ಬಾವಲಿಗಳಿಂದಲೇ ನಿಪಾಹ್ ವೈರಸ್ ಹರಡಿದ್ದು ನಿಜ
ನವದೆಹಲಿ, ಜುಲೈ 3: ಕೇರಳ ಹಾಗೂ ಸುತ್ತಮುತ್ತಲ ರಾಜ್ಯಗಳಲ್ಲಿ ಭೀತಿ ಹುಟ್ಟಿಸಿದ್ದ ಮಾರಣಾಂತಿಕ ನಿಪಾಹ್ ವೈರಸ್ ಹರಡುವಿಕೆಗೆ ಫ್ರೂಟ್ ಬ್ಯಾಟ್ಗಳೇ (ಒಂದು ಜಾತಿಯ ಬಾವಲಿಗಳು) ಕಾರಣ ಎನ್ನುವುದು ದೃಢಪಟ್ಟಿದೆ.
ಬಾವಲಿಗಳಿಂದಲೇ ನಿಪಾಹ್ ವೈರಸ್ ಹರಡಿದೆ ಎನ್ನುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಖಚಿತಪಡಿಸಿದೆ. ಇದರಿಂದ ನಿಪಾಹ್ ವೈರಸ್ ಹರಡುವಿಕೆ ಕುರಿತಂತೆ ಉದ್ಭವಿಸಿದ್ದ ವಾದ ವಿವಾದಗಳಿಗೆ ತೆರೆ ಬಿದ್ದಂತಾಗಿದೆ.
ಕೇರಳದ ಕೊಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾಹ್ ವೈರಸ್ನಿಂದಾಗಿ 17 ಮಂದಿ ಮೃತಪಟ್ಟಿದ್ದರು.
ನಿಪಾಹ್ ವೈರಸ್ ಎಂದರೇನು? ಮಾರಣಾಂತಿಕ ಜ್ವರದ ಕುರಿತು ಮಾಹಿತಿ
ಕೊಯಿಕ್ಕೋಡ್ನ ಪೆರಂಬರದ ಚಂಗರೊಥ್ ಗ್ರಾಮದಲ್ಲಿ ಮೊದಲು ನಿಪಾಹ್ ಸೋಂಕು ತಗುಲಿದ ಮತ್ತು ಸಾವು ಸಂಭವಿಸಿದ ಪ್ರಕರಣಗಳು ವರದಿಯಾಗಿದ್ದವು.
ಇಲ್ಲಿನ
ಬಾವಲಿಗಳನ್ನು
ಮೇನಲ್ಲಿ
ಪರೀಕ್ಷಿಸಿದಾಗ
ನಿಪಾಹ್
ವೈರಸ್
ಹರಡುವ
ಯಾವುದೇ
ಲಕ್ಷಣಗಳು
ಕಂಡುಬಂದಿರಲಿಲ್ಲ.
ಬಾವಲಿಗಳು
ಮತ್ತು
ಹಂದಿಗಳಿಂದ
ನಿಪಾಹ್
ಹರಡುತ್ತಿದೆ
ಎಂಬ
ಅಭಿಪ್ರಾಯ
ವ್ಯಕ್ತಪಡಿಸಿದ್ದ
ವೈದ್ಯಕೀಯ
ಅಧಿಕಾರಿಗಳು,
ಅದರ
ಮೂಲ
ಯಾವುದೆಂದು
ಅಚ್ಚರಿಗೆ
ಒಳಗಾಗಿದ್ದರು.
ಕೇರಳ: ನಿಪಾಹ್ ವೈರಸ್ ಗೂ ಬಾವಲಿಗೂ ಸಂಬಂಧವಿಲ್ಲ?!
ಈ ಪ್ರಶ್ನೆಗಳಿಗೆ ಎರಡನೆಯ ಹಂತದಲ್ಲಿನ ಬಾವಲಿಗಳ ಪರೀಕ್ಷೆ ಉತ್ತರ ನೀಡಿದೆ.
ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ
ಈ ಪ್ರದೇಶದಲ್ಲಿ ಕಂಡುಬಂದ ಫ್ರೂಟ್ ಬ್ಯಾಟ್ಗಳಲ್ಲಿ ನಿಪಾಹ್ ವೈರಸ್ ಸೋಂಕು ಇರುವುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ಸೆರೆ ಹಿಡಿದಿದ್ದ ಬಾವಲಿಗಳೇ ಬೇರೆ!
