ಬಿಜೆಪಿಗೆ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಪತ್ರ
ಚೆನ್ನೈ, ಆಗಸ್ಟ್ 25: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಮಂಗಳವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವೃತ್ತಿಯ ಆಕಾಂಕ್ಷೆಯನ್ನು ಪೂರೈಸಿಕೊಳ್ಳಲು ಮುಂದಾಗಿದ್ದಾರೆ.
ತಮಿಳುನಾಡಿನ ಜನರಲ್ಲಿ ಬಿಜೆಪಿ ಬಗ್ಗೆ ತಪ್ಪು ಅಭಿಪ್ರಾಯವನ್ನು ಬಿತ್ತಲಾಗಿದೆ. ತಮಿಳುನಾಡಿನ ಜನರು ಪರಿಗಣಿಸಿರುವಂತೆ ಬಿಜೆಪಿ ಇಲ್ಲ. ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲಿ ಬಿಜೆಪಿಯ ಚಟುವಟಿಕೆಗಳನ್ನು ನೋಡಿದ್ದೇನೆ. ಇಲ್ಲಿ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಪ್ರಜಾಪ್ರಭುತ್ವದ ನೀತಿಯಡಿ ರಾಜ್ಯ ಘಟಕಗಳ ಚಟುವಟಿಕೆಗಳು ನಡೆಯುತ್ತಿವೆ ಎಂದು ಅಣ್ಣಾಮಲೈ ಹೇಳಿದ್ದರು.
ಬಿಜೆಪಿ ಸೇರ್ಪಡೆಯಾದ ಬಳಿಕ ಅವರು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಕನ್ನಡ, ತಮಿಳು ಮತ್ತು ಇಂಗ್ಲಿಷ್ನಲ್ಲಿ ಬರೆದಿರುವ ಅವರ ಪತ್ರದ ಸಾರಾಂಶ ಇಲ್ಲಿದೆ.
ಬಿಜೆಪಿಗೆ ನಾನು ಸ್ವಾಭಾವಿಕವಾಗಿ ಸೂಕ್ತ: 'ಸಿಂಗಂ' ಅಣ್ಣಾಮಲೈ
ನಾನು ಇಂದು ನವದೆಹಲಿಯಲ್ಲಿ ಔಪಚಾರಿಕವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಭಾರತದೆಡೆಗಿನ ದೃಷ್ಟಿಕೋನ ಮತ್ತು ಕ್ರಿಯಾತ್ಮಕ ನಾಯಕತ್ವ ಯಾವಾಗಲೂ ನನ್ನನ್ನು ಆಕರ್ಷಿಸಿದೆ. ಪ್ರಧಾನಿ ಅವರ ಆಡಳಿತದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ದೇಶವಾಗಿ ಬೆಳೆಯುತ್ತಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಮುಂದೆ ಓದಿ.
ರೈತರ ಹೆಗಲಿಗೆ ಹೆಗಲು
ಕೋಟ್ಯಂತರ ಜನರನ್ನು ಬಡತನದಿಂದ ಮೇಲೆತ್ತಲು ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದೇವೆ. ಆಂತರಿಕ ಭದ್ರತಾ ವಿಚಾರಗಳಲ್ಲಿ ಎಂದಿಗೂ ರಾಜಿಯಾಗಿಲ್ಲ. ನಮ್ಮ ರೈತರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ನಮ್ಮ ಅನುಕೂಲಕರ ಕಾರ್ಯನೀತಿಯನ್ನು ಸೃಷ್ಟಿಸುವುದರ ಮೂಲಕ ಮಧ್ಯಮ ವರ್ಗದ ಉನ್ನತಿಗೆ ಸಹಕರಿಸಿದ್ದೇವೆ ಎಂದಿದ್ದಾರೆ.
ಪರಿಶ್ರಮ ಮುಂದುವರಿಸಿದೆ
ಸಾಮಾನ್ಯ ವ್ಯಕ್ತಿ ಮತ್ತು ಆತನ ಆಶೋತ್ತರಗಳನ್ನು ಎತ್ತಿಹಿಡಿಯುವ ಪಕ್ಷವೊಂದರ ಸದಸ್ಯನಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ಪಕ್ಷವು ಯಾವಾಗಲೂ ನಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ತನ್ನ ಎಲ್ಲ ನಿರೂಪಣೆಯ ಕೇಂದ್ರ ವಿಷಯವನ್ನಾಗಿಟ್ಟುಕೊಂಡಿದ್ದು, ನಾವೆಲ್ಲರೂ ಹೆಮ್ಮೆ ಪಡುವಂತಹ ದೇಶವೊಂದನ್ನು ನಿರ್ಮಿಸುವತ್ತ ತನ್ನ ಪರಿಶ್ರಮವನ್ನು ಮುಂದುವರಿಸುತ್ತಿದೆ.
ಬಿಜೆಪಿ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ
ತಮಿಳುನಾಡಿಗೆ ಸೇವೆ ಸಲ್ಲಿಸುವ ಅವಕಾಶ
ಐಎಎಸ್ ಅಧಿಕಾರಿಯಾಗಿ ಕರ್ನಾಟಕದ ಜನರು ಮತ್ತು ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆ ನನ್ನದಾಗಿದೆ. ಈಗ ನನ್ನ ರಾಜ್ಯವಾದ ತಮಿಳುನಾಡು ಮತ್ತು ನನ್ನ ರಾಷ್ಟ್ರಕ್ಕೆ ಪಕ್ಷವು ಅದರ ಜತೆಗೂಡಿ ಸೇವೆಯನ್ನು ಮಾಡುವ ಮತ್ತೊಂದು ಅವಕಾಶವನ್ನು ಒದಗಿಸಿಕೊಟ್ಟಿದೆ.
ಅಳಿಲುಸೇವೆಗೆ ಸಿದ್ಧ
ನವದೆಹಲಿಯಲ್ಲಿ ಸೂಕ್ತ ನಾಯಕರ ಮುಂದಾಳತ್ವದಲ್ಲಿ ದೇಶದ ಭವಿಷ್ಯವು ಉಜ್ವಲವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ಮೋದಿಯವರ ನಾಯಕತ್ವದಲ್ಲಿ ನಮ್ಮ ದೇಶವು ತನ್ನ ನ್ಯಾಯಸಮ್ಮತ ನಿರ್ದಿಷ್ಟ ಸ್ಥಾನವನ್ನು ತಲುಪುವುದನ್ನು ನೋಡುವುದರಲ್ಲಿ ನಾನು ಉತ್ಸುಕನಾಗಿದ್ದೇನೆ. ನಮ್ಮ ದೇಶದ ಸರ್ವೋತ್ಕೃಷ್ಟತೆ ಇನ್ನೂ ಆಗುವುದರಲ್ಲಿದೆ ಮತ್ತು ಆ ಮಹತ್ಸಾಧನೆಯ ಸಂಭವದ ಕಾರ್ಯದಲ್ಲಿ ನನ್ನ ಅಳಿಲುಸೇವೆ ಮಾಡಲು ಪ್ರಾಮಾಣಿಕವಾಗಿ ಬಯಸುತ್ತೇನೆ ಎಂದು ಬರೆದಿದ್ದಾರೆ.