ಸಂಸತ್ತಿನಲ್ಲಿ ಇಂದಿರಾ ಗಾಂಧಿ ಕುಟುಂಬದ ಜೈತ್ರಯಾತ್ರೆ
ರಾಜಕೀಯದಲ್ಲೇ ತಮ್ಮನ್ನು ತೊಡಗಿಸಿಕೊಂಡ ಭಾರತದ ಕುಟುಂಬಗಳಲ್ಲಿ ನೆಹರೂ, ಇಂದಿರಾ ಗಾಂಧಿ ಕುಟುಂಬ ಕೂಡಾ. ಇಂದಿರಾ ಗಾಂಧಿ ಜೊತೆ ಪುತ್ರರಾದ ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೊಸೆಯರಾದ ಸೋನಿಯಾ ಮತ್ತು ಮನೇಕಾ ಗಾಂಧಿ, ಮೊಮ್ಮಕ್ಕಳಾದ ರಾಹುಲ್, ವರುಣ್ ಗಾಂಧಿ ಕೂಡಾ ರಾಜಕೀಯದಲ್ಲೇ ತಮ್ಮ ನೆಲೆಕಂಡು ಕೊಂಡವರು.
ರಾಜಕೀಯ ಪ್ರಭಾವವಿದ್ದ ನೆಹರೂ ಕುಟುಂಬದಲ್ಲಿ ಜನಿಸಿದ ಇಂದಿರಾ ಗಾಂಧಿ, 1966 ರಿಂದ 1977ರ ಅವಧಿಯಲ್ಲಿ ಸತತವಾಗಿ ಮೂರು ಬಾರಿ ಪ್ರಧಾನಿಯಾಗಿದ್ದವರು. 1984ರಲ್ಲಿ ಅವರ ಹತ್ಯೆಯಾಗುವವರೆಗೆ ನಾಲ್ಕುಬಾರಿ ಪ್ರಧಾನಿಯಾಗಿ ಹದಿನೈದು ವರ್ಷಗಳ ಕಾಲ ದೇಶವನ್ನು ಆಳಿದ್ದವರು.
ರಾಜ್ಯಸಭಾ ಸದಸ್ಯೆಯಾಗಿ ಸಂಸತ್ತು ಪ್ರವೇಶಿಸಿದ ಇಂದಿರಾ, 1964ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿ ಕ್ಯಾಬಿನೆಟ್ ಸಚಿವರಾದರು. ಶಾಸ್ತ್ರಿ ಅವರ ಅಕಾಲಿಕ ನಿಧನದಿಂದಾಗಿ ತಮಿಳುನಾಡಿನ ಪ್ರಭಾವಿ ರಾಜಕಾರಣಿಯಾಗಿದ್ದ ಕಾಮರಾಜ್ ಅವರ ಸಹಾಯದೊಂದಿಗೆ ಪ್ರಧಾನಿ ಪಟ್ಟಕ್ಕೇರಿದರು.
ತನ್ನ ಚಾಣಾಕ್ಷ ಮತ್ತು ದಿಟ್ಟ ರಾಜಕೀಯ ನಡೆಯಿಂದ ದೇಶದ ಪ್ರಭಾವಿ ಮಹಿಳೆಯಾಗಿ ಹೊರಹೊಮ್ಮಿದ್ದ ಇಂದಿರಾ ಗಾಂಧಿ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ವ್ಯಾಪಕ ಟೀಕೆಗೊಳಗಾದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1984ರ ಜೂನ್ ನಲ್ಲಿ ದಂಗೆಕೋರರನ್ನು ಬಂಧಿಸಲೆಂದು ಸಿಖ್ಖರ ಪವಿತ್ರ ಸ್ವರ್ಣಮಂದಿರಕ್ಕೆ ಸೇನಾಪಡೆಯನ್ನು ಕಳುಹಿಸಿ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಗೆ ಪ್ರತೀಕಾರವಾಗಿ 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯನ್ನು ಅವರ ಅಂಗರಕ್ಷಕರೇ ಆದ ಸತ್ವಂತ್ ಮತ್ತು ಬಿಯಾಂತ್ ಸಿಂಗ್ ಹತ್ಯೆಗೈದಿದ್ದರು.
