4 ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ, 4 ಮಂದಿಗೆ ಪದೋನ್ನತಿ
ನವದೆಹಲಿ, ಡಿಸೆಂಬರ್ 31: ದೇಶದ ವಿವಿಧ ಹೈಕೋರ್ಟ್ಗಳ ನಾಲ್ವರು ಮುಖ್ಯ ನ್ಯಾಯಮೂರ್ತಿಗಳು ಮತ್ತು ಆರು ನ್ಯಾಯಮೂರ್ತಿಗಳನ್ನು ಗುರುವಾರ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ಗೂ ಹೊಸ ನ್ಯಾಯಮೂರ್ತಿ ನೇಮಕವಾಗಿದ್ದಾರೆ.
ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಅವರನ್ನು ಉತ್ತರಾಖಂಡಕ್ಕೆ ವರ್ಗಾವಣೆ ಮಾಡಲಾಗಿದೆ. ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಮಹೇಶ್ವರಿ ಅವರನ್ನು ಸಿಕ್ಕಿಂಗೆ ವರ್ಗಾಯಿಸಲಾಗಿದೆ.
ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಅವರನ್ನು ಆಂಧ್ರಪ್ರದೇಶಕ್ಕೆ ಮತ್ತು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ ಅವರನ್ನು ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿಜೆಗಳ ವರ್ಗಾವಣೆಯಿಂದ ಜಗನ್ ಮೋಹನ್ಗೆ ಅನುಕೂಲ: ಆಂಧ್ರ ಹೈಕೋರ್ಟ್ ಅಸಮಾಧಾನ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾರತ ಸಂವಿಧಾನದ 222ನೇ ವಿಧಿಯ ವರ್ಗ (1) ಅಡಿಯಲ್ಲಿನ ಅಧಿಕಾರ ಬಳಸಿಕೊಂಡು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಜತೆಗಿನ ಸಮಾಲೋಚನೆ ಬಳಿಕ ಕೊಲಿಜಿಯಂ ಶಿಫಾರಸಿಗೆ ಸಹಿ ಹಾಕಿದ ಬಳಿಕ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದೆ. ಮುಂದೆ ಓದಿ.
ಸಿಜೆಗಳ ವರ್ಗಾವಣೆ
ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಯಾದವ್ ಅವರನ್ನು ಅಲಹಾಬಾದ್ (ಉತ್ತರ ಪ್ರದೇಶ) ಹೈಕೋರ್ಟಿಗೆ ವರ್ಗಾಯಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ನ ನ್ಯಾ. ರಾಜೇಶ್ ಬಿಂಡಾಲ್ ಅವರನ್ನು ಕಲ್ಕತ್ತಾ ಹೈಕೋರ್ಟ್, ಮದ್ರಾಸ್ ಹೈಕೋರ್ಟ್ನ ವಿನೀತ್ ಕೊಠಾರಿ ಅವರನ್ನು ಗುಜರಾತ್ಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟಿಗೆ ಸತೀಶ್ ಚಂದ್ರ ಶರ್ಮಾ
ಕಲ್ಕತ್ತಾದಿಂದ ಜೋಯ್ಮಾಲಾ ಬಗ್ಚಿ ಅವರನ್ನು ಆಂಧ್ರಪ್ರದೇಶಕ್ಕೆ, ಮಧ್ಯಪ್ರದೇಶದ ಸತೀಶ್ ಚಂದ್ರ ಶರ್ಮಾ ಅವರನ್ನು ಕರ್ನಾಟಕಕ್ಕೆ ಮತ್ತು ಉತ್ತರಾಖಂಡ ಹೈಕೋರ್ಟ್ನ ನ್ಯಾಯಮೂರ್ತಿ ರವಿ ವಿಜಯಕುಮಾರ್ ಮಳಿಮಠ್ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ.
ಎಸ್ ಮುರಳೀಧರ್, ಹಿಮಾ ಕೊಹ್ಲಿ
ನಾಲ್ವರು ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿ ಮಾಡುವ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ಅವರನ್ನು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ಪದೋನ್ನತಿ ಮಾಡಲಾಗಿದೆ. ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ದೆಹಲಿ ಹೈಕೋರ್ಟ್ ಸಿಜೆಯಾಗಲಿದ್ದಾರೆ.
ಸಂಜಿಬ್, ಪಂಕಹ್ ಪದೋನ್ನತಿ
ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮದ್ರಾಸ್ ಹೈಕೋರ್ಟ್ ಸಿಜೆಯಾಗಿ ಹಾಗೂ ಅಲಹಾಬಾದ್ ಹೈಕೋರ್ಟ್ನ ಪಂಕಜ್ ಮಿತ್ತಲ್ ಅವರನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ಪದೋನ್ನತಿ ಮಾಡಲಾಗಿದೆ.