ವೀಕ್ಷಕರ ಸಾಲಲ್ಲಿ ಕೂತು ಮೋದಿ ಮಾತಿಗೆ ತಲೆಯಾಡಿಸಿದ ಅಮರ್ ಸಿಂಗ್!
ಲಕ್ನೋ, ಜುಲೈ 30: ಒಂದಾನೊಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಪ್ರಮುಖ ಮುಖಂಡರಲ್ಲೊಬ್ಬರಾಗಿದ್ದ ಅಮರ್ ಸಿಂಗ್ ಬಿಜೆಪಿ ಸೇರುತ್ತಾರಾ? ಈ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂಥ ಘಟನೆಗಳೂ ನಡೆಯುತ್ತಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಅವರು ಉದ್ಯಮಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲಿ ಅಮರ್ ಸಿಂಗ್ ಅವರೂ ಹಾಜರಿದ್ದರು. "ಯಾರಿಗೆ ಯಾವುದೇ ಕೆಲಸವನ್ನು ಜನರೆದುರಲ್ಲಿ ಮಾಡುವುದಕ್ಕೆ ಧೈರ್ಯವಿಲ್ಲವೋ ಅಂಥವರು ಎಲ್ಲವನ್ನೂ ಪರದೆಯ ಹಿಂದೆ ಮಾಡುತ್ತಾರೆ. ಈ ಕುರಿತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನಿಮಗೆ ಮಾಹಿತಿ ನೀಡುತ್ತಾರೆ. ಅವರು ಇಲ್ಲಿಯೇ ಕುಳಿತಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು. ಇದರಿಂದ ಸಭೆಯಲ್ಲಿದ್ದ ಎಲ್ಲರೂ ಒಮ್ಮೆ ನಕ್ಕರು. ಅಮರ್ ಸಿಂಗ್ ಅವರೂ ನಕ್ಕು ಪ್ರತಿಕ್ರಿಯಿಸಿದರು.
ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ
ಈ ಸಭೆ ನಡೆದ ಒಂದು ಗಂಟೆಯ ನಂತರ ಅಮರ್ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೋದಿ ಗೆಳೆಯರಿಗೆ ಭಾರತೀಯರ 1 ಲಕ್ಷ ಕೋಟಿ: ರಾಹುಲ್ ಆರೋಪ ಏನಿದು?
ಇಬ್ಬರ ನಡುವೆ ನಡೆದ ಮಾತುಕತೆಯ ವಿವರ ಲಭ್ಯವಾಗಿಲ್ಲವಾದರೂ, 2019 ರ ಲೋಕಸಭಾ ಚುನಾವಣೆಗೂ ಮುನ್ನ ಈ ಭೇಟಿ ಮಹತ್ವದ್ದೆನ್ನಿಸಿದೆ. ಅಮರ್ ಸಿಂಗ್ ಉತ್ತರ ಪ್ರದೇಶದ ಪ್ರಭಾವೀ ನಾಯಕರಲ್ಲೊಬ್ಬರು. ಅವರು ಬಿಜೆಪಿ ಪಕ್ಷ ಸೇರಿದ್ದೇ ಆದಲ್ಲಿ ಎಸ್ಪಿ ಸೇರಿದಂತೆ ಇನ್ನಿತರ ವಿರೋಧಪಕ್ಷಗಳಿಗೆ ನಷ್ಟ ಗ್ಯಾರಂಟಿ! ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿರುವುದರಿಂದ ಈ ರಾಜ್ಯ ಬಹಳ ಮಹತ್ವದ್ದೆನ್ನಿಸಿದೆ.