ಶಾಸಕನ ಹತ್ಯೆ, RJD ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ
ಲಖನೌ, ಮೇ 23 : ಬಿಹಾರದ ಮಾಜಿ ಶಾಸಕ ಅಶೋಕ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆಪ್ತ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಗೆ ಹಜಾರಿಯಾಭಾಗ್ ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
9ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಶರ್ಮಾ ಅವರು ಮಂಗಳವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.
ಪ್ರಭುನಾಥ್ ಸಹೋದರ ದೀನನಾಥ್ ಸಿಂಗ್ ಮತ್ತು ಆಪ್ತ ರಿತೇಶ್ ಸಿಂಗ್ ಅವರನ್ನೂ ಅಪರಾಧಿಗಳು ಎಂದು ಮೇ 18ರಂದು ನ್ಯಾಯಾಲಯ ಘೋಷಿಸಿತ್ತು. ತಕ್ಷಣವೇ ಅವರನ್ನು ಬಂಧಿಸಲಾಗಿದ್ದು, ಹಜಾರಿಯಾಭಾಗ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಮಸರಾಖ್ ಶಾಸಕ ಅಶೋಕ್ ಸಿಂಗ್ ಅವರನ್ನು ಪಟ್ನಾದ ಅವರ ಕಚೇರಿ ನಿವಾಸದಲ್ಲಿ 1995ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಭುನಾಥ್ ಮತ್ತು ಅವರ ಸಹಚರರೇ ಕೃತ್ಯ ಎಸಗಿದ್ದಾರೆ ಎಂದು ಅಶೋಕ್ ಅವರ ಸಂಬಂಧಿಕರು ಆರೋಪಿಸಿದ್ದರು.
ಆರಂಭದಲ್ಲಿ ಪಟ್ನಾದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ವಿಚಾರಣೆಯನ್ನು ಹಜಾರಿಯಾಭಾಗ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
2004 ಮತ್ತು 2009ರಲ್ಲಿ ಬಿಹಾರದ ಮಹಾರಾಜ್ಗಂಜ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿದ್ದ ಪ್ರಭುನಾಥ್ ಸಿಂಗ್, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರಿಗೆ ಬಹಳ ಆಪ್ತರಾಗಿದ್ದಾರೆ.