ಇಂದಿರಾ ಕುಟುಂಬಕ್ಕೆ ಅಂದಿನಿಂದ ಇಂದಿನವರೆಗೂ ಉತ್ತರಪ್ರದೇಶವೇ ರಾಜಕೀಯ ಕರ್ಮಭೂಮಿ. ಇಂದಿರಾ ಮತ್ತು ಸೊಸೆ ಸೋನಿಯಾ ಗಾಂಧಿ ಕ್ರಮವಾಗಿ ಚಿಕ್ಕಮಗಳೂರು ಮತ್ತು ಬಳ್ಳಾರಿಯಲ್ಲಿ ಒಮ್ಮೆ ಸ್ಪರ್ಧಿಸಿದ್ದನ್ನು ಹೊರತು ಪಡಿಸಿದರೆ ಅವರ ಲೋಕಸಭಾ ಚುನಾವಣೆಯಲ್ಲಿ ಸೋಲು, ಗೆಲುವು ಉತ್ತರಪ್ರದೇಶದಿಂದಲೇ. (ರಾಜಕೀಯದಲ್ಲಿ ಇಂದಿನ ವಿದ್ಯಮಾನಗಳು)
ಇಂದಿರಾ ಗಾಂಧಿ ಇಬ್ಬರು ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ರಾಜಕೀಯದಲ್ಲೇ ತಮ್ಮನ್ನು ತೊಡಗಿಸಿಕೊಂಡವರು. ಇಂದಿರಾ ದುರ್ಮರಣಕ್ಕೀಡಾದ ನಂತರವೂ ಅವರ ಕುಟುಂಬ ರಾಜಕೀಯದಲ್ಲೇ ತಮ್ಮನ್ನು ತೊಡಗಿಸಿಕೊಂಡಿವೆ. ಆದರೆ ರಾಜೀವ್ ಮತ್ತು ಸಂಜಯ್ ಕುಟುಂಬ ಬೇರೆ ಬೇರೆ ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜೀವ್ ಗಾಂಧಿ
ಸಹೋದರ ಸಂಜಯ್ ಗಾಂಧಿ ಸಾವಿನ ನಂತರ ಕಾಂಗ್ರೆಸ್ ಪಕ್ಷದ ತೀವ್ರ ಒತ್ತಡಕ್ಕೆ ಮಣಿದು ರಾಜೀವ್ ಗಾಂಧಿ ರಾಜಕೀಯಕ್ಕೆ ಇಳಿದರು. 1980ರಲ್ಲಿ ಅಮೇಠಿ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದ ರಾಜೀವ್, 1984ರಲ್ಲಿ ಇಂದಿರಾ ಗಾಂಧಿ ಸಾವನ್ನಪ್ಪಿದಾಗ ಅಂತ್ಯಕ್ರಿಯೆಗೆ ಮುನ್ನವೇ ಪ್ರಧಾನಿಯಾಗಿ ಆಯ್ಕೆಯಾದರು. ಅಂದಿನಿಂದ ಸತತವಾಗಿ ನಾಲ್ಕು ಬಾರಿ ಅಮೇಠಿ ಕ್ಷೇತ್ರದಿಂದ ರಾಜೀವ್ ಆಯ್ಕೆಯಾದರು. ಮೇ 1991ರಲ್ಲಿ ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಸಾವನ್ನಪ್ಪಿದರು.
ಸಂಜಯ್ ಗಾಂಧಿ
ತಾಯಿ ಇಂದಿರಾ ಪ್ರಧಾನಿಯಾಗಿದ್ದ ಅವಧಿಯಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿದ್ದ ಸಂಜಯ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರನ್ನೇ ವಿರೋಧ ಕಟ್ಟಿಕೊಂಡಿದ್ದರು. ಜೂನ್ 23, 1980ರಲ್ಲಿ ದೆಹಲಿಯ ಸಫ್ದದರ್ ಜಂಗ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದಾಗ ಸಂಜಯ್, ಅಮೇಠಿ ಕ್ಷೇತ್ರದ ಸಂಸದರಾಗಿದ್ದರು.
