ತಮಾಷೆಗೆ ಕಾರಣವಾದ ರಮ್ಯಾ ಹಾಕಿದ ಅಸ್ತಿಪಂಜರದ ಚಿತ್ರ
ಸಾಂಕೇತಿಕವಾಗಿ, ವ್ಯಂಗ್ಯಭರಿತವಾಗಿ ಬಳಸಲಾಗಿರುವ ಒಂದು ಚಿತ್ರ ಎಷ್ಟೊಂದು ವ್ಯಾಖ್ಯಾನಗಳಿಗೆ, ಅರ್ಥಅನರ್ಥಗಳಿಗೆ, ತಮಾಷೆಗಳಿಗೆ ಕಾರಣವಾಗುತ್ತದೆ ಎಂಬುದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಟ್ವಿಟ್ಟರ್ ನಲ್ಲಿ ಹಾಕಿರುವ ಒಂದು ಚಿತ್ರವೇ ಸಾಕ್ಷಿ.
ತಮ್ಮ ವಿಟ್ಟಿ (ಜಾಣಾತಿಜಾಣ) ಪದಬಳಕೆಯಿಂದ (ಇವರೇ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನೂ ನಿಭಾಯಿಸುತ್ತಾರೆ ಎಂಬ ಆರೋಪವಿದೆ) ವಿರೋಧಿಗಳ ಕಾಲೆಳೆಯುವುದು, ತಾವೇ ಕಾಲೆಳೆತಕ್ಕೆ ಕಾರಣವಾಗುವುದು, ಹಾಗೆಯೆ ಭರ್ತಿ ಚರ್ಚೆಗೆ ಗ್ರಾಸವಾಗುವುದು ರಮ್ಯಾ ಅವರಿಗೆ ನೀರು ಕುಡಿದಷ್ಟೇ ಸುಲಭ.
ಪ್ರಸ್ತುತ ಅವರು ಕೈಗೆತ್ತಿಕೊಂಡಿರುವ ವಿಷಯ ತುಂಬಾ ಗಹನವಾದದ್ದು, ಇಡೀ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಚರ್ಚಿತವಾಗುತ್ತಿರುವುದು. ಅದು ಅಮೆರಿಕನ್ ಡಾಲರ್ ವಿರುದ್ಧ ಜರ್ರನೆ ಇಳಿಯುತ್ತಿರುವ ರುಪಾಯಿಯ ಮೌಲ್ಯ.
ಇದನ್ನು ಅಭಿವ್ಯಕ್ತಪಡಿಸಲು ರಮ್ಯಾ ಅವರು ಅತ್ಯುತ್ತಮವಾದ ಚಿತ್ರವನ್ನು ಬಳಸಿಕೊಂಡಿದ್ದಾರೆ. ಜೊತೆಗೆ, ಕಾಂಗ್ರೆಸ್ಸನ್ನು ಸದಾ ಕುಟುಕುತ್ತಲೇ ಇರುವ ಬಿಜೆಪಿ ನಾಯಕ, ಖ್ಯಾತ ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿರುವ ಡಾ. ಸುಬ್ರಮಣಿಯನ್ ಸ್ವಾಮಿಯವರನ್ನು ಎಳೆದುತಂದಿದ್ದಾರೆ.
ಮನೆಯೊಂದರ ಪಾವಟಿಗೆಯ ಮೇಲೆ ಸುಮಾರು ಅಸ್ತಿಪಂಜರಗಳನ್ನು ನಿಲ್ಲಿಸಲಾಗಿದ್ದು, ಏನನ್ನೋ ನಿರೀಕ್ಷಿಸುತ್ತಿರುವಂತಿದೆ. ಅದಕ್ಕೆ ರಮ್ಯಾಜೀ ಅವರು ಕೊಟ್ಟಿರುವ ಕ್ಯಾಪ್ಶನ್ ಏನೆಂದರೆ, "ಸುಬ್ರಮಣಿಯನ್ ಸ್ವಾಮಿ ಅವರ ಅಭಿಮಾನಿಗಳು ರುಪಾಯಿ ಬೆಲೆ ಡಾಲರಿಗೆ ಸರಿಸಮವಾಗುತ್ತದೆ ಎಂದು ಕಾಯುತ್ತಿದ್ದಾರೆ" ಎಂದಿದೆ. ಅವರ ಹಾಸ್ಯಪ್ರಜ್ಞೆಗೊಂದು ಸಲಾಂ. ಆದರೆ, ಸುಬ್ರಮಣಿಯನ್ ಸ್ವಾಮಿಯವರ ಟ್ವಿಟ್ಟರ್ ಖಾತೆಗೆ ಹ್ಯಾಂಡಲ್ ಹಾಕಿಲ್ಲ, ಮರೆತಿರಬೇಕು.
