Big Breaking: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ
ನವದೆಹಲಿ, ಏಪ್ರಿಲ್ 20: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.
ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಎಲ್ಲ ನ್ಯಾಯಮೂರ್ತಿಗಳಿಗೂ ಶುಕ್ರವಾರ (ಏಪ್ರಿಲ್ 19) ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ಈ ಆರೋಪದ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ರಂಜನ್ ಗೊಗೊಯ್, ತಾವು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ಬಳಿ ಲೈಂಗಿಕ ಸಹಕಾರದ ಬೇಡಿಕೆ ಇರಿಸಿದ್ದರು. ಅದಕ್ಕೆ ತಾವು ಒಪ್ಪದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಯಿತು. ಮಾತ್ರವಲ್ಲ, ಪೊಲೀಸ್ ಇಲಾಖೆಯಲ್ಲಿದ್ದ ಪತಿ ಮತ್ತು ಅವರ ಸಹೋದರರನ್ನೂ ನೌಕರಿಯಿಂದ ಕಿತ್ತು ಹಾಕಲಾಯಿತು.
ಇದಾದ ಬಳಿಕ ಎರಡು ವರ್ಷದ ಹಿಂದೆ ಸುಪ್ರೀಂಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಂದ ಹಣ ಪಡೆದುಕೊಂಡಿರುವುದಾಗಿ ಆರೋಪಿಸಿ ದೂರು ದಾಖಲಿಸಿ ಮಾರ್ಚ್ ತಿಂಗಳಿನಲ್ಲಿ ಬಂಧಿಸಿ ಹಿಂಸಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.
ಇದು ಬಹುದೊಡ್ಡ ಪಿತೂರಿ: ಆರೋಪಕ್ಕೆ ರಂಜನ್ ಗೊಗೊಯ್ ಪ್ರತಿಕ್ರಿಯೆ
ಈ ಪ್ರಕರಣದ ಕುರಿತಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಗೊಗೊಯ್, ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸೂಕ್ತ ಅಲ್ಲ ಎಂದು ತಿಳಿಸಿದ್ದಾರೆ.
ಸಿಜೆಐ ವಿರುದ್ಧ ನೀಡಿರುವ ಅಫಿಡವಿಟ್ನಲ್ಲಿ ಮಹಿಳೆ ಏನು ಬರೆದಿದ್ದಾರೆ, ಓದಿ...
|
ಕೆಲಸದಿಂದ ಏಕಾಏಕಿ ವಜಾ
'ಗೌರವಾನ್ವಿತ ಸುಪ್ರೀಂಕೋರ್ಟ್ನಲ್ಲಿ 2014ರ ಮೇ 1ರಿಂದ 2018ರ ಡಿಸೆಂಬರ್ 21ರವರೆಗೂ ಕಿರಿಯ ನ್ಯಾಯಾಲಯ ಸಹಾಯಕಿಯಾಗಿ ನಾನು ಕೆಲಸ ಮಾಡಿದ್ದೇನೆ. ನನ್ನನ್ನು ಸೇವೆಯಿಂದ ಏಕಾಏಕಿ ತೆಗೆದುಹಾಕಲಾಯಿತು. ಇದು ಏಕೆ ಸಂಭವಿಸಿತು ಎಂಬುದನ್ನು ಅತೀವ ಬೇಸರ ಮತ್ತು ಕೋಪದಿಂದ ನಿಮಗೆ ಈ ಪತ್ರದ ಮೂಲಕ, ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಲೈಂಗಿಕ ಕಿರುಕುಳ ಹಾಗೂ ಪರಿಸ್ಥಿತಿಯ ಬಲಿಪಶುವಾದ ವಾಸ್ತವ ಮತ್ತು ಸನ್ನಿವೇಶಗಳನ್ನು ವಿವರಿಸುತ್ತಿದ್ದೇನೆ.
ಪತಿ, ಮೈದುನ ಕೂಡ ಅಮಾನತು
2018ರ ಡಿಸೆಂಬರ್ನಲ್ಲಿ ನನ್ನನ್ನು ಸೇವೆಯಿಂದ ವಜಾಗೊಳಿಸಿರುವುದರ ಹೊರತಾಗಿಯೂ ಬಲಿಪಶುವಾಗಿದ್ದೇನೆ. ಅದೇ ತಿಂಗಳು ದೆಹಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಕಾನ್ಸ್ಟೆಬಲ್ಗಳಾಗಿರುವ ನನ್ನ ಪತಿ ಮತ್ತು ಅವರ ಸಹೋದರರನ್ನು ಕೂಡ ಅಮಾನತು ಮಾಡಲಾಗಿದೆ. ನನ್ನ ಪತಿಯ ಕಿರಿಯ ಸಹೋದರನಿಗೆ ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಯ ಕೋಟಾದಡಿ ಅಕ್ಟೋಬರ್ನಲ್ಲಿ ಗ್ರೂಪ್ ಡಿ ನೌಕರಿ ಕೊಡಿಸಲಾಗಿತ್ತು. ಅವರನ್ನು ಕೂಡ ಯಾವುದೇ ಕಾರಣ ನೀಡದೆ 2019ರ ಜನವರಿಯಲ್ಲಿ ಕಿತ್ತುಹಾಕಲಾಗಿದೆ.
