ಕೊರೊನಾ: ಎಚ್ದಿಕೆ ಟ್ವೀಟ್ ಗೆ ಶ್ರೀರಾಮುಲು ಪ್ರತಿಕ್ರಿಯೆ, ಕುಮಾರಣ್ಣ ಬೌನ್ಸ್ ಬ್ಯಾಕ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್ ಗೆ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಅದಕ್ಕೆ ಕುಮಾರಣ್ಣ ಮತ್ತೆ ಖಾರವಾಗಿ ಸಾಲುಸಾಲು ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ನಿಂದಾಗಿ ರಾಜ್ಯ ಬಹುತೇಕ ಸ್ಥಬ್ದಗೊಂಡಿರುವ ಈ ಹೊತ್ತಿನಲ್ಲಿ ಸರಕಾರ, ಯಾವರೀತಿ ಕೆಲಸ ಮಾಡಬೇಕೆಂದು ಕುಮಾರಸ್ವಾಮಿ ಸಲಹೆಯನ್ನು ನೀಡುತ್ತಾ, ಇಬ್ಬರು ಸಚಿವರು ಒಗ್ಗಟ್ಟಿನ್ನಿಂದ ಕೆಲಸ ಮಾಡಬೇಕೆಂದು ಟ್ವೀಟ್ ಮಾಡಿದ್ದರು.
ಸರ್ಕಾರಕ್ಕೆ ಕುಮಾರಸ್ವಾಮಿ ಟ್ವೀಟ್ ಪಾಠ
ಕುಮಾರಸ್ವಾಮಿಯವರ ಟ್ವೀಟ್ ಗೆ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಮತ್ತೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, "ಇದು ರಾಜಕೀಯ ಮಾಡುವ ವಿಚಾರವಲ್ಲ" ಎಂದು ಇತರ ಕೆಲವು ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ.
"ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಪರಿವರ್ತನೆಯಾಗಿ ಜನಜೀವನ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ
ಕುಮಾರಸ್ವಾಮಿ ಮಾಡಿದ ಮೊದಲ ಟ್ವೀಟ್
ಇದು ಕುಮಾರಸ್ವಾಮಿ ಮಾಡಿದ್ದ ಮೊದಲ ಟ್ವೀಟ್, "ಕೊರೊನಾ ವೈರಸ್ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ".
ಶ್ರೀರಾಮುಲು ಪ್ರತಿಕ್ರಿಯೆ
ಎಚ್ಡಿಕೆ ಟ್ವೀಟ್ ಗೆ ಶ್ರೀರಾಮುಲು, "ಮಾನ್ಯ ಕುಮಾರಸ್ವಾಮಿಯವರೇ, ನಾನು ಹಾಗೂ ಸುಧಾಕರ್ ಅವರು ಜೊತೆಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ತಮ್ಮ ಗೊಂದಲದಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚೆಗೆ ಹೆಚ್ಚಾಗಿ ಗೊಂದಲದಲ್ಲಿರುವ ತಾವು, ಜನರನ್ನು ಗೊಂದಲಕ್ಕೆ ದೂಡುವ ಕೆಲಸಕ್ಕೆ ಕೈಹಾಕದಿರಿ ಎಂದು ವಿನಂತಿಸುತ್ತೇನೆ" ಎಂದು ಕುಟುಕಿದ್ದರು.
ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಕರ್ತವ್ಯ
ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, "ವಿರೋಧ ಪಕ್ಷದ ನಾಯಕನಾದ ನಾನು ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಕರ್ತವ್ಯ, ನನ್ನ ಹಕ್ಕು. ಮತ್ತು, ಅದೇ ವೃತ್ತಿ ಧರ್ಮ. ರಾಜಕೀಯ ಮಾಡಲು ಬೇರೆ ಅವಕಾಶಗಳಿವೆ. ಅಲ್ಲಿ ಮಾಡೋಣ. ಈಗಲೂ ಹೇಳುತ್ತಿದ್ದೇನೆ ಇದು ನನ್ನ ಸಲಹೆ. ಇದರಲ್ಲಿಯೂ ರಾಜಕೀಯ ಹುಡುಕುವವರನ್ನು 'ಪ್ರಚಾರ ಪ್ರಿಯ'ರಷ್ಟೇ".
ಬಿಎಸ್ವೈ ಪ್ರಶ್ನಿಸಿದ ಕುಮಾರಸ್ವಾಮಿ
ಮತ್ತೊಂದು ಟ್ವೀಟ್ ನಲ್ಲಿ ಕುಮಾರಸ್ವಾಮಿ, "ಕೊರೋನಾ ವೈರಸ್ ಕುರಿತು ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದೆ. ಇದರಲ್ಲಿ ರಾಜಕೀಯ ಹುಡುಕಿರುವ ಸಚಿವರೊಬ್ಬರು ಸರ್ಕಾರ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದಾಗಿ ಹೇಳಿದ್ದಾರೆ. ಸರಿ, ಸಿಎಂ ಬಿಎಸ್ವೈ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗದೇ ನಿಯಮ ಉಲ್ಲಂಘಿಸಿದ್ದು ಯಾವ ಕ್ರಮ?" ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.