ರಾಜೀವ್ ಗಾಂಧಿ ಹತ್ಯೆಯ ವೇಳೆ ಭಾರೀ ಸಂಚಲನ ಮೂಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಹೇಳಿಕೆ
ಆಗಸ್ಟ್ 16ರಂದು ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಮತ್ತೊಬ್ಬರು ದಿವಂಗತ ಪ್ರಧಾನಿ ರಾಜೀವ್ ಗಾಂಧಿ, ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿ ಇದ್ದಿರಬಹುದು. ಆದರೆ, ರಾಜಕೀಯದಿಂದ ಹೊರತಾಗಿ, ಅಟಲ್ ಬಗ್ಗೆ ರಾಜೀವ್ ಗಾಂಧಿಗೆ ಭಾರೀ ಗೌರವವಿತ್ತು. ರಾಜೀವ್ ಗಾಂಧಿ ನನ್ನ ಕಿರಿಯ ಸಹೋದರ ಎನ್ನುವ ಮಾತನ್ನೂ ಅಟಲ್ ಹೇಳಿದ್ದರು.
ಅಧಿಕಾರ ಇಂದು ಬರುತ್ತೆ, ನಾಳೆ ಹೋಗುತ್ತೆ, ನಾವಿಂದು ಬದುಕಿರುತ್ತೇವೆ, ನಾಳೆ ಸಾಯುತ್ತೇವೆ.. ಆದರೆ ನಮ್ಮ ದೇಶ ಉದ್ದಾರವಾಗಬೇಕು, ಪ್ರಜಾತಂತ್ರ ವ್ಯವಸ್ಥೆ ಬಲಗೊಳ್ಳಬೇಕು ಎನ್ನುವ ವಾಜಪೇಯಿಯವರ ನಿಲುವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿಯಲ್ಲೇ ರಾಜೀವ್ ಗಾಂಧಿ ಪುನರುಚ್ಚರಿಸಿದ್ದರು. ಇದನ್ನು ಖುದ್ದು, ವಾಜಪೇಯಿಯವರೇ ಹಿಂದಿನ ಒಂದು ತನ್ನ ಸಂದರ್ಶನದಲ್ಲಿ ಹೇಳಿದ್ದರು.
ಇತಿಹಾಸದಲ್ಲಿ ಎಂದೂ ನಡೆಯದ್ದನ್ನು ಅಂದು ಅಟಲ್ ಮಾಡಿದ್ದರು!
ಅಡ್ವಾಣಿ ಮೇಲೆ ಇದ್ದಷ್ಟು ಪ್ರೀತಿ ಅಟಲ್ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇರಲಿಲ್ಲ ಎನ್ನುವ ಮಾತು ಆ ವೇಳೆ ಚಾಲ್ತಿಯಲ್ಲಿದ್ದರೂ, ಬಿಜೆಪಿಯ ಸಿದ್ದಾಂತದ ಜೊತೆಗೆ, ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ವಾಜಪೇಯಿ ಎಲ್ಲರ ಪಾಲಿಗೂ ಪ್ರೀತಿಯ 'ಅಟಲ್ ಜೀ' ಆಗಿದ್ದರು. ಅದಕ್ಕೆ, ವಾಜಪೇಯಿ ನಿಧನಕ್ಕೆ ದೇಶಾದ್ಯಂತ ಈ ಮಟ್ಟಿನ ಶೋಕ ವ್ಯಕ್ತವಾಗುತ್ತಿರುವುದು.
ಮೂರು ಬಾರಿ ಪ್ರಧಾನಿಯಾಗಿದ್ದ (13 ದಿನ, 13 ತಿಂಗಳೂ ಸೇರಿ) ವಾಜಪೇಯಿಯವರ ಭಾಷಣ ಸಂಸತ್ತಿನಲ್ಲಿ ಇರುತ್ತದೆ ಎಂದರೆ ಪಕ್ಷಾತೀತವಾಗಿ ಎಲ್ಲಾ ಪಕ್ಷದವರು ಸದನದಲ್ಲಿ ಹಾಜರಿರುತ್ತಿದ್ದರು. ಅಟಲ್ ಭಾಷಣದ ವೇಳೆ, ಸದಾ ಗಿಜಿಗುಟ್ಟುವ ಸಂಸತ್ತಿನ ಕ್ಯಾಂಟೀನ್ ಕೂಡಾ ಖಾಲಿ ಹೊಡೆಯುತ್ತಿತ್ತು ಅಂದರೆ ಅದು ವಾಜಪೇಯಿ ಅವರಿಗಿದ್ದ ವಾಕ್ಚಾತುರ್ಯದ ಶಕ್ತಿ.
