ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡೋಜ ಡಾ. ಸರೋಜಿನಿ ಮಹಿಷಿ ವಿಧಿವಶ

By Mahesh
|
Google Oneindia Kannada News

ನವದೆಹಲಿ. ಜ.25: ಕೇಂದ್ರದ ಮಾಜಿ ಸಚಿವೆ, ನಾಡೋಜ ಪ್ರಶಸ್ತಿ ವಿಜೇತ ಶಿಕ್ಷಣ ತಜ್ಞೆ, ಡಾ. ಸರೋಜಿನಿ ಮಹಿಷಿ(87) ಅವರು ದೆಹಲಿಯ ಗಾಜಿಯಾಬಾದ್ ನಿವಾಸದಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿದ್ದರು.

ಧಾರವಾಡದಲ್ಲಿ 1927ರ ಮಾರ್ಚ್ 3 ರಂದು ಜನಿಸಿದ ಧಾರವಾಡದ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದರು. ಪ್ರಧಾನಿ ಚಂದ್ರಶೇಖರರವರ ಸಂಪುಟದಲ್ಲಿ ರಾಜ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.ಸರೋಜಿನಿ ಮಹಿಷಿ ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜ್ಯ ಸಭಾ ಸದಸ್ಯೆ,ರಾಜ್ಯ ಸಭಾ ಉಪಸಭಾಪತಿಯಾಗಿಯೂ ಕೆಲಸ ನಿರ್ವಹಿಸಿದ್ದರು.

ಮಹಿಳೆಯರ ಏಳ್ಗೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು ಮಹಿಳೆಯರ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ದೊರಕಿಸಿಕೊಡುವಲ್ಲಿಯೂ ಶ್ರಮಿಸಿದ್ದಾರೆ. [ಉಚಿತ ಉದ್ಯೋಗ ಮಾರ್ಗದರ್ಶನ ಶಿಬಿರ]

1983 ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರೋಜಿನಿ ಮಹಿಷಿ ಅವರು ರೇಲ್ವೇ ಇಲಾಖೆ ಮತ್ತು ಸಾರ್ವಜನಿಕ ವಲಯದ ಹುದ್ದೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕುರಿತಾಗಿ ''ಸರೋಜಿನಿ ಮಹಿಷಿ ವರದಿ'' ತಯಾರು ಮಾಡಿದ್ದರು.

ಸಾಹಿತಿಯಾಗಿ ಡಾ. ಮಹಿಷಿ: ಸರೋಜಿನಿ ಮಹಿಷಿಯವರು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಡಿ.ವಿ.ಗುಂಡಪ್ಪನವರ ಮಂಕು ತಿಮ್ಮನ ಕಗ್ಗ ಹಾಗೂ ಶಿವರಾಮಕಾರಂತರ ಪ್ರವಾಸ ಕಥನ 'ಅಪೂರ್ವ ಪಶ್ಚಿಮ' ಕೃತಿಗಳನ್ನು ಕನ್ನಡದಿಂದ ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲದೇ ನಾ.ಶಿ. ಫಡಕೆಯವರ ಶಾಕುಂತಲವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು.

Educationist Sarojini Mahishi Passes away

ಯೇ ಹಮಾರೆ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಳ್ಳು ಗುಲಾಬಿ ಮಕ್ಕಳ ಕವನ ಸಂಕಲನಕ್ಕೆ ರಾಜ್ಯಸರ್ಕಾರದ ಬಹುಮಾನ, ಪುಣೆಯ ಸಮೀರ ಸಂವರ್ಧಿನಿ ಸಂಸ್ಕೃತಸಭಾದಿಂದ 'ವಿದ್ವತ್‌ರತ್ನ', ಉಡುಪಿ ಪೇಜಾವರ ಶ್ರೀಗಳಿಂದ 'ಕರ್ನಾಟಕ ಸರಸ್ವರ', ಅಖಿಲಭಾರತ ಹಿಂದಿ ಸಾಹಿತ್ಯಸಭಾ ಕುರುಕ್ಷೇತ್ರದಿಂದ 'ಸಾಹಿತ್ಯವಾಚಸ್ಪತಿ', ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ ಪ್ರಶಸ್ತಿ' ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸರೋಜಿನಿ ಮಹಿಷಿ ವರದಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಕರ್ನಾಟಕ ಸರಕಾರವು ಶ್ರೀಮತಿ ಸರೋಜಿನಿ ಮಹಷಿಯವರಿಗೆ ಕೇಳಿಕೊಂಡಿತ್ತು. ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದು ಖ್ಯಾತವಾಗಿದೆ.[ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ: ಗಡುವು ]

ಸಿಎಂ ಸಿದ್ದರಾಮಯ್ಯ ಸಂತಾಪ: ಡಾ. ಸರೋಜಿನಿ ಮಹಿಷಿ ಅವರ ನಿಧನಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬಿನಿ ಮಿಡಿದಿದ್ದಾರೆ.

ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲವನ್ನು ಮೂಡಿಸಿದ್ದ ಡಾ. ಸರೋಜಿನಿ ಮಹಿಷಿ ಅವರು ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ನೂರಕ್ಕೆ ನೂರರಷ್ಟು ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಬೇಕು. ಆಡಳಿತ ಭಾಷೆ ಕನ್ನಡವಾಗಿರಬೇಕು. ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲೂ, ಖಾಸಗಿ ಸಂಸ್ಥೆಗಳಲ್ಲೂ ಹಾಗೂ ಬಹು ರಾಷ್ಟ್ರೀಯ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲು ಮೀಸಲಾತಿ ಕಲ್ಪಿಸಬೇಕು ಎಂದು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

ಸದಾ ಕನ್ನಡ ಪರ ನಿಲುವು, ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಡಾ. ಸರೋಜಿನಿ ಮಹಿಷಿ ಅವರು ಡಾ. ಡಿ. ವಿ. ಗುಂಡಪ್ಪ ಅವರ ಮಂಕು ತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದ್ದರು. ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತು ಪ್ರವೇಶಿಸಿದ್ದ ಡಾ. ಸರೋಜಿನಿ ಮಹಿಷಿ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಡಾ. ಸರೋಜಿನಿ ಮಹಿಷಿ ಅವರ ನಿಧನದಿಂದ ಕನ್ನಡತನದ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವವಿದ್ದ ದಿಟ್ಟ ಮಹಿಳೆ ಅಸ್ತಂಗತರಾದಂತಾಗಿದೆ ಎಂದು ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

English summary
Sarojini Mahishi a former Union Minister of India, Educationist and a Literary Figure hailing Dharwad, Karnataka state passed away today(Jan.25) at her residence in Gaziabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X