ಎಫ್ಐಆರ್ ದಾಖಲು, ಬಂಧನ
ಇದಲ್ಲದೆ, 2019ರ ಮಾರ್ಚ್ 3ರಂದು ನನ್ನ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಲಾಗಿದೆ. 2017ರಲ್ಲಿ ಕೆಲಸ ಕೊಡಿಸುವುದಾಗಿ ಸುಪ್ರೀಂಕೋರ್ಟ್ ಆವರಣದಲ್ಲಿಯೇ ಝಜ್ಜರ್ ಮೂಲದ ನವೀನ್ ಎಂಬುವವರಿಂದ 50,000 ರೂಪಾಯಿ ಮುಂಗಡ ಪಡೆದುಕೊಂಡಿದ್ದೇನೆ ಎಂದು ಆರೋಪಿಸಲಾಗಿತ್ತು. ಇದರ ಆಧಾರದಲ್ಲಿ ನನ್ನನ್ನು ಆ ರಾತ್ರಿ ಬಂಧಿಸಲಾಗಿತ್ತು. ನನ್ನ ಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ನನ್ನ ಗಂಡನನ್ನು (ಅವರನ್ನು ಬಂಧಿಸದೆ ಇದ್ದರೂ) ಪೊಲೀಸ್ ಕಸ್ಟಡಿಯಲ್ಲಿ ಥಳಿಸಿ ಕೈಕೋಳ ಹಾಕಲಾಗಿತ್ತು. ನನ್ನನ್ನು ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಕಸ್ಟಡಿಯಲ್ಲಿ ತಲಾ ಒಂದು ದಿನ ಇರಿಸಲಾಗಿತ್ತು. ಹೀಗಾಗಿ ನಾನು ಜಾಮೀನು ಪಡೆದುಕೊಳ್ಳಬೇಕಾಯಿತು. ನನ್ನ ಜಾಮೀನು ರದ್ದತಿಗಾಗಿ ಪೊಲೀಸರು ಅರ್ಜಿ ಸಲ್ಲಿಸಿದರು.
ಲೈಂಗಿಕ ಬೇಡಿಕೆಗೆ ಒಪ್ಪದ ಪರಿಣಾಮ
ನನ್ನ ಅಧೀನದಲ್ಲಿದ್ದ ದಾಖಲೆಗಳ ಸಹಿತ ಇಡೀ ಘಟನಾವಳಿಗಳನ್ನು ಅಡಕಗೊಳಿಸಿದ ಅಫಿಡವಿಟ್ನಲ್ಲಿ ವಿವರಿಸಿದ್ದೇನೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಅವರ ಲೈಂಗಿಕ ಬೇಡಿಕೆಗಳಿಗೆ ಒಪ್ಪದ ಕಾರಣಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಸನ್ನಿವೇಶದ ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿರುವ ಸತ್ಯಾಂಶದಲ್ಲಿ ನೀವು ನೋಡಬಹುದು. ನನಗೆ ಮತ್ತು ನನ್ನ ಕುಟುಂಬಕ್ಕೆ ಆಗಬಹುದಾದ ಪರಿಣಾಮಗಳ ಕುರಿತಾದ ಭಯದಿಂದ, ಬೆದರಿಕೆಗಳಿದ್ದ ಕಾರಣದಿಂದ ಇದಕ್ಕೂ ಮೊದಲು ದೂರು ಸಲ್ಲಿಸಲು ಧೈರ್ಯ ಬಂದಿರಲಿಲ್ಲ.
ಆದರೆ, ನಾನು ಮತ್ತು ನನ್ನ ಕುಟುಂಬ ಎದುರಿಸಿದ ಸಂಕಷ್ಟಗಳ ಕುರಿತು ಹಿಂದೆಂದೂ ಕೇಳಿರದಂತೆ ಮತ್ತು ನಿರಂತರ ಬಲಿಪಶುವನ್ನಾಗಿ ಮಾಡಿರುವುದನ್ನು ನೀವೇ ನೋಡಬಹುದು. ಈ ಸಂಗತಿಯನ್ನು ನಿಮ್ಮ ಗಮನಕ್ಕೆ ತರುವಂತೆ ಮನವಿ ಸಲ್ಲಿಸದ ಹೊರತಾಗಿ ನನಗೆ ಬೇರೆ ದಾರಿ ಇರಲಿಲ್ಲ.
ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿ
ಈ ಪತ್ರದ ಮೂಲಕ ನಾನು ಸುಪ್ರೀಂಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಈ ಲೈಂಗಿಕ ಕಿರುಕುಳ ಹಾಗೂ ಪರಿಸ್ಥಿತಿಯ ಬಲಿಪಶುವನ್ನಾಗಿಸಿರುವ ಈ ಆರೋಪಗಳ ಕುರಿತು ವಿಚಾರಣೆ ನಡೆಸಲು ಹಿರಿಯ ನಿವೃತ್ತ ನ್ಯಾಯಮೂರ್ತಿಗಳ ವಿಶೇಷ ವಿಚಾರಣಾ ಸಮಿತಿಯನ್ನು ಸ್ಥಾಪಿಸುವಂತೆ ಕೋರುತ್ತೇನೆ'.