'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು
ಶ್ರೀಪೆರಂಬದೂರಿನಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಉಗ್ರರಿಂದ ರಾಜೀವ್ ಗಾಂಧಿ ಹತ್ಯೆಯಾದ ವಿಚಾರದಲ್ಲಿ ತೀವ್ರ ನೋವನ್ನು ವ್ಯಕ್ತಪಡಿಸಿದ್ದ ವಾಜಪೇಯಿ, ನಾನಿಂದು ಬದುಕಿರುವುದೇ ರಾಜೀವ್ ಗಾಂಧಿಯಿಂದ ಎಂದು ಭಾವೋದ್ವೇಗಕ್ಕೆ ಒಳಗಾಗಿ, ಸಂದರ್ಶನವೊಂದರಲ್ಲಿ ಹೇಳಿದ್ದರು. ಸಂದರ್ಶನದ ಇಂಟರೆಸ್ಟಿಂಗ್ ಸಂಗತಿ, ಮುಂದಿದೆ..
ಮೂರುವರೆ ದಶಕಗಳ ಹಿಂದಿನ ಮಾತು, ರಾಜೀವ್ ಗಾಂಧಿ ಹತ್ಯೆ
ಮೂರುವರೆ ದಶಕಗಳ ಹಿಂದಿನ ಮಾತು, 21.05.1991 ರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯಾಗುತ್ತದೆ. ಕೇಂದ್ರದಲ್ಲಿ ಚಂದ್ರಶೇಖರ್ ಪಿಎಂ ಆಗಿರುತ್ತಾರೆ. ಕಾಂಗ್ರೆಸ್ಸೇತರ ವಿ ಪಿ ಸಿಂಗ್ ಮತ್ತು ಚಂದ್ರಶೇಖರ್ ನೇತೃತ್ವದ ಸರಕಾರ ಸುಮಾರು ಒಂದೂವರೆ ವರ್ಷ ಅಧಿಕಾರ ನಡೆಸಿದ ನಂತರ ಪತನಗೊಳ್ಳುತ್ತದೆ, ಚುನಾವಣೆ ಎದುರಾಗುತ್ತದೆ. ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ರಾಜೀವ್ ಗಾಂಧಿಯವರನ್ನು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಎಲ್ಟಿಟಿಇ ಉಗ್ರರು ಹತ್ಯೆಗೈಯುತ್ತಾರೆ. ಆ ಸಂದರ್ಭದಲ್ಲಿ ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿರುತ್ತಾರೆ. ರಾಜೀವ್ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸುತ್ತಾ, ನಾನಿಂದು ಬದುಕಿರಲು ಕಾರಣ ರಾಜೀವ್ ಎಂದು ಸಂದರ್ಶನವೊಂದರಲ್ಲಿ ವಾಜಪೇಯಿ ಹೇಳಿದ್ದರು.
ಅಚಾನಕ್ ನನಗೆ ರಾಜೀವ್ ಗಾಂಧಿಯವರಿಂದ ಕರೆಬಂತು
ರಾಜೀವ್ ಸಾವಿನ ವೇಳೆ ಅಟಲ್ ಮಾತನಾಡುತ್ತಾ, ನಾನಿಂದು ವಿರೋಧ ಪಕ್ಷದ ನಾಯಕ, ಅದರಂತೇ ನಾನು ಕೆಲಸ ನಿರ್ವಹಿಸಬೇಕಾಗುತ್ತದೆ. ಆದರೆ ಈ ಕ್ಷಣದಲ್ಲಿ ನನಗದು ಸಾಧ್ಯವಾಗುತ್ತಿಲ್ಲ. ನನಗೆ ರಾಜೀವ್ ಗಾಂಧಿ ಮಾಡಿದ ಉಪಕಾರವನ್ನು ನಾನು ಸ್ಮರಿಸಿಕೊಳ್ಳಲೇಬೇಕು. 1984-1989 ಅವಧಿಯಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದವರು. ನನಗೆ ಕಿಡ್ನಿ ಸಮಸ್ಯೆ ಇರುವುದು ಅವರಿಗೂ ಗೊತ್ತಿತ್ತು, ವಿದೇಶದಲ್ಲಿ ಇದಕ್ಕೆ ಚಿಕಿತ್ಸೆ ಮಾಡಿಸಬೇಕು ಎನ್ನುವ ವಿಚಾರವನ್ನೂ ಅವರು ಅರಿತಿದ್ದರು. ಒಂದು ದಿನ ಅಚಾನಕ್ ಆಗಿ, ನನಗೆ ರಾಜೀವ್ ಗಾಂಧಿಯವರಿಂದ ಕರೆಬಂದು, ಪ್ರಧಾನಮಂತ್ರಿ ಕಚೇರಿಗೆ ಬರಲು ಸೂಚಿಸಿದರು. ಅದರಂತೇ, ನಾನು ಅಲ್ಲಿಗೆ ಹೋದೆ.
