ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ, ಸಂಸತ್ ಚುನಾವಣೆಗೆ ಸ್ಪರ್ಧೆ?
Recommended Video
ಬೆಂಗಳೂರು, ಮೇ 26: ಕರ್ನಾಟಕದ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಸಂಪೂರ್ಣ 5 ವರ್ಷಗಳ ಆಡಳಿತ ನೀಡಿ ಸದ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜಕಾರಣದಲ್ಲಿ ತೆರೆ ಮರೆಗೆ ಸರಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರಾಜಕಾರಣಕ್ಕೆ ತೆರಳಲಿದ್ದಾರಾ? ಹೌದು ಎನ್ನುತ್ತಿವೆ ವರದಿಗಳು.
ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸ್ವತಃ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನಿಸಿದ್ದಾರಂತೆ. ಈ ಸಂಬಂಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧವಾಗಿರುವಂತೆ ಅವರಿಗೆ ಸೂಚನೆ ನೀಡಲಾಗಿದೆಯಂತೆ.
ಹೆಗಲ ಮೇಲೆ ಕೈ ಹಾಕಿದ ಸಿದ್ದುಗೆ ಕಮಲ್ ಕೊಟ್ಟ ಉತ್ತರವೇನು?
ಮೈಸೂರು ಅಥವಾ ಕೊಪ್ಪಳದಿಂದ ಸ್ಪರ್ಧೆ?
ಒಂದೊಮ್ಮೆ ಇದಕ್ಕೆ ಸಿದ್ದರಾಮಯ್ಯ ಒಪ್ಪಿಕೊಂಡರೆ ಮೈಸೂರು-ಕೊಡಗು, ಅಥವಾ ಕೊಪ್ಪಳದಿಂದ ಸಿದ್ದರಾಮಯ್ಯರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ಹಿಂದೆ 1991ರಲ್ಲಿ ಕೊಪ್ಪಳದಲ್ಲಿ ಸಿದ್ದರಾಮಯ್ಯ ಕಣಕ್ಕಿಳಿದು 11,197 ಮತಗಳಿಂದ ಸೋತಿದ್ದರು.
ಇನ್ನು ಮೈಸೂರಿನಲ್ಲಿ ಈ ಹಿಂದೆ ಸ್ಪರ್ಧಿಸುತ್ತಿದ್ದ ಎಚ್. ವಿಶ್ವನಾಥ್ ಜೆಡಿಎಸ್ ಗೆ ಹೋಗಿರುವುದರಿಂದ ಅಲ್ಲಿಯೂ ಹೊಸ ಅಭ್ಯರ್ಥಿಗೆ ಜಾಗವಿದೆ. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಸಿದ್ದರಾಮಯ್ಯನವರನ್ನು ನಿಲ್ಲಿಸುವ ಸಾಧ್ಯತೆಯೂ ಇದೆ.
ರಾಷ್ಟ್ರ ರಾಜಕಾರಣಕ್ಕೆ ಯಾಕೆ?
ಸದ್ಯ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರಿಗೆ ಕೊಡಲು ಕಾಂಗ್ರೆಸ್ ಬಳಿ ಯಾವುದೇ ಹುದ್ದೆಗಳಿಲ್ಲ. ಉಳಿದಿರುವುದು ಕೆಪಿಸಿಸಿ ಅಧ್ಯಕ್ಷ ಗಾದಿ ಮಾತ್ರ. ಆದರೆ ಇದಕ್ಕೆ ಸಿದ್ದರಾಮಯ್ಯನವರೇ ಒಲ್ಲೆ ಎಂದಿದ್ದಾರೆ ಎಂಬ ವರದಿಗಳಿವೆ. ಜೊತೆಗೆ ಈ ಹುದ್ದೆ ಮೇಲೆ ಡಿ.ಕೆ. ಶಿವಕುಮಾರ್ ಕಣ್ಣಿಟ್ಟಿದ್ದಾರೆ.
