ತಿರುಪತಿಯಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ದೇವೇಗೌಡ್ರು
Recommended Video
ಮಾಜಿ ಪ್ರಧಾನಿ ದೇವೇಗೌಡರು ಇಂದು(ಮೇ 18) ತಮ್ಮ 86ನೇ ವರ್ಷದ ಹುಟ್ಟು ಹಬ್ಬವನ್ನು ತಿರುಪತಿ ವೆಂಕಟರಮಣನ ಸನ್ನಿಧಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ನಿನ್ನೆ ತಡರಾತ್ರಿ ತಿರುಪತಿಯನ್ನು ತಲುಪಿರುವ ದೇವೇಗೌಡರು ಇಂದು ಅಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ನಡೆಸಲಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ಕುಟುಂಬ ಸಮೇತ ವಿಶೇಷ ವಿಮಾನದಲ್ಲಿ ಅವರು ತಿರುಪತಿಗೆ ಹೊರಟಿದ್ದರು.
ತಿರುಪತಿ ವೆಂಕಟರಮಣನ ಮೊರೆ ಹೋದ ದೇವೇಗೌಡ
ಕೇವಲ ಜನ್ಮದಿನದ ನಿಮಿತ್ತ ಮಾತ್ರವಲ್ಲ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ತಲ್ಲಣಗಳು ಬೇಸರ ಮೂಡಿಸಿವೆ. ಆದ್ದರಿಂದ ಮನಸ್ಸಿನ ನೆಮ್ಮದಿಗಾಗಿ ತಿರುಪತಿಗೆ ತೆರಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
HD Deve Gowda, former Prime Minister and JD(S) chief, visited Tirupati temple last night #AndhraPradesh pic.twitter.com/zUGgQCnVbb
— ANI (@ANI) May 18, 2018
1933, ಮೇ 18 ರಂದು ಹಾಸನದ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಒಕ್ಕಲಿಗೆ ಕುಟುಂಬದಲ್ಲಿ ಜನಿಸಿದ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು, 1953 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ 1962 ರಲ್ಲಿ ಹೊಳೆನರಸಿಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲುವಾಸವನ್ನೂ ಮಾಡಿದ ಗೌಡರು, 1983 ರಿಂದ 1988ರವರೆಗೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ಹಂತ ಹಂತವಾಗಿ ರಾಜಕೀಯವಾಗಿ ಬೆಳೆದ ದೇವೇಗೌಡರು 1994 ರಲ್ಲಿ ಕರ್ನಾಟಕ ರಾಜ್ಯದ 14 ನೇ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಹಲವು ಜನಪರ ಕಾರ್ಯಗಳಿಂದ ಜನಪ್ರಿಯತೆಗಳಿಸಿದರು.
ನಂತರ 1996 ರಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ ದೇವೇಗೌಡ ಅವರನ್ನು ಅನಿರೀಕ್ಷಿತವಾಗಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಯಿತು. ಭಾರತದ 11 ನೇ ಪ್ರಧಾನಿಯಾಗಿ ಕೇವಲ 10 ತಿಂಗಳ ಕಾಲ ಅವರು ಆಡಳಿತ ನಡೆಸಿದರು.
ಇದೀಗ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ದೇವೇಗೌಡರು ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರೂ ಹೌದು.
ಅಪ್ಪಾಜಿ ಕ್ಯಾಂಟೀನ್ ನಲ್ಲಿ ಕೇವಲ 1 ರೂ.!
ದೇವೇಗೌಡರ ಹುಟ್ಟಿದ ದಿನದ ನಿಮಿತ್ತ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಗ್ರಾಹಕರು ಯಾವುದೇ ಆಹಾರ ತೆಗೆದುಕೊಂಡರೂ ಕೇವಲ 1 ರೂಪಾಯಿಯನ್ನಷ್ಟೇ ಬಿಲ್ ಮಾಡಲಾಗುತ್ತದೆ. ಇದು ದೇವೇಗೌಡರ ಹುಟ್ಟಿದ ದಿನಕ್ಕೆ ಅವರ ಅಭಿಮಾನಿಗಳ ಕೊಡುಗೆ.