Fans of Subramanian Swamy waiting for 1 Dollar = 1 Rupee pic.twitter.com/x0R0ppL6bI
— Divya Spandana/Ramya (@divyaspandana) September 8, 2018
ಇರಲಿ ಬಿಡಿ, ಆದರೆ ಸುಬ್ರಮಣಿಯನ್ ಸ್ವಾಮಿಯವರ ಅಭಿಮಾನಿಗಳು, ಬಿಜೆಪಿಯ ಬೆಂಬಲಿಗರು ಬಿಡಬೇಕಲ್ಲ? ಈ ಚಿತ್ರವನ್ನು ರಮ್ಯಾ ಮತ್ತು ಕಾಂಗ್ರೆಸ್ಸಿಗೇ ತಿರುಗುಬಾಣ ಎಸೆದಿದ್ದು, ರಮ್ಯಾ ಅವರಿಗೆ ಸರಿಸಮವಾಗಿ ಹಾಸ್ಯ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಪುಂಖಾನುಪುಂಖವಾಗಿ ಅದೇ ಚಿತ್ರ ಇಟ್ಟುಕೊಂಡು ರಮ್ಯಾ ಮತ್ತು ರಾಹುಲ್ ಕಾಲೆಳೆದಿದ್ದಾರೆ.
* ಒಂದು ಬರಹ, ರಾಹುಲ್ ಗಾಂಧಿ ಅವರು ಪ್ರಧಾನಿ ಆಗುತ್ತಾರೆಂದು ಪಿಡಿಗಳು ಕಾಯುತ್ತಿವೆ ಎಂದು ಹೇಳಿದ್ದರೆ, ಇದಕ್ಕೆ ತಿರುಗೇಟು ನೀಡಿರುವ ಮತ್ತೊಬ್ಬರು, ಅಮಿತ್ ಮಾಳವೀಯ ಅವರ ಕಚೇರಿಯೆದಿರು ಬಿಜೆಪಿ ಭಕ್ತರು ನೌಕರಿಗೆಂದು ಕಾದು ಕುಳಿತಿದ್ದಾರೆಂದು ಬರೆದಿದ್ದಾರೆ. ಯಾವುದು ಚೆನ್ನಾಗಿದೆ ಎಂಬುದು ನೀವೇ ನಿರ್ಧರಿಸಿ.
* ಪವನ್ ಯಾದವ್ ಎಂಬುವವರು, ಭಾರತದ ಮೊದಲ ಭಯೋತ್ಪಾದಕ ಗೋಡ್ಸೆಯ ವಂಶಸ್ಥರಾದ ಸಂಘಿಗಳು, ಆ ಕಳಂಕವನ್ನು ಗೋಡ್ಸೆಯವರ ಆತ್ಮ ಯಾವಾಗ ತೊಡೆದುಹಾಕುತ್ತದೆ ಎಂದು ಕಾಯುತ್ತಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ಛೆಛೆ, ಅವರು ಮಹಾಘಟಬಂಧನ ಪ್ರಧಾನಿ ಅಭ್ಯರ್ಥಿಗಳು ಎಂದು ವಾಪಸ್ ನೀಡಿದ್ದಾರೆ.
* ರೋಸಿ ಎಂಬುವವರು, ಅದು ಹಾಗಲ್ಲ ರಮ್ಯಾ ಅವರೇ, ರಾಹುಲ್ ಗಾಂಧಿಯವರು ವಿಶ್ವೇಶ್ವರಯ್ಯ ಅವರ ಹೆಸರನ್ನು ಸರಿಯಾಗಿ ಹೇಳುತ್ತಾರೆಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಗೂಗ್ಲಿ ಎಸೆದಿದ್ದಾರೆ. ಹೀಗೆ ಹೇಳಿದರೆ ಕಾಂಗ್ರೆಸ್ ಅಭಿಮಾನಿಗಳು ಬಿಡ್ತಾರಾ? ಪ್ರಧಾನಿಯವರು ಈಜ್ ಎನ್ನುವ ಬದಲು ಈಸ್ ಎಂದು ಸರಿಯಾಗಿ ಯಾವಾಗ ಹೇಳುತ್ತಾರೋ ಎಂದು ಮೋದಿಯವರ ಅಭಿಮಾನಿಗಳು ಕಾದುಕುಳಿತಿದ್ದಾರೆ ಎಂದಿದ್ದಾರೆ.
* ಉತ್ತಮ ಭಾಷಣಕಾರರಾಗಲು ರಾಹುಲ್ ಗಾಂಧಿಯವರು ಕಾಯುತ್ತಿದ್ದಾರೆ, ರಾಹುಲ್ ಅವರು ಪ್ರಧಾನಿಯಾಗುತ್ತಾರೆಂದು ಸೋನಿಯಾ ಗಾಂಧಿ ಕಾಯುತ್ತಿದ್ದಾರೆ ಎಂದು ಹೇಳಿ ರೈಟಿಸ್ಟ್ ಸಿಂಗ್ವಿ ಎಂಬ ಖಾತೆಯುಳ್ಳ ವ್ಯಕ್ತಿಯೊಬ್ಬರು ಮತ್ತೊಂದು ಬಗೆಯ ಅಸ್ತಿಪಂಜರಗಳ ಚಿತ್ರ ನೇತು ಹಾಕಿದ್ದಾರೆ. ಇದು ಹೀಗೆಯೇ ಮುಂದುವರಿಯುತ್ತದೆ.