ಕೈಲಾಸಕ್ಕೆ ವೀಸಾ ಆಹ್ವಾನ ನೀಡಿದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ
ನವದೆಹಲಿ, ಡಿಸೆಂಬರ್ 17: ದೇಶದಿಂದ ತಲೆಮರೆಸಿಕೊಂಡು ಓಡಿಹೋಗಿ ಈಕ್ವೆಡಾರ್ನಲ್ಲಿ ನೆಲಸಿದ್ದಾನೆ ಎಂದು ನಂಬಲಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾನೆ.
ಕೈಲಾಸಕ್ಕೆ ಬರಲು ಇಚ್ಚಿಸುವ ಭಕ್ತಾದಿಗಳು ವೀಸಾ ಅರ್ಜಿ ಸಲ್ಲಿಸುವಂತೆ ತಿಳಿಸಿರುವ ನಿತ್ಯಾನಂದ, ಯಾವ ರೀತಿ ಕೈಲಾಸಕ್ಕೆ ಬರಬಹುದು ಎಂಬುದನ್ನು ವಿವರಿಸಿರುವ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾನೆ. ಈ ವೀಡಿಯೋದಲ್ಲಿ ಮಾರ್ಗದ ಜೊತೆಗೆ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ.
ತನ್ನ ಕೈಲಾಸಕ್ಕೆ ಬರಲು ಇಚ್ಚಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಮೊದಲು ಬರಬೇಕು. ಅಲ್ಲಿಂದ ಚಾರ್ಟಡ್ ವಿಮಾನದಲ್ಲಿ ಕೈಲಾಸಕ್ಕೆ ಬರುವ ಬಗೆಯನ್ನು ವೀಡಿಯೋದಲ್ಲಿ ತಿಳಿಸಿದ್ದಾನೆ, ಈಕ್ವೆಡಾರ್ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ, ಅದಕ್ಕೆ ಕೈಲಾಸ ಎಂಬ ಹೆಸರಿಟ್ಟು ಹೊಸ ದೇಶವನ್ನೇ ನಿರ್ಮಾಣ ಮಾಡಿದ್ದಾನೆ ಎನ್ನಲಾಗಿದೆ.
ಆದರೆ, ಈ ಕುರಿತು ಈಕ್ವೆಡಾರ್ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿದ್ದು, ನಿತ್ಯಾನಂದ ಆ ರೀತಿಯ ಯಾವುದೇ ದ್ವೀಪವನ್ನು ಈಕ್ವೆಡಾರ್ನಲ್ಲಿ ಖರೀದಿ ಮಾಡಿಲ್ಲ ಎಂದಿದೆ.