ಇಂದಲ್ಲಾ ನಾಳೆ ನಾವು ದಿಗ್ವಿಜಯ ಸಾಧಿಸುತ್ತೇವೆ: ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದ ಅಟಲ್
ಸಭೆಯಲ್ಲಿ ಭಾಗವಹಿಸಲು ಭಾರತದ ನಿಯೋಗದಲ್ಲಿ ನಿಮ್ಮ ಹೆಸರನ್ನೂ ಸೇರಿಸಿದ್ದೇವೆ
ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ಭಾರತದ ನಿಯೋಗದಲ್ಲಿ ನಿಮ್ಮ ಹೆಸರನ್ನೂ ಸೇರಿಸಿದ್ದೇವೆ ಎಂದರು. ನ್ಯೂಯಾರ್ಕಿಗೆ ಪ್ರಯಾಣಿಸಿದರೆ, ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಆಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು. ಚಿಕಿತ್ಸೆಯೂ ಆಯಿತು. ನ್ಯೂಯಾರ್ಕಿನಿಂದ ನಾನು ಬಂದ ಮೇಲೆ, ಬಹಿರಂಗವಾಗಿ ಎಲ್ಲೂ ರಾಜೀವ್ ವಿಷಯವನ್ನು ಹೇಳಿಕೊಂಡಿರಲಿಲ್ಲ, ರಾಜಕೀಯ ಜೀವನದಲ್ಲಿ ಆಡಳಿತ-ವಿರೋಧ ಪಕ್ಷದವರಂತೆಯೇ ನಾವಿದ್ದೆವು. ಕೆಲವು ದಿನಗಳ ನಂತರ ನಾನು ರಾಜೀವ್ ಗಾಂಧಿಯವರಿಗೆ ಧನ್ಯವಾದದ ಪೋಸ್ಟ್ ಕಾರ್ಡ್ ಕಳುಹಿಸಿಕೊಟ್ಟೆ.
ಕರಣ್ ಥಾಪರ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದು
ರಾಜೀವ್ ಗಾಂಧಿಯ ಹತ್ಯೆಯಾಗುವರೆಗೂ ಅವರು ಈ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಲಿಲ್ಲ, ನಾನಿಂದು ಬದುಕಿದ್ದೇನೆ ಎಂದರೆ ಅದಕ್ಕೆ ರಾಜೀವ್ ಗಾಂಧಿ ಎಂದು ವಾಜಪೇಯಿ, ಪತ್ರಕರ್ತ ಕರಣ್ ಥಾಪರ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು. ರಾಜೀವ್ ಸಾವಿನ ಸಂತಾಪ ಸೂಚಿಸುವ ವೇಳೆ, ಆತ ನನ್ನ ಕಿರಿಯ ಸಹೋದರ ಎಂದು ಅಟಲ್ ಭಾವೋದ್ವೇಗಕ್ಕೆ ಒಳಗಾದ ವಿಚಾರವನ್ನು ಕರಣ್ ಥಾಪರ್ ಸ್ಮರಿಸಿಕೊಂಡಿದ್ದಾರೆ.
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
ಮೇರು ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿಯನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುವುದು, ಅವರ ನಿಷ್ಕಂಳಕ ಮನಸ್ಸಿಗೆ. ಪ್ರಸಕ್ತ ದ್ವೇಷ ರಾಜಕಾರಣದ ಮುಂದೆ, ದೇಶದ ರಾಜಕಾರಣದಲ್ಲಿ ಎಲ್ಲರದ್ದೂ ಒಮ್ದು ತೂಕವಾದರೆ, ಅಟಲ್ ಅವರದ್ದು ಇನ್ನೊಂದು ತೂಕ. ಈ ದೇಶ ಉಳಿಯಬೇಕು, ಪ್ರಜಾತಂತ್ರ ವ್ಯವಸ್ಥೆ ಬಲಗೊಳ್ಳಬೇಕು ಎನ್ನುವ ಅವರ ನಿಲುವು, ಅವರ ಮೇರು ವ್ಯಕ್ತಿತ್ವವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುತ್ತದೆ.