ಇದಲ್ಲದೆ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾಗುವುದು ಕೆಲವು ಕಾಂಗ್ರೆಸಿಗರಿಗೂ ಇಷ್ಟವಿಲ್ಲ. ಹೀಗಾಗಿ ಅವರಿಗೆ ಆ ಹುದ್ದೆ ಸಿಗುವುದು ಅನುಮಾನ. ಸದ್ಯಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರಿಗೆ ತಾತ್ಕಾಲಿಕ ಹುದ್ದೆ ನೀಡಲಾಗಿದೆ. ಆದರೆ ಆಡಳಿತ ಪಕ್ಷದ ಶಾಸಕಾಂಗ ಪಕ್ಷದ ನಾಯಕರಿಗೆ ಹೇಳಿಕೊಳ್ಳುವಂತ ಯಾವ ಕೆಲಸಗಳೂ ಇಲ್ಲ.
ಪ್ರಬಲ ನಾಯಕ
ಇವೆಲ್ಲದರ ಆಚೆಗೆ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸೂಕ್ತವಾಗಿ ಬಳಸಿಕೊಳ್ಳುವ ಯೋಜನೆಯನ್ನು ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಂಡಂತೆ ಕಾಣಿಸುತ್ತಿದೆ. ರಾಜ್ಯ ಚುನಾವಣೆ ವೇಳೆ ಜೆಡಿಎಸ್ ನಾಯಕರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಆದಿಯಾಗಿ ಎಲ್ಲರೂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರೂ ಅವರು ಅದಕ್ಕೆಲ್ಲಾ ಜಗ್ಗದೆ ತಕ್ಕ ಉತ್ತರ ನೀಡುತ್ತಾ ಬಂದಿದ್ದರು. ಇಂಥಹದ್ದೊಂದು ಇಮೇಜ್ ಇರುವ ನಾಯಕ ಕಾಂಗ್ರೆಸ್ ಗೆ ಸದ್ಯಕ್ಕೆ ಬೇಕಾಗಿದೆ.
ರಾಜ್ಯಕ್ಕೆ ಖರ್ಗೆ ವಾಪಸ್?
ಇನ್ನೊಂದು ಕಡೆ ಅವರು ರಾಜ್ಯ ರಾಜಕಾರಣಲ್ಲಿರುವುದು ಬೇಡ. ಕೇಂದ್ರಕ್ಕೆ ಕರೆಸಿಕೊಳ್ಳಿ ಎಂದು ಪರಮೇಶ್ವರ್ ಮತ್ಯು ಡಿಕೆ ಶಿವಕುಮಾರ್ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಎಲ್ಲಾ ಕಾರಣಗಳಿಗಾಗಿ ಸಿದ್ದರಾಮಯ್ಯ ಕೇಂದ್ರ ರಾಜಕಾರಣಕ್ಕೆ ಹೋದರೆ ಅಚ್ಚರಿಯಿಲ್ಲ.
ಅತ್ತ ಕೇಂದ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ತೆರಳಲಿದ್ದಾರೆ ಎಂಬ ಚರ್ಚೆಗಳ ಮಧ್ಯೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ವಾಪಾಸಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಮೈತ್ರಿ ಸರಕಾರದಲ್ಲಿ ಖರ್ಗೆ ಸಿಎಂ?
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಸುಸೂತ್ರವಾಗಿ ನಡೆದರೆ ಎರಡೂವರೆ ವರ್ಷ ಬಿಟ್ಟು ಸಿಎಂ ಗಾದಿ ಮೇಲೆ ಖರ್ಗೆಯವರನ್ನು ಕೂರಿಸುವ ಚಿಂತನೆಯನ್ನೂ ಕಾಂಗ್ರೆಸ್ ಹೊಂದಿದೆ. ಈ ಮೂಲಕ ಸಿಎಂ ಹುದ್ದೆಗೇರುವ ಖರ್ಗೆ ಕನಸು ಮತ್ತು ದಲಿತರನ್ನು ಸಿಎಂ ಮಾಡಿದ ಕ್ರೆಡಿಟ್ ತೆಗೆದುಕೊಳ್ಳುವುದು ಕಾಂಗ್ರೆಸ್ ಯೋಜನೆ.
ಆದರೆ ಇದೇ ನನ್ನ ಕೊನೆಯ ಚುನಾವಣೆ. ಬ್ರಹ್ಮ ಬಂದು ಹೇಳಿದರೂ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ನಿಲ್ಲುತ್ತಾರಾ? ಕೇಂದ್ರ ರಾಜಕಾರಣಕ್ಕೆ ತೆರಳುತ್ತಾರಾ ಎಂಬುದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ.