ಅಂತ್ಯ ಸಂಸ್ಕಾರ ಸ್ಥಳ ತಲುಪಿದ ಮಾರ್ಷಲ್ ಅರ್ಜಾನ್ ಸಿಂಗ್ ಪಾರ್ಥಿವ ಶರೀರ
ವಾಯು ಸೇನಾ ಮುಖ್ಯಸ್ಥ ಅರ್ಜಾನ್ ಸಿಂಗ್ ಗೆ ಅಂತಿಮ ನಮನ. ಬ್ರಾರ್ ಸ್ಕ್ವಯರ್ ನಲ್ಲಿ ಅಂತ್ಯ ಸಂಸ್ಕಾರ.
ನವದೆಹಲಿ, ಸೆಪ್ಟೆಂಬರ್ 18: ಶನಿವಾರ ರಾತ್ರಿ ನಿಧನರಾಗಿದ್ದ ವಾಯುಸೇನಾ ಮಾರ್ಷಲ್ ಅರ್ಜಾನ್ ಸಿಂಗ್ ಅವರ ಮೃತದೇಹ ಅವರ ಅಂತ್ಯಸಂಸ್ಕಾರ ನಡೆಯಲಿರುವ ಬ್ರಾರ್ ಸ್ಕ್ವಯರ್ ಗೆ ಬಂದು ಸೇರಿದೆ.
ಶನಿವಾರ (ಸೆ. 16) ಬೆಳಗ್ಗೆ ಹೃದಯಾಘಾತಕ್ಕೊಳಗಾಗಿದ್ದ ಅವರು, ಅಂದು ರಾತ್ರಿಯೇ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇದೀಗ, ಬ್ರಾರ್ ಸ್ಕ್ವಯರ್ ನಲ್ಲಿ ಅವರ ಅಂತ್ಯ ಸಂಸ್ಕಾರ ಪ್ರಕ್ರಿಯೆ ಸಾಗಿದೆ.
ಈ ವೇಳೆ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ರಾರ್ ಸ್ಕ್ವಯರ್ ನಲ್ಲಿ ಸಿಂಗ್ ಅವರಿಗೆ ಪುಷ್ಪಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು. ಅವರ ನಂತರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರೂ ದಿವಂಗತ ಸೇನಾನಿಗೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ, ದೆಹಲಿಯ ಕಂಟೋನ್ಮೆಂಟ್ ನಲ್ಲಿರುವ ಅರ್ಜಾನ್ ಸಿಂಗ್ ಅವರ ನಿವಾಸದಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಅಲ್ಲಿಂದ 8 ಕಿ.ಮೀ. ದೂರದಲ್ಲಿರುವ ಬ್ರಾರ್ ಸ್ಕ್ವಯರ್ ನಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳ ಗುರುತಿಸಲಾಗಿದ್ದು, ಅಲ್ಲಿಗೆ ಸಿಂಗ್ ಅವರ ಪಾರ್ಥೀವ ಶರೀರವನ್ನು ಕರೆದೊಯ್ಯಲಾಯಿತು.
ಹೂವು ಹಾರಗಳಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಸಿಂಗ್ ಅವರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ಇರಿಸಿದ ಸೈನಿಕರು ಅವರ ಶವ ಯಾತ್ರೆಗೆ ಸನ್ನದ್ಧರಾದರು. ಆ ಟ್ರಕ್ ನ ಮುಂದೆ ಹಾಗೂ ಹಿಂದೆ ಸೇನಾ ವಾಹನಗಳು ಸಾಗಿದವು. ಈ ವಾಹನಗಳು ಸಾಗುವ ಹಾದಿನಲ್ಲಿ ಝೀರೋ ಟ್ರಾಫಿಕ್ ಅನುಕೂಲ ಮಾಡಿಕೊಡಲಾಗಿತ್ತು.
ಏತನ್ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಸಿಂಗ್ ಅವರ ಅಂತ್ಯ ಸಂಸ್ಕಾರಕ್ಕೂ ಮುನ್ನ ಕುಶಾಲ ತೋಪುಗಳ ವಂದನೆ ನೀಡಲಾಗುವುದು ಎಂದು ತಿಳಿಸಿದರು.