ಕೊರೊನಾ ಕೊಲ್ಲುವ ಹರ್ಬಲ್ ''ಮೈಸೂರ್ ಪಾಕ್'' ಬಂದಿದೆ!
ಕೊಯಮತ್ತೂರು, ಜುಲೈ 9: ಕೊರೊನಾವೈರಸ್ ಗುಣಪಡಿಸಲು ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಸಂಶೋಧನೆ ಜಾರಿಯಲ್ಲಿವೆ. ಹಲವು ಔಷಧಿ, ಲಸಿಕೆ, ಮಾತ್ರೆಗಳು ಮಾರುಕಟ್ಟೆಗೆ ಬರಲು ಕಾದಿರುವಾಗ, ಸಿಹಿ ಅಂಗಡಿಯೊಂದು ಹರ್ಬಲ್ ಮೈಸೂರ್ ಪಾಕ್ ತಿನ್ನಿ ಕೊರೊನಾದಿಂದ ಮುಕ್ತರಾಗಿ ಎಂದಿದೆ.
Recommended Video
ಕೊರೊನಾವೈರಸ್ ಗುಣಪಡಿಸುವ ಗಿಡಮೂಲಿಕೆಗಳನ್ನು ಬೆರೆಸಲಾದ ಹರ್ಬಲ್ ಮೈಸೂರ್ ಪಾಕ್ ನಿಯಮಿತವಾಗಿ ತಿನ್ನುವುದರಿಂದ ಮೂರು ದಿನಗಳಲ್ಲಿ ಸೋಂಕು ಗುಣವಾಗುತ್ತದೆ ಎಂದು ಕೊಯಮತ್ತೂರಿನ ಸಿಹಿ ಅಂಗಡಿ ಹೇಳಿದೆ.
ಆದರೆ, ಈ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ, ಅಂಗಡಿ ಬಂದ್ ಮಾಡಿಸಿದ್ದಾರೆ. ಜೊತೆಗೆ FSSAIಲೈಸನ್ಸ್ ಕೂಡಾ ರದ್ದಾಗಿದೆ.
19 ಗಿಡಮೂಲಿಕೆಗಳನ್ನು ಬೆರೆಸಿದ ಮೈಸೂರ್ ಪಾಕ್ ಇದಾಗಿದ್ದು, ಮೂರು ದಿನಗಳಲ್ಲೇ ಕೊರೊನಾ ಗುಣಪಡಿಸುತ್ತದೆ ಎಂದು ಅಂಗಡಿ ಜಾಹೀರಾತು ಪ್ರಕಟಿಸಿತ್ತು. ಆದರೆ ದಾಳಿ ವೇಳೆ ಸರಿಯಾದ ವಿವರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಿಸಿ, ತನಿಖೆಗೆ ಆದೇಶಿಸಲಾಗಿದೆ. ಕೊರೊನಾವೈರಸ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಕಾಕಾಸುರ ಮಾದಪ್ಪರ ಪಾಕ ಮೈಸೂರ್ ಪಾಕ್ ಆಯ್ತು-ಮೈಸೂರ್ ಪಾಕ್ ಹಿಂದಿನ ಪುಟ್ಟ ಕಥೆ
ಜನರು ಕೆಜಿಗೆ 800 ರೂ.ಗಳಂತೆ ಮೈಸೂರ್ ಪಾಕ್ ಅನ್ನು ಕಳೆದ ಎರಡು ದಿನಗಳಿಂದ ಖರೀದಿಸುತ್ತಿದ್ದರು. ಆನಂತರ ಅಂಗಡಿ ಮೇಲೆ ದಾಳಿ ನಡೆಸಿರುವ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರದ ಅಧಿಕಾರಿಗಳು, 120 ಕೆಜಿ ಮೈಸೂರ್ ಪಾಕ್ ವಶಪಡಿಸಿಕೊಂಡಿದ್ದಾರೆ. ಇವುಗಳ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಅಂಗಡಿ ಮಾಲೀಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಯಮತ್ತೂರಿನ ಚಿನ್ನಿಯಂಪಾಳ್ಯಂನಲ್ಲಿರುವ ಈ ಅಂಗಡಿ
ಕೊಯಮತ್ತೂರಿನ ಚಿನ್ನಿಯಂಪಾಳ್ಯಂನಲ್ಲಿರುವ ಈ ಅಂಗಡಿ ಮಾಲೀಕ ಶ್ರೀರಾಮ್ ಅವರು ಒಂದೇ ದಿನಕ್ಕೆ ವೈರಸ್ ಮಾಯವಾಗುತ್ತದೆ ಎಂದು ಅಂಗಡಿಗೆ ಬಂದವರಿಗೆಲ್ಲ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.