ಸೋನಿಯಾ ಗಾಂಧಿ
ಪತಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಪ್ರಧಾನಿ ಹುದ್ದೆ ಸ್ವೀಕರಿಸಲು ಒಪ್ಪದ ಸೋನಿಯಾ, 1996ರ ಚುನಾವಣೆಯಲ್ಲಿ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದಾಗ 1997ರಲ್ಲಿ ಪಕ್ಷದ ಸದಸ್ಯರಾದರು. ಪಕ್ಷದ ಸದಸ್ಯತ್ವ ಪಡೆದ ಕೇವಲ 62 ದಿನಗಳಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1999ರಲ್ಲಿ ಬಳ್ಳಾರಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಸೋನಿಯಾ, ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಆಯ್ಕೆಯಾದರು. ಪ್ರಸಕ್ತ ಚುನಾವಣೆಯಲ್ಲಿ ಮತ್ತೆ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಮನೇಕಾ ಗಾಂಧಿ
ಮಾಜಿ ರೂಪದರ್ಶಿ, ಪರಿಸರವಾದಿ ಮನೇಕಾ ಗಾಂಧಿ ರಾಜಕೀಯಕ್ಕೆ ಬರುವ ಮುನ್ನ ಸೂರ್ಯ ಎನ್ನುವ ಪತ್ರಿಕೆಗೆ ಸಂಪಾದಕರಾಗಿದ್ದರು. ಸಂಜಯ್ ಗಾಂಧಿ ಸಾವನ್ನಪ್ಪಿದ ನಂತರ ಅತ್ತೆ ಇಂದಿರಾ ಜೊತೆ ಮನಸ್ತಾಪದಿಂದ ಮನೆಯಿಂದ ಹೊರಬಂದ ಮನೇಕಾ ರಾಷ್ಟೀಯ ಸಂಜಯ್ ಮಂಚ್ ಎನ್ನುವ ಪಕ್ಷವನ್ನು ಹುಟ್ಟುಹಾಕಿದರು. 1984ರಲ್ಲಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಬಾವ ರಾಜೀವ್ ಗಾಂಧಿ ಎದುರು ಸೋಲು ಅನುಭವಿಸಿದರು. 1996ರಿಂದ 2004ರ ಅವಧಿಯಲ್ಲಿ ಉತ್ತರಪ್ರದೇಶದ ಪಿಲಿಭಿತ್ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಉ.ಪ್ರದೇಶದ ಅನೋಲ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮನೇಕಾ ಮತ್ತೆ ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಪ್ರಿಯಾಂಕ ರಾಬರ್ಟ್ ವಾಧ್ರಾ
ರಾಜಕೀಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳದೇ ಇದ್ದರೂ ತಾಯಿ ಮತ್ತು ಸಹೋದರನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2007ರ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಬ್ ಬರೇಲಿ ಮತ್ತು ಅಮೇಠಿ ಕ್ಷೇತ್ರದ ಪ್ರಚಾರದ ಜವಾಬ್ದಾರಿಯನ್ನು ಪ್ರಿಯಾಂಕ ವಹಿಸಿಕೊಂಡಿದ್ದರು. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆ ತೀವ್ರ ಮುಖಭಂಗ ಅನುಭವಿಸಿತ್ತು.
ರಾಹುಲ್ ಗಾಂಧಿ
ಮಾರ್ಚ್ 2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಇಳಿದ ರಾಹುಲ್, 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿರುವ ರಾಹುಲ್, ಈ ಬಾರಿಯ ಚುನಾವಣೆಯಲ್ಲೂ ಅಮೇಠಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ವರುಣ್ ಗಾಂಧಿ
1999ರ ಲೋಕಸಭಾ ಚುನಾವಣೆಯಲ್ಲಿ ತಾಯಿ ಮನೇಕಾ ಜೊತೆ ವರುಣ್ ಗಾಂಧಿ ಜೊತೆ ಪಿಲಿಭಿತ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2009ರಲ್ಲಿ ಪಿಲಿಭಿತ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಿನಿಂದ ಗೆದ್ದ ವರುಣ್, ಈ ಬಾರಿಯ ಚುನಾವಣೆಯಲ್ಲಿ ಉತ್ತರಪ್ರದೇಶದ ಸುಲ್ತಾನಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.