ಮಹಾತ್ಮಾ ಗಾಂಧಿಯವರ ಜೀವ ಉಳಿಸಿದ್ದ 'ಭಿಲಾರೆ ಗುರೂಜಿ' ನಿಧನ
ಮಹಾಬಲೇಶ್ವರ(ಮಹಾರಾಷ್ಟ್ರ), ಜುಲೈ 20: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜೀವ ಉಳಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭಿಕು ದಾಜಿ ಬಿಲಾರೆ(98), ಮಹಾರಾಷ್ಟ್ರದ ಮಹಾಬಲೇಶ್ವರ ಬಳಿಯ ಭಿಲಾರ್ ಎಂಬ ಹಳ್ಳಿಯ ತಮ್ಮ ನಿವಾಸದಲ್ಲಿ ನಿನ್ನೆ (ಜುಲೈ 19) ನಿಧನರಾದರು.
ಗಾಂಧಿ ಹಂತಕ ಗೋಡ್ಸೆ ಬಿಟ್ಟು ಮತ್ತೊಬ್ಬನಿದ್ದಾನೆ: 'ಸುಪ್ರೀಂ'ನಲ್ಲಿ ದಾವೆ
ಭಿಲಾರೆ ಗುರೂಜಿ ಎಂದೇ ಖ್ಯಾತರಾಗಿದ್ದ ಅವರ ಅಂತ್ಯಕ್ರಿಯೆ ಸ್ವಗ್ರಾಮ ಭಿಲಾರ್ ನಲ್ಲಿ ನೆರವೇರಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಕೊಲ್ಲುವ ನಾಲ್ಕು ವರ್ಷ ಮುಂಚೆ ಗಾಂಧಿಯವರ ಜೀವವನ್ನು ರಕ್ಷಿಸಿದ್ದು ಇದೇ ಬಿಲಾರೆ ಗುರೂಜಿ.
1944 ರಲ್ಲಿ ಮಹಾರಾಷ್ಟ್ರದ ಮಹಾಬಲೇಶ್ವರದ ಪಂಚಗಣಿಗೆ ಬಂದಿದ್ದ ಮಹಾತ್ಮಾ ಗಾಂಧಿಯವರು ಸಾರ್ವಜನಿಕರೊಂದಿಗೆ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಸಂದರ್ಭವದು. ಈ ಸಮಯಕ್ಕಾಗಿಯೇ ಹೊಂಚು ಹಾಕುತ್ತಿದ್ದ ಗೋಡ್ಸೆ ಮತ್ತವರ ಸಹಚರರು, ಚಾಕು ಹಿಡಿದು ಗಾಂಧಿಯವರತ್ತ ನುಗ್ಗುವುದರಲ್ಲಿದ್ದರು. ಈ ದೃಶ್ಯಕ್ಕೆ ಸಾಕ್ಷಿಯಾದ ಭಿಲಾರೆ ಗುರೂಜಿ ತಕ್ಷಣವೇ ಸಾವರಿಸಿಕೊಂಡು, ತಮ್ಮ ಕರ್ತವ್ಯವನ್ನು ಮನಗಂಡರು.
ಗಾಂಧೀಜಿ ಕಲಿತ 164 ವರ್ಷ ಹಳೆ ಶಾಲೆ ಮ್ಯೂಸಿಯಂ ಆಗಿ ಪರಿವರ್ತನೆ
ಚಾಕು ಹಿಡಿದಿದ್ದ ಗೋಡ್ಸೆ ಕೈಯನ್ನು ತಿರುಚಿ, ಕೆಲ ಸಮಯದ ಕಾಲ ಅವರ ಸಹಚರರೊಡನೆ ಕಾದಾಡಿದರು. ಆವತ್ತು ಭಿಲಾರೆ ಗುರೂಜಿ ಸಮಯಪ್ರಜ್ಞೆ ಮೆರೆಯದೇ ಇದ್ದರೆ ನಾಲ್ಕು ವರ್ಷದ ನಂತರ ನಡೆದ ದುರ್ಘಟನೆ, ಅಂದೇ ನಡೆದುಬಿಡುತ್ತಿತ್ತು! ಈ ಘಟನೆಯನ್ನು ಗಾಂಧಿಜೀಯವರ ಆಪ್ತರಾಗಿದ್ದ ಪ್ಯಾರೆಲಾಲ್ ಎಂಬುವವರು, ದಾಖಲಿಸಿಟ್ಟಿದ್ದಾರೆ.
ಹೀಗೆ ಗಾಂಧಿಯವರ ಜೀವ ಉಳಿಸಿದ್ದ ಭಿಲಾರೆ ಗುರೂಜಿ ಸದಾ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದವರು. ಮಹಾಬಲೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರು.
ಅವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆಯಲ್ಲಿ ಶಾಸಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು ಭಾಗವಹಿಸಿದ್ದರು.