ಮೈಸೂರ್ ಪಾಕ್ ಸಿಹಿ ತಿನಿಸಿಗೆ ಫೋಟಾನ ಸ್ಪೀಡ್ ಕೊರೊನಾ ಕ್ಯೂರ್ ಮೈಸೂರ್ ಪಾ ಎಂದು ವಿಶಿಷ್ಟ ಹೆಸರಿಡಲಾಗಿತ್ತು. ಜಾಹೀರಾತಿನಲ್ಲಿ ಈ ಸಿಹಿಯನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ವಿವರ ನೀಡಲಾಗಿತ್ತು.
13 ಬಾರಿ ಕಚ್ಚಿ ಬಾಯಿ ಚಪ್ಪರಿಸಿ ತಿನ್ನಬೇಕು
ಬಾಯಿಗೆ ಹಾಕಿಕೊಂಡು ಬಾಯಿ ಮುಚ್ಚಿಕೊಂಡು 13 ಬಾರಿ ಕಚ್ಚಿ ಬಾಯಿ ಚಪ್ಪರಿಸಿ ತಿನ್ನಬೇಕು. ರಾತ್ರಿ ಮಲಗುವಾಗ ತಲೆಯಿಂದ ಉಂಗುಷ್ಟದ ತನಕ ಹೊದಿಕೆ ಹೊದ್ದುಕೊಂಡು ಮಲಗಬೇಕು. ಇದರಿಂದ ದೇಹದ ಶಾಖ ಹೆಚ್ಚಾಗಿ ಬಿಸಿಯುಂಟಾಗಿ ಬೆವರು ಉಂಟಾಗಲಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾದರೆ, ಕಹಿ ಎನಿಸುವ ಈ ತಿನಿಸು ಸಿಹಿಯಾಗುತ್ತಾ ಹೋಗುತ್ತದೆ ಎಂದಿದ್ದಾರೆ.
ಮೈಸೂರ್ ಪಾಕ್ ತನ್ನದೆಂದ ತಮಿಳುನಾಡು! ಏನಿದು ವಿವಾದ?
ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು
ಈ ಸಿಹಿ ತಿನಿಸನ್ನು ಸೋಂಕಿತರು ಮಾತ್ರ ತಿನ್ನಬೇಕು ಎಂದೇನಿಲ್ಲ. ಯಾರೂ ಬೇಕಾದರೂ ತಿಂದು ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದಿದ್ದಾರೆ. ಸಿಹಿ ತಿನಿಸು ತಯಾರಿಕೆಗೆ ಬಳಸುವ ಪದಾರ್ಥಗಳು, ಮಾಡುವ ವಿಧಾನ, ಶೇಖರಣೆ, ಚಿಕಿತ್ಸೆ ವಿಧಾನ ಎಲ್ಲದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲು ಸಿದ್ಧವಿದ್ದು, ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಬಹುದು ಎಂದು ಶ್ರೀರಾಮ್ ಹೇಳಿದ್ದಾರೆ.
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ ಕೆ ತಮಿಳ್ ಸೆಲ್ವನ್
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ ಕೆ ತಮಿಳ್ ಸೆಲ್ವನ್ ಈ ಬಗ್ಗೆ ಪ್ರತಿಕ್ರಿಯಿಸಿ, ಆಹಾರ ಭದ್ರತೆ ಹಾಗೂ ಗುಣಮಟ್ಟ ಕಾಯ್ದೆ 2006 ಸೆಕ್ಷನ್ 53 ಹಾಗೂ 61ರ ಅನ್ವಯ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಸಿದ್ಧ ಆರೋಗ್ಯ ಅಧಿಕಾರಿಗಳು ಮೈಸೂರ್ ಪಾಕ್ ಸ್ಯಾಂಪಲ್ ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ವರದಿ ಬಂದ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದಿದ್ದಾರೆ.