ಮೇನಲ್ಲಿ ನಡೆದಿದ್ದ ಮೊದಲ ಪ್ರಯೋಗದಲ್ಲಿ ಫ್ರೂಟ್ ಬ್ಯಾಟ್ ಬದಲು ಬೇರೆ ಜಾತಿಯ ಬಾವಲಿಗಳನ್ನು ಸೆರೆಹಿಡಿದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೀಗಾಗಿ ಸೋಂಕು ಹರಡುವ ವೈರಸ್ನ ಪತ್ತೆ ಹಚ್ಚುವ ಕಾರ್ಯ ವಿಳಂಬವಾಗಿತ್ತು.
'ಮೊದಲು ಸೆರೆಹಿಡಿದಿದ್ದ 21 ಬಾವಲಿಗಳು ಬೇರೆ ಜಾತಿಯವು. ಅವು ನಿಪಾಹ್ ವೈರಸ್ ಹರಡುವುದಿಲ್ಲ. ಎರಡನೆಯ ಹಂತದಲ್ಲಿ ಸೆರೆಹಿಡಿದ 55 ಬಾವಲಿಗಳಲ್ಲಿ ಫ್ರೂಟ್ ಬ್ಯಾಟ್ಗಳು ಸಹ ಇದ್ದವು. ಅವುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನಿಪಾಹ್ ವೈರಸ್ ಪಾಸಿಟಿವ್ ಫಲಿತಾಂಶ ಬಂದಿತು ಎಂದು ಭಾರತೀಯ ವೈದ್ಯಕೀಯ ಪರೀಕ್ಷಾ ಮಂಡಳಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ನಿಪಾಹ್ ಮುಕ್ತ ಜಿಲ್ಲೆಗಳು
ಜೂನ್ 1ರ ಬಳಿಕ ಕೊಯಿಕ್ಕೋಡ್ ಮತ್ತು ಮಲಪ್ಪುರಂಗಳಲ್ಲಿ ಯಾವುದೇ ನಿಪಾಹ್ ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಈ ಜಿಲ್ಲೆಗಳು ನಿಪಾಹ್ ಮುಕ್ತ ಜಿಲ್ಲೆಗಳೆಂದು ಕೇರಳ ಸರ್ಕಾರ ಭಾನುವಾರ ಘೋಷಣೆ ಮಾಡಿದೆ.
ನಿಪಾಹ್ದಿಂದ ಉಂಟಾದ 17 ಸಾವುಗಳಲ್ಲಿ 14 ಸಾವುಗಳು ಕೊಯಿಕ್ಕೋಡ್ನಲ್ಲಿ ಉಂಟಾಗಿದ್ದರೆ, 3 ಸಾವು ಮಲಪ್ಪುರಂನಲ್ಲಿ ವರದಿಯಾಗಿದ್ದವು.
ಇದರಿಂದ ಭಯಗೊಂಡಿದ್ದ ಜನರು ತಮ್ಮ ಮನೆಗಳನ್ನು ತೊರೆದು ನಿಪಾಹ್ ವೈರಸ್ ಪತ್ತೆಯಾಗದ ಊರುಗಳಿಗೆ ತೆರಳಿ ಆಶ್ರಯ ಪಡೆದುಕೊಂಡಿದ್ದರು.
ಫ್ರೂಟ್ ಬ್ಯಾಟ್ಗಳಲ್ಲಿ ಹಲವು ಪ್ರಭೇದ
ಭಾರತದಲ್ಲಿ ಫ್ರೂಟ್ ಬ್ಯಾಟ್ನ ಅನೇಕ ಉಪಜಾತಿಯ ಬಾವಲಿಗಳಿವೆ. ಪೆರೊಪಸ್ ಗಿಗಾಂಟಸ್, ಇಯೊನಿಕ್ಟರಿಸ್ ಸ್ಪೆಲಾಯಿ, ಸಿನೊಪ್ಟೆರಸ್, ಸ್ಕೊಟೊಫಿಲಸ್ ಕುಹ್ಲಿ ಮತ್ತು ಹಿಪ್ಪೊಸಿಡೆರಸ್ ಲಾರ್ವಟಸ್ ಜಾತಿಯ ಬಾವಲಿಗಳು ನಿಪಾಹ್ ವೈರಸ್ ಅನ್ನು ಹರಡುತ್ತವೆ.
ಈ ಬಾವಲಿಗಳಲ್ಲಿ ಅಲ್ಪ ಮಟ್ಟದ ಸೋಂಕು ಇರುತ್ತವೆ. ಅವುಗಳಿಂದ ಬಾವಲಿಗೆ ಹಾನಿಯಾಗುವುದಿಲ್ಲ. ಕೆಲವು ರೋಗಪೀಡಿತ ಮತ್ತು ಆಯಾಸಗೊಂಡ ಬಾವಲಿಗಳು ತಮ್ಮ ಹಿಕ್ಕೆ, ಜೊಲ್ಲು ಮತ್ತು ದೇಹದ ಇತರೆ ರಸಗಳ ಮೂಲಕ ವೈರಸ್ಅನ್ನು ಸ್ರವಿಸುತ್ತವೆ. ಇದು ಸೋಂಕು ಮನುಷ್ಯನಿಗೆ ತಗುಲಲು ಮತ್ತು ಅವರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗುತ್ತವೆ.
ಹಂದಿಗಳಿಂದ ನಿಪಾಹ್
ಮಲೇಷ್ಯಾದಲ್ಲಿ 1998-99ರಲ್ಲಿ ಈ ವೈರಸ್ಗಳು ಬಾವಲಿಗಳಿಂದ ಹಂದಿಗಳಿಗೆ, ಅವುಗಳಿಂದ ಮನುಷ್ಯರಿಗೆ ಹರಡಿದ್ದವು. ಬಾಂಗ್ಲಾದೇಶ ಮತ್ತು ಭಾರತಗಳಲ್ಲಿ ನೇರವಾಗಿ ಬಾವಲಿಗಳಿಂದ ಮನುಷ್ಯರಿಗೆ ಹರಡಿವೆ. ಮಲೇಷ್ಯಾದಲ್ಲಿ ನಿಪಾಹ್ ವೈರಸ್ ಹಂದಿಗಳಿಂದ ಹರಡುತ್ತದೆ ಎನ್ನುವುದನ್ನು 1999ರಲ್ಲಿ ಪತ್ತೆಹಚ್ಚಲಾಗಿತ್ತು. ಆ ವರ್ಷ ಅಲ್ಲಿ 105 ಮಂದಿ ಮೃತಪಟ್ಟಿದ್ದರು. ಆದರೆ ಕೇರಳದಲ್ಲಿ ಹಂದಿಗಳಿಂದ ವೈರಸ್ ಹರಡಿದೆ ಎಂಬ ಅಭಿಪ್ರಾಯವನ್ನು ಅಲ್ಲಗಳೆಯಲಾಗಿದೆ.
|
ಬೈ ಬೈ ನಿಪಾಹ್
ಕೊಯಿಕ್ಕೋಡ್ ನಿಪಾಹ್ ವೈರಸ್ ಮುಕ್ತ ಎಂಬ ಘೋಷಣೆ ಮಾಡಿದ್ದನ್ನು ಅಲ್ಲಿನ ಜನರು ಸಂಭ್ರಮಿಸಿದ್ದಾರೆ. ಕೊಯಿಕ್ಕೋಡ್ನ ಯುವ ಉತ್ಸಾಹಿಗಳ ತಂಡವೊಂದು 'ಬೈ ಬೈ ನಿಪಾಹ್..' ಎಂಬ ಹಾಡು ಸಂಯೋಜಿಸಿ ಪಟ್ಟಣದ ಗಲ್ಲಿಗಳಲ್ಲಿ ನೃತ್ಯವನ್ನೂ ಮಾಡಿ ಚಿತ್ರೀಕರಿಸಿದೆ.
'ಇದು ಕೊಯಿಕ್ಕೋಡ್, ನಾವು ನಿಪಾಹ್ವನ್ನು ಸೋಲಿಸಿದ್ದೇವೆ, ನಾವು ಎಂದಿಗೂ ಸೋಲುವವರಲ್ಲ..' ಎಂಬ ಸಾಲುಗಳಿರುವ 1.30 ನಿಮಿಷದ ಹಾಡು ತುಂಬಾ ಜನಪ್ರಿಯವಾಗಿದೆ.
ಸಂಘಟಿತ ಪ್ರಯತ್ನದ ಫಲ
ಆರೋಗ್ಯ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ವಿಜ್ಞಾನಿಗಳು, ಸಂಶೋಧಕರ ಸಕಾಲಿಕ ಮತ್ತು ಸಂಘಟಿತ ಪ್ರಯತ್ನದ ಫಲವಾಗಿ ಸೂಕ್ತ ಸಮಯದಲ್ಲಿ ಹಾಗೂ ಯಶಸ್ವಿಯಾಗಿ ಕೇರಳದಲ್ಲಿನ ನಿಪಾಹ್ ವೈರಸ್ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ನಡ್ಡಾ ಹೇಳಿದ್ದಾರೆ.