ನೈತಿಕ ನೆಲೆಗಟ್ಟು ಕಳೆದುಕೊಂಡ ಬಿಜೆಪಿ, ಯಶವಂತ್ ಸಿನ್ಹಾ ವಾಗ್ದಾಳಿ
ಪಾಟ್ನಾ, ಅಕ್ಟೋಬರ್ 11: ದೇಶದ ಆರ್ಥಿಕ ಸ್ಥಿತಿಯನ್ನು ಕೇಂದ್ರ ಸರಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವ ಮೂಲಕ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬುಧವಾರ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ತನ್ನ ನೈತಿಕ ನೆಲೆಗಟ್ಟನ್ನು ಕಳೆದುಕೊಂಡಿದೆ ಎಂದಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಗ ಜಯ್ ಶಾನ ಕಂಪನಿಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಕ್ಕೆ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಕುಲಗೆಡಿಸಿದ ಜೇಟ್ಲಿ: ಸ್ವಪಕ್ಷೀಯರಿಂದಲೇ ಟೀಕೆ
ಈ ವಿಚಾರದಲ್ಲಿ ಬಿಜೆಪಿಯು ಹಲವು ತಪ್ಪುಗಳನ್ನು ಎಸಗಿದೆ. ಸರಕಾರದ ಹಿರಿಯ ಸಚಿವರು ಅಮಿತ್ ಶಾ ಮಗನ ಸಮರ್ಥನೆಗೆ ನಿಂತರು. ಸರಕಾರದ ಹಿರಿಯ ವಕೀಲರಾದ ತುಷಾರ್ ಮೆಹ್ತಾ ನ್ಯಾಯಾಲಯದಲ್ಲಿ ಜಯ್ ಶಾ ಪರ ವಕಾಲತ್ತು ವಹಿಸಲು ನಿಂತರು ಎಂದು ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಯ್ ಶಾ ಒಡೆತನದ ಕಂಪನಿಯು ಹದಿನಾರು ಸಾವಿರ ಪಟ್ಟು ಹೆಚ್ಚು ಲಾಭವನ್ನು ಘೋಷಿಸಿದೆ. ಇದು ಅನುಮಾನಾಸ್ಪದವಾಗಿದೆ ಎಂದು 'ದ ವೈರ್' ಸುದ್ದಿ ವೆಬ್ ಸೈಟ್ ವರದಿ ಮಾಡಿತ್ತು. ಆ ನಂತರ ಜಯ್ ಶಾ ಅವರು ವೆಬ್ ಸೈಟ್ ವಿರುದ್ಧ ನೂರು ಕೋಟಿ ರುಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
"ಇಂಧನ ಸಚಿವಾಲಯವು ಜಯ್ ಶಾಗೆ ಸಾಲ ನೀಡಿದ ರೀತಿ, ಮತ್ತು ಸಚಿವ ಪಿಯೂಷ್ ಗೋಯಲ್ ಅವರು ಜಯ್ ಶಾ ಸಮರ್ಥನೆಗೆ ಮುಂದಾದ ರೀತಿ ಇವೆಲ್ಲ ಏನೋ ತಪ್ಪಾಗಿದೆ ಎಂಬ ಭಾವನೆ ಮೂಡಿಸುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.
'ದಿ ವೈರ್' ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಜಯ್ ಶಾ
ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್ ನಲ್ಲಿ ಖಾಸಗಿ ವ್ಯಕ್ತಿಯೊಬ್ಬರನ್ನು ಪ್ರತಿನಿಧಿಸುವಂಥದ್ದು ಈ ಹಿಂದೆ ಎಂದೂ ಆಗಿಲ್ಲ ಎಂದು ಯಶವಂತ್ ಸಿನ್ಹಾ ಪಾಟ್ನಾದಲ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ತಾ, ಕಾನೂನು ಸಚಿವಾಲಯದಿಂದ ಒಪ್ಪಿಗೆ ಪಡೆದ ನಂತರವೇ ಜಯ್ ಶಾಗೆ ಕಾನೂನು ಸಲಹೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
"ಈ ಪ್ರಕರಣದಲ್ಲಿ ಸರಕಾರದ ಹಲವು ಇಲಾಖೆಗಳು ಇವೆ. ಆದ್ದರಿಂದ ಈ ಬಗ್ಗೆ ತನಿಖೆಗೆ ಆದೇಶಿಸಬೇಕು" ಎನ್ನುವ ಮೂಲಕ ವಿರೋಧ ಪಕ್ಷಗಳು ಮಾಡುತ್ತಿರುವ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ.