ಇದೇ ಡಿಸೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು. ಮಾನವಸಹಿತ ಗಗನಯಾನ ಯೋಜನೆ ಕೂಡ ಇದ್ದು, ಇದಕ್ಕಾಗಿ ನಾಲ್ಕು ಭಾರತೀಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ. 2022ರ ವೇಳೆಗೆ ಬಾಹ್ಯಾಕಾಶಕ್ಕೆ ಐದರಿಂದ ಏಳು ದಿನಗಳ ಅವಧಿಗೆ ಮೂರು ಮಂದಿಯನ್ನು ಕಳುಹಿಸುತ್ತಿದೆ. ಈ ವರ್ಷ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಈ ಸುಸಂದರ್ಭದಲ್ಲಿ ವಿಶೇಷ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಈ ಯೋಜನೆಗಳಿಗಾಗಿ ಹತ್ತು ಸಾವಿರ ಕೋಟಿ ರೂ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಇಸ್ರೋ ಈ ಯೋಜನೆಗಳಿಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಕೊರೊನಾದಿಂದಾಗಿ ಬಾಹ್ಯಾಕಾಶದ ಕೆಲವು ಯೋಜನೆಗಳು ತಡವಾಗುವುದಾಗಿ ಇಸ್ರೊ ಈ ಮುನ್ನವೇ ತಿಳಿಸಿತ್ತು. ಆ ಯೋಜನೆಗಳಲ್ಲಿ ಚಂದ್ರಯಾನ 3, ಗಗನಯಾನ ಕೂಡ ಒಂದಾಗಿತ್ತು. ಇದೀಗ ಬಾಹ್ಯಾಕಾಶದ ಹಲವು ಯೋಜನೆಗಳಿಗೆ ಚಾಲನೆ ದೊರೆಯುವ ಸೂಚನೆ ದೊರೆತಿದೆ.
ಸೋಮವಾರವಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಬಾಹ್ಯಾಕಾಶ ಇಲಾಖೆಗೆ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ. ಕಳೆದ ಬಾರಿಗಿಂತ ಸುಮಾರು 4,500 ಕೋಟಿ ಹೆಚ್ಚುವರಿ ಅನುದಾನವನ್ನು ಈ ಬಾರಿ ಬಜೆಟ್ನಲ್ಲಿ ನೀಡಲಾಗಿದೆ. ಒಟ್ಟಾರೆ ಬಾಹ್ಯಾಕಾಶ ಇಲಾಖೆಗೆ 13,949 ಕೋಟಿ ನೀಡಲಾಗಿದ್ದು, ಅದರಲ್ಲಿ 8,228 ಕೋಟಿ ರೂ.ಇಲಾಖೆಗೆ ಸಂಪೂರ್ಣ ಅಭಿವೃದ್ಧಿ ಮೊತ್ತವಾಗಿರಲಿದೆ. ಹೊಸದಾಗಿ ಆರಂಭಿಸಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ಗೆ 700 ಕೋಟಿ ರೂಪಾಯಿ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು.